ಇರಾನ್ನ ಕಠಿಣ ನಿಲುವು, ಹಾರ್ಮುಜ್ ಜಲಸಂಧಿಯ ದಿಗ್ಬಂಧನದ ಆರ್ಥಿಕ ಪರಿಣಾಮಗಳು ಮತ್ತು ಲೆಬನಾನ್ನಲ್ಲಿ ಮುಂದುವರಿದಿರುವ ಇಸ್ರೇಲ್ನ ಸೇನಾ ಕಾರ್ಯಾಚರಣೆಯು ಯುದ್ಧದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ಭೌಗೋಳಿಕ-ರಾಜಕೀಯ ಮೇಲಾಟದಲ್ಲಿ ಅಮಾಯಕ ನಾಗರಿಕರು ಬಲಿಯಾಗುತ್ತಿದ್ದಾರೆ
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಮತ್ತಷ್ಟು ದಟ್ಟವಾಗಿ ಆವರಿಸಿವೆ. “ಯುದ್ಧವು ಬಹುತೇಕ ಮುಕ್ತಾಯದ ಹಂತದಲ್ಲಿದೆ” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕ ಮಟ್ಟದಲ್ಲಿ ಭರವಸರಯ ಸಂದೇಶ ಸಾರಿದ್ದರೂ, ರಣರಂಗದ ವಾಸ್ತವ ಚಿತ್ರಣವೂ ಸಂಪೂರ್ಣ ತದ್ವಿರುದ್ದವಾಗಿದೆ. ಟ್ರಂಪ್ ಅವರ ಈ ಹೇಳಿಕೆಯ ಬೆನ್ನಲ್ಲೇ, “ಯುದ್ಧವನ್ನು ಯಾವಾಗ ಮತ್ತು ಹೇಗೆ ತೀರ್ಮಾನಿಸಬೇಕು ಎನ್ನುವುದನ್ನು ಅಮೆರಿಕವಲ್ಲ, ನಾವು ನಿರ್ಧರಿಸುತ್ತೇವೆ” ಎಂದು ಇರಾನ್ ಕಟುವಾಗಿ ತಿರುಗೇಟು ನೀಡಿದೆ.
ಒಂದೆಡೆ, ಟ್ರಂಪ್ ಅವರು ತಮ್ಮ ರಾಜತಾಂತ್ರಿಕ ಪ್ರಭಾವ ಬಳಸಿ ಶೀಘ್ರವೇ ಯುದ್ಧವನ್ನು ಕೊನೆಗಾಣಿಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಬೆಟ್ಟಿಂಗ್ ಮಾರುಕಟ್ಟೆಗಳಲ್ಲಿ ಭಾರಿ ನಿರೀಕ್ಷೆಗಳು ವ್ಯಕ್ತವಾಗುತ್ತಿವೆ. ಜಾಗತಿಕ ಮಟ್ಟದ ಹೂಡಿಕೆದಾರರು ಮತ್ತು ರಾಜಕೀಯ ವಿಶ್ಲೇಷಕರು ಅವರ ನಾಯಕತ್ವದ ಮೇಲೆ ಭರವಸೆ ಇಟ್ಟಿದ್ದು, ಯುದ್ಧ ನಿಲ್ಲುವ ಪರವಾಗಿ ಭಾರಿ ಬಾಜಿ ಕಟ್ಟಲಾಗುತ್ತಿದೆ. ಆದರೆ, ಮತ್ತೊಂದೆಡೆ ಇರಾನ್ ಮೇಲಿನ ಇಸ್ರೇಲ್ ಮತ್ತು ಮಿತ್ರಪಡೆಗಳ ಸೇನಾ ದಾಳಿಗಳು ಹಿಂದೆಂದಿಗಿಂತಲೂ ತೀವ್ರಗೊಂಡಿವೆ. ಈ ತೀವ್ರತರವಾದ ಆಕ್ರಮಣವು ಶಾಂತಿ ಮಾತುಕತೆಯ ಸಾಧ್ಯತೆಗಳನ್ನು ಮಂಕಾಗಿಸಿದೆ.
ತಮ್ಮ ಸಾರ್ವಭೌಮತ್ವದ ಮೇಲೆ ನಡೆಯುತ್ತಿರುವ ನಿರಂತರ ಆಕ್ರಮಣಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಇರಾನ್ ರಕ್ಷಣಾ ಪಡೆಗಳು ಸನ್ನದ್ಧವಾಗಿವೆ. ಇಸ್ರೇಲ್ ದಾಳಿಗಳು ಸಂಪೂರ್ಣವಾಗಿ ನಿಲ್ಲುವವರೆಗೂ ಜಾಗತಿಕ ತೈಲ ಪೂರೈಕೆಯ ಅತ್ಯಂತ ಪ್ರಮುಖ ಕೇಂದ್ರವಾದ ‘ಹಾರ್ಮುಜ್ ಜಲಸಂಧಿ’ಯನ್ನು ಯಾವುದೇ ಕಾರಣಕ್ಕೂ ತೆರೆಯುವುದಿಲ್ಲ ಎಂದು ಇರಾನ್ ಖಡಕ್ ಎಚ್ಚರಿಕೆ ನೀಡಿದೆ. ಪ್ರಪಂಚದ ಒಟ್ಟು ತೈಲ ಪೂರೈಕೆಯ ಪೈಕಿ ಶೇ. 20ಕ್ಕೂ ಹೆಚ್ಚು ತೈಲ (ಅಂದಾಜು ದಿನಕ್ಕೆ 21 ಮಿಲಿಯನ್ ಬ್ಯಾರೆಲ್) ಇದೇ ಮಾರ್ಗದಲ್ಲಿ ಸಾಗಾಣಿಕೆಯಾಗುತ್ತದೆ. ಇರಾನ್ನ ಈ ದಿಗ್ಬಂಧನವು ವಿಶ್ವಾದ್ಯಂತ ತೈಲ ಬೆಲೆಯಲ್ಲಿ ದಿಢೀರ್ ಏರಿಕೆಗೆ ಕಾರಣವಾಗಲಿದ್ದು, ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯನ್ನು ಹುಟ್ಟುಹಾಕಿದೆ. ಯುದ್ಧವನ್ನು ನಿಲ್ಲಿಸಲು ಪಾಶ್ಚಿಮಾತ್ಯ ದೇಶಗಳ ಮೇಲೆ ಒತ್ತಡ ಹೇರುವ ಪ್ರಬಲ ಅಸ್ತ್ರವಾಗಿ ಇರಾನ್ ಈ ಜಲಸಂಧಿಯನ್ನು ಬಳಸಿಕೊಳ್ಳುತ್ತಿದೆ.
ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಸತತ ವಾಯುದಾಳಿಗಳಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಟೆಹರಾನ್, ಇಸ್ಪಹಾನ್ನಂತಹ ಪ್ರಮುಖ ನಗರಗಳ ಮೇಲೆ ನಿರಂತರವಾಗಿ ಸ್ಫೋಟಕಗಳ ಸುರಿಮಳೆಯಾಗುತ್ತಿದೆ. ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ದಾಳಿಗಳು ವಸತಿ ಪ್ರದೇಶಗಳ ಮೇಲೂ ಭಾರಿ ಪರಿಣಾಮ ಬೀರುತ್ತಿವೆ. ಪ್ರಾಣಭೀತಿಯಿಂದ ಕಂಗಾಲಾಗಿರುವ ಸಾವಿರಾರು ಜನರು ತಮ್ಮ ಮನೆ, ಆಸ್ತಿ- ಪಾಸ್ತಿಗಳನ್ನು ತೊರೆದು, ಹೆಚ್ಚು ಅಪಾಯಕಾರಿಯಲ್ಲದ ಗ್ರಾಮೀಣ ಪ್ರದೇಶಗಳತ್ತ ಗುಳೆ ಹೋಗುತ್ತಿದ್ದಾರೆ. ರಾಷ್ಟ್ರದ ಪ್ರಮುಖ ಹೆದ್ದಾರಿಗಳಲ್ಲಿ ವಾಹನಗಳ ದಟ್ಟಣೆ ಕಂಡುಬರುತ್ತಿದ್ದು, ತೈಲ ಮತ್ತು ಅಗತ್ಯ ವಸ್ತುಗಳ ಕೊರತೆ ಎದುರಾಗಿದೆ. ನಗರಗಳಲ್ಲಿ ವಿದ್ಯುತ್ ಕಡಿತ, ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಭಾರಿ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.
ಇದನ್ನು ಓದಿದ್ದೀರಾ? ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್ಕೀಪರ್’ ಈಗ ಇರಾನ್ನ ಪರಮೋಚ್ಚ ನಾಯಕ
ಯುದ್ಧದ ಮತ್ತೊಂದು ಪ್ರಮುಖ ಮುಂಚೂಣಿಯಾಗಿರುವ ಲೆಬನಾನ್ನ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ನಿರಂತರ ಯುದ್ಧದಿಂದಾಗಿ ಆರ್ಥಿಕವಾಗಿ ಮತ್ತು ಸೇನಾ ದೃಷ್ಟಿಯಿಂದ ಬಳಲಿರುವ ಲೆಬನಾನ್ ಸರ್ಕಾರ ಹಾಗೂ ಹಿಜ್ಬೊಲ್ಲಾ ಪಡೆಗಳು, ರಕ್ತಪಾತವನ್ನು ನಿಲ್ಲಿಸುವ ಉದ್ದೇಶದಿಂದ ಮಾತುಕತೆಯ ಮುನ್ಸೂಚನೆ ನೀಡಿವೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ಕದನ ವಿರಾಮದ ಪ್ರಸ್ತಾಪವನ್ನು ಮುಂದಿಡಲಾಗಿದೆ.
ಆದರೆ, ಈ ಶಾಂತಿಯ ಮುನ್ಸೂಚನೆಗಳಿಗೆ ಇಸ್ರೇಲ್ ಸೊಪ್ಪು ಹಾಕದೆ ತನ್ನ ಆಕ್ರಮಣಕಾರಿ ನೀತಿಯನ್ನು ಮುಂದುವರಿಸಿದೆ. ಲೆಬನಾನ್ನ ರಾಜಧಾನಿ ಬೈರೂತ್ ಮತ್ತು ಅದರ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ಯುದ್ಧವಿಮಾನಗಳು ಭಯಾನಕ ಬಾಂಬ್ ಸುರಿಮಳೆಗೈಯುತ್ತಿವೆ. ವಸತಿ ಸಮುಚ್ಚಯಗಳು, ವಾಣಿಜ್ಯ ಮಳಿಗೆಗಳು ಮತ್ತು ಮೂಲಸೌಕರ್ಯಗಳು ಸಂಪೂರ್ಣ ಹಾನಿಯಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಪ್ರಸ್ತುತ ಪಶ್ಚಿಮ ಏಷ್ಯಾದ ಬಿಕ್ಕಟ್ಟು ಅತ್ಯಂತ ನಿರ್ಣಾಯಕ ಘಟ್ಟದಲ್ಲಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶ್ವಾಸದ ನುಡಿಗಳು ಕೇವಲ ರಾಜಕೀಯ ಹೇಳಿಕೆಗಳಾಗಿ ಉಳಿಯುವ ಲಕ್ಷಣಗಳು ಗೋಚರಿಸುತ್ತಿವೆ. ಇರಾನ್ನ ಕಠಿಣ ನಿಲುವು, ಹಾರ್ಮುಜ್ ಜಲಸಂಧಿಯ ದಿಗ್ಬಂಧನದ ಆರ್ಥಿಕ ಪರಿಣಾಮಗಳು ಮತ್ತು ಲೆಬನಾನ್ನಲ್ಲಿ ಮುಂದುವರಿದಿರುವ ಇಸ್ರೇಲ್ನ ಸೇನಾ ಕಾರ್ಯಾಚರಣೆಯು ಯುದ್ಧದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ಭೌಗೋಳಿಕ-ರಾಜಕೀಯ ಮೇಲಾಟದಲ್ಲಿ ಅಮಾಯಕ ನಾಗರಿಕರು ಬಲಿಯಾಗುತ್ತಿದ್ದಾರೆ. ಜಾಗತಿಕ ನಾಯಕರು ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ, ನೈಜ ಮತ್ತು ಪರಿಣಾಮಕಾರಿ ರಾಜತಾಂತ್ರಿಕ ಹೆಜ್ಜೆಗಳನ್ನು ಇಡದಿದ್ದರೆ ಈ ಕದನವು ಜಾಗತಿಕ ಆರ್ಥಿಕತೆ ಮತ್ತು ಭದ್ರತೆಗೆ ಬಹುದೊಡ್ಡ ಪೆಟ್ಟು ನೀಡಲಿದೆ.





