ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸಾ ರಾಜಕಾರಣಕ್ಕೆ ಆಸ್ಪದವಿಲ್ಲ. ಚುನಾವಣೆಯ ಮೂಲಕ ಆಯ್ಕೆಯಾಗುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಬಡಿದಾಡಿಕೊಳ್ಳುವುದಕ್ಕೂ ಅವಕಾಶವಿಲ್ಲ ಎನ್ನುವುದನ್ನು ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಬಡಿಗೆ ಹಿಡಿದು ಬಡಿದಾಡುವುದು ಪ್ರಜಾಪ್ರಭುತ್ವವೂ ಅಲ್ಲ, ನಾಗರಿಕತೆಯೂ ಅಲ್ಲ ಎನ್ನುವುದು ಹಲವು ವರ್ಷಗಳಿಂದ ಅಧಿಕಾರದಲ್ಲಿರುವ ಈ ಪಕ್ಷಗಳ ನಾಯಕರಿಗೆ ಅರಿವಾಗಬೇಕು.
ಬಹು ನಿರೀಕ್ಷಿತ ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಉತ್ತರ ಭಾರತದ ಮತದಾರರಿಗಿಂತ ದಕ್ಷಿಣ ಭಾರತದ ಮತದಾರರ ನಿಲುವು ಒಲವು ಸದಾ ಭಿನ್ನವಾಗಿರುತ್ತದೆ ಎನ್ನುವುದನ್ನು ಇಲ್ಲಿಯವರೆಗೆ ನಡೆದ ಬಹುತೇಕ ಎಲ್ಲಾ ಚುನಾವಣೆಗಳಲ್ಲಿ ಈ ದೇಶ ನೋಡಿಕೊಂಡೇ ಬಂದಿದೆ. ದಕ್ಷಿಣ ಭಾರತದ ಕೇರಳ, ತಮಿಳುನಾಡು ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಚುನಾವಣೆ ಹಾಗೂ ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳಿಗಾಗಿ ನಡೆಯುವ ಚುನಾವಣೆಯ ಸುತ್ತ ಅನೇಕ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಲಿದೆ.
ಕೇಂದ್ರ ಚುನಾವಣಾ ಆಯೋಗ ನಡೆದ ಎಸ್.ಐ.ಆರ್ ಪ್ರಕ್ರಿಯೆಗಳಲ್ಲಿ ಲೋಪ ದೋಷಗಳ ಬಗ್ಗೆ ತೃಣಮೂಲ ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷಗಳು ಭಾರೀ ಟೀಕೆ ವ್ಯಕ್ತಪಡಿಸಿದ್ದವು. ಲೋಕಸಭೆಯ 130 ಸದಸ್ಯರು ಸೇರಿದಂತೆ, ರಾಜ್ಯಸಭೆಯ 63 ಸದಸ್ಯರು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರ ಪದಚ್ಯುತಿಗೆ ಆಗ್ರಹಿಸಿದ್ದರು ಎನ್ನುವುದು ಇಲ್ಲಿ ಉಲ್ಲೇಖನೀಯ. ಕೇಂದ್ರ ಚುನಾವಣಾ ಆಯೋಗ ಹಾಗೂ ಆಯೋಗದ ಮುಖ್ಯ ಆಯುಕ್ತರ ವಿರುದ್ಧ ಇಷ್ಟೆಲ್ಲಾ ಭಿನ್ನಮತಗಳು ಇರುವ ಸಂದರ್ಭದಲ್ಲೇ ಚುನಾವಣೆ ಘೋಷಣೆಯಾಗಿರುವುದು ಮತ್ತು ಚುನಾವಣೆ ಮುಗಿದು ಮೂರು ವಾರಗಳ ಕಾಲ ಫಲಿತಾಂಶಕ್ಕಾಗಿ ಕಾಯಬೇಕಿರುವುದು ಕೂಡ ಅನೇಕ ರಾಜಕೀಯ ಚರ್ಚೆಗಳಿಗೆ ಗ್ರಾಸವಾಗುತ್ತಿದೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಬಿಜೆಪಿ ಪಶ್ಚಿಮ ಬಂಗಾಳವನ್ನು ತನ್ನ ಪ್ರತಿಷ್ಠೆಯನ್ನಾಗಿಸಿಕೊಂಡಿರುವುದು ಈ ಬಾರಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ನಡುವೆ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಬಿಜೆಪಿ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಿಕೊಂಡಿದ್ದು, ಕಳೆದ 15 ವರ್ಷಗಳಿಂದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ಅವರನ್ನು ಹಣಿಯಬೇಕು ಎಂಬ ಲೆಕ್ಕಾಚಾರದಲ್ಲಿ ಅವರದ್ದೇ ಪಕ್ಷದಿಂದ ಬಂದ ಸುವೇಂದು ಅಧಿಕಾರಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮುಂದಿಟ್ಟುಕೊಂಡು ಬಿಜೆಪಿ ತಂತ್ರಗಾರಿಕೆ ಹೆಣೆಯುತ್ತಿದೆ. ಕಳೆದ ಚುನಾವಣೆಯಲ್ಲಿಯೂ ಸವಾಲೆಸೆದು ಗೆದ್ದು ಬೀಗಿದ್ದ ದೀದಿ, ಈ ಬಾರಿಯೂ ಬಿಜೆಪಿ ಸವಾಲೆಸೆದಿದ್ದಾರೆ. ತೃಣಮೂಲ ಕಾಂಗ್ರೆಸ್ ನ ಚುನಾವಣಾ ತಂತ್ರಗಾರಿಕೆ ಮಾಡುವ ಐ-ಪ್ಯಾಕ್ ಸಂಸ್ಥೆಯ ಮೇಲೆ ನಡೆಸಿದ ಇಡಿ ದಾಳಿ, ಎಸ್.ಐ.ಆರ್ ಪಶ್ನಿಸಿ ಕೋರ್ಟು, ಕಚೇರಿ ಅಲೆದಾಟ, ಪಶ್ಚಿಮ ಬಂಗಾಳದಲ್ಲಿ ಇರುವ ಆಡಳಿತ ವಿರೋಧಿ ಅಲೆ, ಬಾಂಗ್ಲಾ ವಲಸೆ, ಮಹಾಜಂಗಲ್ ರಾಜ್ ಸೇರಿದಂತೆ ಅನೇಕ ರಾಜಕೀಯ ಚರ್ಚೆಗಳ ನಡುವೆ ಈ ಬಾರಿ ಚುನಾವಣೆಯನ್ನು ತೃಣಮೂಲ ಕಾಂಗ್ರೆಸ್ ಎದುರಿಸಬೇಕಿದೆ. ಮಮತಾ ಅವರನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಬೇಕೆಂದು ಹಠ ಹಿಡಿದಿರುವ ಬಿಜೆಪಿಗೆ ಎಸ್.ಐ.ಆರ್. ಪ್ರಕ್ರಿಯೆಯಿಂದ 58 ಲಕ್ಷ ಮತದಾರರನ್ನು ಕೈ ಬಿಟ್ಟಿರುವುದು ವರದಾನವಾಗಲಿದೆ ಎಂಬ ಭರವಸೆಯಲ್ಲಿದ್ದಂತಿದೆ.
2021ರ ವಿಧಾನಸಭಾ ಚುನಾವಣೆಯಲ್ಲಿ 213 ಕ್ಷೇತ್ರಗಳಲ್ಲಿ ಗೆದ್ದಿದ್ದ ತೃಣಮೂಲ ಕಾಂಗ್ರೆಸ್ ಗೆ, 77 ಕ್ಷೇತ್ರಗಳಲ್ಲಿ ಗೆದ್ದಿದ್ದ ಆರ್.ಎಸ್.ಎಸ್. ಕೃಪಾಪೋಷಿತ ಬಿಜೆಪಿ ತನ್ನ ಹಿಂದುತ್ವ, ಮುಸ್ಲಿಂ ವಿರೋಧ, “ಮೋದಿ ಗ್ಯಾರಂಟಿ”ಗಳ ಸೋಗಿನಲ್ಲಿ ಗೆಲ್ಲುವ ಹುನ್ನಾರ ಮಾಡುತ್ತಿದೆ. ಮುಸ್ಲಿಂ ಬಾಹುಳ್ಯ ಇರುವ ಬಂಗಾಳದಲ್ಲಿ ಹಿಂದುತ್ವದ ರಾಜಕಾರಣ ಮಾಡಿ ತೃಣಮೂಲ ಕಾಂಗ್ರೆಸ್ ನ ಭದ್ರಕೋಟೆಯನ್ನು ಒಡೆದು ಆಳುವುದಕ್ಕೆ ಕಣ್ಣಿಟ್ಟಿರುವ ಬಿಜೆಪಿಗೆ ಮತದಾರರು ಮತ ಚಲಾಯಿಸುತ್ತಾರಾ ಎನ್ನುವುದು ಇಲ್ಲಿ ಮುಖ್ಯ. ಪಕ್ಕದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಯನ್ನು ತಲೆಕೆಳಗೆ ಮಾಡಿದ್ದ ಫಲಿತಾಂಶ, ಬಿಜೆಪಿ ನಾಯಕರ ನೀತಿ ಸಂಹಿತೆಯ ಉಲ್ಲಂಘನೆ, ಸ್ಟೋರ್ ರೂಮ್ ಗಳಲ್ಲಿ ನಡೆದ ಅಕ್ರಮಗಳು, ಸಿಸಿ ಕ್ಯಾಮೆರಾ ಸ್ಥಗಿತಗೊಂಡಿರುವ ಪ್ರಕರಣಗಳು ಇಲ್ಲಿಯೂ ಮುಂದಿನ ಅಧ್ಯಾಯ ಎನ್ನುವಂತೆ ನಡೆಯುವ ಸಾಧ್ಯತೆಗಳ ಬಗ್ಗೆ ವಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ರಾಜಕೀಯಕ್ಕಾಗಿ ಎಂಥಾ ಕೆಳಮಟ್ಟಕ್ಕೆ ಬೇಕಾದರೂ ಇಳಿಯುವುದಕ್ಕೆ ಮುಂದಾಗುವ ಬಿಜೆಪಿಯಂತಹ ಪಕ್ಷ ಒಡೆದು ಆಳುವ ನೀತಿಯನ್ನು ಬಂಗಾಳದಲ್ಲೂ ಅನುಷ್ಠಾನಕ್ಕೆ ತರುವುದಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಆತಂಕ.
294 ವಿಧಾನಸಭಾ ಕ್ಷೇತ್ರಗಳ ಪೈಕಿ 148 ಕ್ಷೇತ್ರಗಳು ಸರಳ ಬಹುಮತಕ್ಕೆ ಬೇಕಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಪ್ರಭಾವ ಹಾಗೂ ಹಿಂದೂ ಮತದಾರರ ಪ್ರಭಾವವಿರುವ ಕ್ಷೇತ್ರಗಳಲ್ಲಿಯೂ ಟಿಎಂಸಿ ಮೇಲುಗೈ ಸಾಧಿಸಿತ್ತು. ಆದರೆ, ಸುಮಾರು 182 ಕ್ಷೇತ್ರಗಳಲ್ಲಿ ಇರುವ ಹಿಂದೂ ಮತದಾರರ ಪ್ರಭಾವವನ್ನು ತನ್ನತ್ತ ತಿರುಗಿಸುವ ಯತ್ನಕ್ಕೆ ಬಿಜೆಪಿ ಇಳಿದಿದೆ. ಆದರೆ, ಆ ಕ್ಷೇತ್ರಗಳಲ್ಲಿ ಇರುವ ಸುಮಾರು ಶೇ.40ರಷ್ಟು ಮುಸ್ಲೀಮರಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ ಆರ್ ಸಿ) ಕುರಿತ ಚರ್ಚೆಗಳು ಮುಸ್ಲೀಮರಲ್ಲಿ ಅಸಹನೀಯ ಭಾವನೆ ಮೂಡಿಸಿದೆ. ಹಾಗಾಗಿ ಬಿಜೆಪಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಕಾರುವ ಮುಸ್ಲಿಂ ದ್ವೇಷ ಭಾಷಣಗಳು ಈ ಕ್ಷೇತ್ರಗಳಲ್ಲಿ ಎಷ್ಟು ಪ್ರಭಾವಿಸಲಿವೆ ಎನ್ನುವುದು ಕೂಡ ಕುತೂಹಲಕರವಾಗಿದೆ. ಇನ್ನು, 58 ಲಕ್ಷ ಮತದಾರರನ್ನು ಮತಪಟ್ಟಿಯಿಂದ ತೆಗೆದು ಹಾಕಿದ ಎಸ್.ಐ.ಆರ್ ಪ್ರಕ್ರಿಯೆಯೂ ಕೂಡ ಮುಸ್ಲಿಮರನ್ನು ಒಟ್ಟುಗೂಡಿಸುವಂತೆ ಮಾಡಿದೆ. ಹಾಗಾಗಿ ತೃಣಮೂಲ ಕಾಂಗ್ರೆಸ್ಗೆ ಯಾವುದೇ ನಿರಾಸೆ ಆಗುವುದಿಲ್ಲ ಎನ್ನುವ ಲಕ್ಷಣವಿದೆ ಎಂದು ಅಲ್ಲಿನ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಪಶ್ಚಿಮ ಬಂಗಾಳದಂತಹ ರಾಜ್ಯ ರಾಜಕೀಯ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತಲೇ ಬಂದಿದೆ. ರಾಜಕೀಯಕ್ಕಾಗಿ ಹಲ್ಲೆ ಅಥವಾ ಹಲ್ಲೆಯಂತಹ ರಾಜಕೀಯ ಕುಕೃತ್ಯಗಳ ಸಂಖ್ಯೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಳದಲ್ಲೇ ಹೆಚ್ಚಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 42 ಲೋಕಸಭಾ ಕ್ಷೇತ್ರಗಳ ಪೈಕಿ ದಿಲೀಪ್ ಘೋಷ್ ನೇತೃತ್ವದಲ್ಲಿ 18 ಕ್ಷೇತ್ರಗಳಲ್ಲಿ ಗೆದ್ದಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಸುಖಾಂತ್ ಮುಜಾಮ್ದಾರ್ ನೇತೃತ್ವದಲ್ಲಿ ತನ್ನ 6 ಕ್ಷೇತ್ರಗಳನ್ನು ಕಳೆದುಕೊಂಡಿದ್ದು ಟಿಎಂಸಿಗೆ ಹುರುಪು ಮೂಡಿಸಿದೆ. ಮಮತಾ ಬ್ಯಾನರ್ಜಿ ಜೊತೆಗೆ ಅಭಿಷೇಕ್ ಬ್ಯಾನರ್ಜಿ ಕೂಡ ಒಡೆದು ಆಳುವ ಬಿಜೆಪಿಗೆ ತಲೆಬಿಸಿಯಾಗಿದ್ದಾರೆ.

ಈ ನಡುವೆ, ತನ್ನ ನೆಲೆ ವಿಸ್ತರಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ, ಕಳೆದ ಕೆಲವು ಚುನಾವಣೆಗಳಿಂದೀಚೆಗೆ ಸುವೇಂದು ಅಧಿಕಾರಿಯನ್ನು ಒಳಗೊಂಡು ಟಿಎಂಸಿಯ ಕೆಲವು ಮುಖಂಡರನ್ನು ತನ್ನತ್ತ ಸೆಳೆದುಕೊಂಡಿದೆ. ಇಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಟಿಎಂಸಿಯ ನಾಯಕರೆಲ್ಲಾ ಬಿಜೆಪಿಗೆ ಸೇರ್ಪಡೆಗೊಂಡ ಮೇಲೆ ನಿಷ್ಕಳಂಕ ರಾಜಕಾರಣಿಗಳೆಂಬ ಹಣೆಪಟ್ಟಿ ಧರಿಸಿಕೊಂಡು ಬಿಜೆಪಿಯ ಒಡೆದು ಆಳುವ ರಾಜಕೀಯದ ಕುತಂತ್ರದ ಪಾಲಾಗಿದ್ದಾರೆ. ಇವೆಲ್ಲಾ ರಾಜಕೀಯ ಬೆಳವಣಿಗೆಗಳು ಟಿಎಂಸಿ ಹಾಗೂ ಬಿಜೆಪಿ ನಡುವೆ ಇದ್ದ ರಾಜಕೀಯ ಸಂಘರ್ಷದ ವಾತಾವರಣವನ್ನು ಈ ಚುನಾವಣಾ ಕಣದಲ್ಲಿ ಜಿದ್ದಾಜಿದ್ದಿಗೆ ಪುಷ್ಟಿ ನೀಡಿದೆ. ಈ ಹಿಂದೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮುಖಂಡರು ಸಂಚರಿಸುತ್ತಿದ್ದ ವಾಹನಗಳ ಮೇಲೆ ಕೋಲ್ಕತ್ತಾದ ಡೈಮಂಡ್ ಹಾರ್ಬರ್ ಪ್ರದೇಶದಲ್ಲಿ ನಡೆದ ಕಲ್ಲೆಸೆತದ ದಾಳಿ ಪ್ರಕರಣವನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಇವೆಲ್ಲಾ ಪಶ್ಚಿಮ ಬಂಗಳಾದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವೆ ಮತ್ತಷ್ಟು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇನ್ನು, ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ಮಮತಾ ಬ್ಯಾನರ್ಜಿ ತಡೆಯುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನು ಈ ಬಾರಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಂಬಿಸುವುದಕ್ಕೆ ಬಿಜೆಪಿ ಶತಾಯಗತಾಯ ಯತ್ನಿಸುತ್ತಿದೆ.
ಇದನ್ನೂ ಓದಿ ಬಂಗಾಳದ ನೂತನ ಮುಖ್ಯ ಕಾರ್ಯದರ್ಶಿ ದುಷ್ಯಂತ್ ನರಿಯಾಲ ನೇಮಕ: ಚುನಾವಣೆಗೂ ಮುನ್ನ ವಿವಾದ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸಾ ರಾಜಕಾರಣಕ್ಕೆ ಆಸ್ಪದವಿಲ್ಲ. ಚುನಾವಣೆಯ ಮೂಲಕ ಆಯ್ಕೆಯಾಗುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಬಡಿದಾಡಿಕೊಳ್ಳುವುದಕ್ಕೂ ಅವಕಾಶವಿಲ್ಲ ಎಂಬುದನ್ನು ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಬಡಿಗೆ ಹಿಡಿದು ಬಡಿದಾಡುವುದು ಪ್ರಜಾಪ್ರಭುತ್ವವೂ ಅಲ್ಲ, ನಾಗರಿಕತೆಯೂ ಅಲ್ಲ ಎನ್ನುವುದು ಹಲವು ವರ್ಷಗಳಿಂದ ಅಧಿಕಾರದಲ್ಲಿರುವ ಈ ಪಕ್ಷಗಳ ನಾಯಕರಿಗೆ ಅರಿವಾಗಬೇಕು. ಆ ನಾಯಕರಿಗೆ ಅರಿವಾಗದೇ ಇಲ್ಲದೇ ಇರುವುದು ಇಂದಿನವರೆಗೂ ಇಲ್ಲಿನ ರಾಜಕೀಯ ಕಣದಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತಲೇ ಇದೆ. ಇವೆಲ್ಲವನ್ನು ಮೀರಿ ಇಲ್ಲಿ ರಾಜಕೀಯ ನಡೆಯುವುದು ಕೂಡ ಕಷ್ಟ ಎನ್ನುವ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಅಂತಹದ್ದೊಂದು ಆಡಳಿತ ಹಾಗೂ ರಾಜಕೀಯ ವ್ಯವಸ್ಥೆ ಸೃಷ್ಟಿಸುವುದಕ್ಕೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕೂಡ ಯತ್ನಿಸಿಲ್ಲ, ಒಡೆದು ಆಳುವ ಬಿಜೆಪಿಗೆ ಅದು ಬೇಕಾಗಿಯೂ ಇಲ್ಲ.





