'ಇವ ನಮ್ಮವ' ಮಸೂದೆಯು ಕೇವಲ ಶಿಕ್ಷೆಯಲ್ಲ, ಜಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಶಿಕ್ಷಣ ಮತ್ತು ಸಬಲೀಕರಣದ ಬಗ್ಗೆಯೂ ಚಿಂತನೆ ನಡೆಸುತ್ತದೆ. ಈ ಕಾನೂನು ಸಮರ್ಪಕವಾಗಿ ಜಾರಿಗೊಂಡಿದ್ದೇ ಆದಲ್ಲಿ ಜಾತಿ ಗೋಡೆಗಳು ಕುಸಿಯುವಂತೆ ಮಾಡುತ್ತದೆ.
ಪ್ರಜಾಪ್ರಭುತ್ವದಲ್ಲಿಯೂ ಹೆಚ್ಚುತ್ತಿರುವ ಮರ್ಯಾದೆಗೇಡು ಹತ್ಯೆ(honour killings)ಗಳಂತಹ ಅಪರಾಧಗಳನ್ನು ಎದುರಿಸಲು, ಸ್ಥಾಪಿತ ಜಾತಿ ಮತ್ತು ಸಮುದಾಯದ ರೂಢಿಗಳನ್ನು ಮೆಟ್ಟಿನಿಂತು ಸಂಬಂಧ ಬೆಸೆಯುವ ದಂಪತಿಗಳನ್ನು ರಕ್ಷಿಸುವುದಕ್ಕಾಗಿ ರಾಜ್ಯ ಸರ್ಕಾರವು ‘ಕರ್ನಾಟಕ ಮದುವೆ ಮತ್ತು ಸಂಗಾತಿ ಆಯ್ಕೆಯ ಸ್ವಾತಂತ್ರ್ಯ, ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ಮಸೂದೆ -2026’ನ್ನು ರಚಿಸಿದ್ದು, ಇದನ್ನು ‘ಇವ ನಮ್ಮವ, ಇವ ನಮ್ಮವ’ ಎಂದೂ ಕರೆಯಲಾಗುತ್ತದೆ.
‘ಮರ್ಯಾದೆಗೇಡು ಹತ್ಯೆ’ ಎಂದರೆ ಮದುವೆಯಲ್ಲಿ ವೈಯಕ್ತಿಕ ಆಯ್ಕೆ ಮೂಲಭೂತ ಹಕ್ಕು. ಜಾತಿ, ಸಂಪ್ರದಾಯ, ಸಮುದಾಯದ ರೂಢಿಗಳು ಅಥವಾ ಕುಟುಂಬದ ಪ್ರತಿಷ್ಠೆಯಿಂದ ಸಮರ್ಥಿಸಲ್ಪಟ್ಟ ಹಿಂಸೆ ಅಥವಾ ಬಲವಂತವನ್ನು ಸಹಿಸಲಾಗುವುದಿಲ್ಲ. ಹಾಗಾಗಿ ಅಂತರ್ಜಾತಿ ವಿವಾಹದಿಂದ ಕುಟುಂಬ ಅಥವಾ ಸಮುದಾಯಕ್ಕೆ ‘ಅವಮಾನ’ವಾಗುತ್ತದೆಂದು ಗ್ರಹಿಸುವ ಮೂಲಕ ವಿವಾಹಿತರಿಗೆ ಶಿಕ್ಷೆ ವಿಧಿಸಲು ಮುಂದಾಗುತ್ತಾರೆ. ದಂಪತಿಗಳ ಕುಟುಂಬ ಅಥವಾ ಸಮುದಾಯದ ಸದಸ್ಯರು ಒಬ್ಬ ವ್ಯಕ್ತಿಯ ಮೇಲೆ ಉದ್ದೇಶಪೂರ್ವಕ ಹಿಂಸೆ ಅಥವಾ ಕೊಲೆಯಂತಹ ಘಟನೆಗಳು ಸಂಭವಿಸುತ್ತವೆ. ಇವುಗಳನ್ನು ತಡೆಯುವುದಕ್ಕಾಗಿಯೇ ರಾಜ್ಯ ಸರ್ಕಾರ ಹೊಸ ಕಾಯ್ದೆಯನ್ನು ಜಾರಿಗೊಳಿಸುತ್ತಿದೆ.
ಈ ಮಸೂದೆಯು 12ನೇ ಶತಮಾನದ ಸಾಮಾಜಿಕ ಸುಧಾರಕ ಬಸವಣ್ಣನವರ ವಚನದಿಂದ ಪ್ರೇರಿತವಾಗಿದೆ: ‘ಇವ ನಮ್ಮವ, ಇವ ನಮ್ಮವ‘– ಅಂದರೆ ಇವನು ನಮ್ಮವನು, ಇವನು ನಮ್ಮವನು ಎಂಬುದನ್ನು ತಿಳಿಸುತ್ತದೆ. ‘ಇವ ನಮ್ಮವ’ ಎಂಬ ಸಂದೇಶ ಸಾರ್ವತ್ರಿಕ ಸಹೋದರತ್ವದ ಸಂದೇಶ. ಜಾತಿ, ಕುಲ, ಸಂಪ್ರದಾಯದ ಗೋಡೆಗಳನ್ನು ಕಿತ್ತೊಗೆಯುವ ಈ ವಚನವು ಇಂದು ಕರ್ನಾಟಕ ಸರ್ಕಾರದ ಹೊಸ ಮಸೂದೆಯ ಹೆಸರಾಗಿದೆ.
ಆದರೆ, 21ನೇ ಶತಮಾನದಲ್ಲಿ ನಮಗೆ ಇಂತಹ ಕಾನೂನುಗಳು ಏಕೆ ಬೇಕು? ಏಕೆಂದರೆ ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಎಂಬುದು ಬೆಂಬಿಡದ ಭೂತದಂತೆ ಅಂಟಿಕೊಂಟಿದೆ. ಹಾಗಾಗಿ ಕಠಿಣ ಕಾನೂನು ಜಾರಿಯಾಗಲೇಬೇಕು.
ಇತ್ತೀಚೆಗೆ ಹುಬ್ಬಳ್ಳಿ ತಾಲೂಕಿನಲ್ಲಿ ಒಬ್ಬ ದಲಿತ ವ್ಯಕ್ತಿಯನ್ನು ಮದುವೆಯಾದ ಕಾರಣದಿಂದ ತನ್ನ ತಂದೆಯೇ ಮಾನ್ಯ ಪಾಟೀಲ್(20) ಎಂಬ ಗರ್ಭಿಣಿ ಮಗಳನ್ನು ಮತ್ತು ಅವಳ ಭ್ರೂಣವನ್ನು ಕೊಂದ ಘಟನೆ ನಡೆದಿದೆ. PUCL-ಕರ್ನಾಟಕದ 2024ರ ವರದಿ ಪ್ರಕಾರ, 2022ರ ಜನವರಿಯಿಂದ 2023ರ ಡಿಸೆಂಬರ್ವರೆಗೆ 13 ಮರ್ಯಾದೆಗೇಡು ಸಂಬಂಧಿತ ದಾಳಿಗಳು ನಡೆದಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಇಂತಹ ಕೊಳಕು ಮನಸ್ಥಿತಿಯ ಕ್ರೂರಿಗಳ ನಿಯಂತ್ರಣಕ್ಕೆ ಈ ಮಸೂದೆಯು ರಚನೆಯಾಗುತ್ತದೆ. ಇದು ಸಂವಿಧಾನದ ಅನುಚ್ಛೇದ 14, 19 ಮತ್ತು 21ರ ಅಡಿಯಲ್ಲಿರುವ ಮೂಲಭೂತ ಹಕ್ಕುಗಳನ್ನು ಮತ್ತು ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆ, 1993ರನ್ನು ಪುನರುಚ್ಚರಿಸುತ್ತದೆ. ಜಾತಿ ಆಧಾರಿತ ಜಾತಿ ಶ್ರೇಣಿಕ್ರಮವನ್ನು ನಿರ್ವಹಿಸುವ ರಚನಾತ್ಮಕ ಸಾಧನವೆಂದು ಗುರುತಿಸಲಾಗಿದೆ. ಅಂತರ್ಜಾತಿ ಮದುವೆಗಳು ಸಹೋದರತ್ವವನ್ನು ಉತ್ತೇಜಿಸಿ ತಾರತಮ್ಯವನ್ನು ಕಿತ್ತೊಗೆಯುವ ಮಾರ್ಗವೆಂದು ಪರಿಗಣಿಸಲಾಗಿದೆ.
ಮಸೂದೆಯ ತಿರುಳು: ಸ್ವಾತಂತ್ರ್ಯ ಮತ್ತು ರಕ್ಷಣೆ
ಮಸೂದೆಯು ಸಂವಿಧಾನದ ಅನುಚ್ಛೇದ 14(ಸಮಾನತೆ), 19(ಭಾಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 21(ಜೀವನ ಹಕ್ಕು)ನ್ನು ಪುನರುಚ್ಚರಿಸುತ್ತದೆ. ಪ್ರಾಪ್ತ ವಯಸ್ಸಿನ ವ್ಯಕ್ತಿಗಳು(ಮಹಿಳೆಗೆ 18+, ಪುರುಷನಿಗೆ 21+) ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಹೊಂದಿರುತ್ತಾರೆ. ಇದಕ್ಕೆ ಕುಟುಂಬ ಅಥವಾ ಸಮುದಾಯದ ಅನುಮತಿ ಬೇಕಿಲ್ಲ ಎಂಬುದನ್ನು ದೃಢಪಡಿಸಿದೆ.
ಎರಡು ವಿಭಿನ್ನ ಜಾತಿ ಅಥವಾ ಉಪಜಾತಿಗಳ ನಡುವಿನ ವಿವಾಹವನ್ನು ಅಂತರ್ಜಾತಿ ವಿವಾಹ ಎಂದು ವ್ಯಾಖ್ಯಾನಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕೊಲೆ, ಗಾಯ, ಅಪಹರಣ, ಸಾಮಾಜಿಕ ಬಹಿಷ್ಕಾರ(ಮಾರುಕಟ್ಟೆಗೆ ಪ್ರವೇಶ ನಿರಾಕರಣೆ, ಉದ್ಯೋಗ ನಷ್ಟ), ಬೆದರಿಕೆ, ಲೈಂಗಿಕ ಹಿಂಸೆ, ಗರ್ಭಪಾತಕ್ಕೆ ಒತ್ತಾಯ ಮತ್ತು ಸುಳ್ಳು ಮದುವೆ ಭರವಸೆಯಿಂದ ಲೈಂಗಿಕ ಸಂಬಂಧಗಳು ಸೇರಿದಂತೆ ಹಲವು ಕೃತ್ಯಗಳನ್ನು ನಿಷೇಧಿಸಲಾಗಿದೆ.
10 ವರ್ಷಗಳವರೆಗೆ ಜೈಲು ಶಿಕ್ಷೆ
ಮಸೂದೆಯ ಪ್ರಕಾರ, ಮರ್ಯಾದೆ ಹೆಸರಿನಲ್ಲಿ ದಂಪತಿಗೆ ಅಥವಾ ಅವರಲ್ಲಿ ಒಬ್ಬರಿಗೆ ಗಂಭೀರ ಹಲ್ಲೆಯನ್ನುಂಟು ಮಾಡುವವರಿಗೆ ಕನಿಷ್ಠ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೀವಾವಧಿ ಶಿಕ್ಷೆ ಮತ್ತು 3 ಲಕ್ಷ ರೂ.ಗಳವರೆಗೆ ದಂಡವನ್ನೂ ವಿಧಿಸಬಹುದು. ಸರಳ ಗಾಯಗಳಂತಹ ಪ್ರಕರಣಗಳಿಗೆ, ಅಪರಾಧಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ.ಗಳ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಯಾರಾದರೂ ಮರಣ ಹೊಂದಿದ ಸಂದರ್ಭದಲ್ಲಿ, ಮಸೂದೆಯು ಭಾರತೀಯ ಜ್ಞಾನ ಸಂಹಿತೆ(ಬಿಎನ್ಎಸ್) ಅಡಿ ಶಿಕ್ಷೆಯ ಜತೆಗೆ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸುತ್ತದೆ.
ಅಂತರ್ಜಾತಿ ಮೈತ್ರಿಗಳಲ್ಲಿ ವಿವಾಹದ ಸುಳ್ಳು ಭರವಸೆ ನೀಡುವ ಮೂಲಕ ಲೈಂಗಿಕ ಸಂಭೋಗವನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆ ಕನಿಷ್ಠ ಐದು ವರ್ಷಗಳ ಕಠಿಣ ಶಿಕ್ಷೆಯೊಂದಿಗೆ, ಇದನ್ನು ಜೀವಾವಧಿ ಶಿಕ್ಷೆ ಮತ್ತು ದಂಡದವರೆಗೆ ವಿಸ್ತರಿಸಬಹುದು.
‘ಯಾವುದೇ ವ್ಯಕ್ತಿ ವಯಸ್ಕ ಮಹಿಳೆಯೊಂದಿಗೆ ವಿವಾಹದ ಭರವಸೆ ನೀಡುವ ಮೂಲಕ ಲೈಂಗಿಕ ಸಂಭೋಗದಲ್ಲಿ ತೊಡಗಿ, ಬಳಿಕ ಮಹಿಳೆಯ ಜಾತಿಯನ್ನು ಬಹಿರಂಗಪಡಿಸುವುದು ಅಥವಾ ಮದುವೆಯಾಗುವ ಭರವಸೆಯನ್ನು ಪೂರೈಸಲು ನಿರಾಕರಿಸಿದರೆ, ವಂಚನೆಯ ಮೂಲಕ ಅಥವಾ ಸತ್ಯದ ತಪ್ಪು ತಿಳಿವಳಿಕೆಯ ಅಡಿಯಲ್ಲಿ ಒಪ್ಪಿಗೆಯನ್ನು ಪಡೆದಿದ್ದಾನೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಅತ್ಯಾಚಾರದಂತಹ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ’ ಎಂದು ಕರಡು ಹೇಳುತ್ತದೆ.
ಮಸೂದೆಯ ಪ್ರಕಾರ, ಅಂತರ್ಜಾತಿ ಮೈತ್ರಿಯ ಸ್ವರೂಪಕ್ಕೆ ವಿರೋಧದಿಂದ ಮಾತ್ರ ಅಥವಾ ಪ್ರಾಥಮಿಕವಾಗಿ ವಿವಾಹ ನಿರಾಕರಣೆ ಪ್ರೇರಿತವಾಗಿದೆ ಎಂಬುದಕ್ಕೆ ಪ್ರಾಥಮಿಕ ಪುರಾವೆಗಳಿದ್ದರೆ, ಮದುವೆಯ ಭರವಸೆಯು ಆರಂಭದಿಂದಲೂ ಸುಳ್ಳಾಗಿತ್ತು ಅಥವಾ ವಂಚನೆಯಾಗಿರುವುದಾಗಿ ಭಾವಿಸಬೇಕು. ಭರವಸೆಯನ್ನು ಉತ್ತಮ ನಂಬಿಕೆಯಿಂದ ನೀಡಲಾಗಿದೆ ಅಥವಾ ಜಾತಿಗೆ ಸಂಬಂಧವಿಲ್ಲದ ಅನಿರೀಕ್ಷಿತ ಸಂದರ್ಭಗಳಿಂದಾಗಿ ನೀಡಲಾಗಿದೆ ಎಂದು ಸಾಬೀತುಪಡಿಸುವ ಹೊರೆ ಆರೋಪಿಯ ಮೇಲೆ ಇರುತ್ತದೆ.
ಆದಾಗ್ಯೂ, ನಿಯಂತ್ರಣ ಮೀರಿದ ಸಂದರ್ಭಗಳಿಂದಾಗಿ ನಿಜವಾದ ವಾಗ್ದಾನ ಉಲ್ಲಂಘನೆಯ ಪ್ರಕರಣಗಳಿಗೆ ಅಥವಾ ಜಾತಿ ಆಧಾರದ ಮೇಲೆ ಮದುವೆ ಅಸಂಭವ ಎಂದು ಮಹಿಳೆಗೆ ಮೊದಲಿನಿಂದಲೂ ತಿಳಿದಿರುವಾಗ ಮೇಲಿನ ಷರತ್ತು ಅನ್ವಯಿಸುವುದಿಲ್ಲ.
ದಂಪತಿಗಳು ಮತ್ತು ಸಂತ್ರಸ್ತರಿಗೆ ಮಸೂದೆ ಯಾವ ರಕ್ಷಣೆ ನೀಡುತ್ತದೆ?
ಪ್ರಸ್ತಾವಿತ ಶಾಸನವು ಬಲಿಪಶುಗಳು ತಮ್ಮನ್ನು, ತಮ್ಮ ಅವಲಂಬಿತರನ್ನು ಮತ್ತು ಸಾಕ್ಷಿಗಳನ್ನು ಯಾವುದೇ ರೀತಿಯ ಬೆದರಿಕೆ, ಬಲವಂತ, ಪ್ರಚೋದನೆ, ಹಿಂಸಾಚಾರದ ಬೆದರಿಕೆಯಿಂದ ರಕ್ಷಿಸಿಕೊಳ್ಳಲು ಅವಕಾಶ ನೀಡುತ್ತದೆ. ದೂರು ಸ್ವೀಕರಿಸಿದ ಆರು ಗಂಟೆಗಳ ಒಳಗೆ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ. ಆಶ್ರಯ ಅಗತ್ಯವಿರುವ ದಂಪತಿಗೆ ಆಶ್ರಯ ನೀಡುವುದು ರಾಜ್ಯ ಸರ್ಕಾರಕ್ಕೂ ಬದ್ಧವಾಗಿದೆ. ಮದುವೆ ಈಗಾಗಲೇ ನಡೆದಿರುವ ಅಥವಾ ಅದು ಸಂಭವಿಸಬಹುದಾದ ಸಂದರ್ಭಗಳಲ್ಲಿ ಇಬ್ಬರಿಗೂ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯವಾಗಿದೆ.
ಮಸೂದೆಯು ಯಾವ ಸಾಂಸ್ಥಿಕ ಕಾರ್ಯವಿಧಾನಗಳನ್ನು ಪ್ರಸ್ತಾಪಿಸುತ್ತದೆ?
ಈ ಮಸೂದೆಯು ಕೇವಲ ಶಿಕ್ಷೆಯಲ್ಲ, ಜಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಶಿಕ್ಷಣ ಮತ್ತು ಸಬಲೀಕರಣದ ಬಗ್ಗೆಯೂ ಚಿಂತನೆ ನಡೆಸುತ್ತದೆ. ಈ ಕಾನೂನು ಸಮರ್ಪಕವಾಗಿ ಜಾರಿಗೊಂಡಿದ್ದೇ ಆದಲ್ಲಿ ಜಾತಿ ಗೋಡೆಗಳು ಕುಸಿಯುವಂತೆ ಮಾಡುತ್ತದೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ ಅಮೀಬಾದಂತೆ ರೂಪಾಂತರಗೊಂಡಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಭಯದ ವಾತಾವರಣವಿದೆ. ಹಾಗಾಗಿ ಈ ಮಸೂದೆಯು ದೂರುಗಳನ್ನು ದಾಖಲಿಸಿ, ತನಿಖೆ ಮಾಡಿ, ರಕ್ಷಣೆ ನೀಡುವಂತೆ ಸರ್ಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಆದೇಶಿಸುತ್ತದೆ.
ಕಳೆದ ಐದು ವರ್ಷಗಳಲ್ಲಿ ಮರ್ಯಾದೆ ಹೆಸರಿನಲ್ಲಿ ಅಪರಾಧಗಳು ವರದಿಯಾದ ಸ್ಥಳಗಳನ್ನು ಸರ್ಕಾರ ಗುರುತಿಸಬೇಕೆಂದು ಮಸೂದೆಯಲ್ಲಿ ಹೇಳಲಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಅಂತಹ ಅಪರಾಧಗಳನ್ನು ತಡೆಗಟ್ಟಲು ವಿಶೇಷ ಕೋಶಗಳನ್ನು ರಚಿಸುವುದು ಸರ್ಕಾರದ ಕರ್ತವ್ಯವಾಗಿದೆ. ವಿವಾಹವನ್ನು ನೆರವೇರಿಸಲು, ಸಮಾಲೋಚನೆ ಸೇವೆಗಳನ್ನು ಒದಗಿಸಲು ಮತ್ತು ಸೂಚಿಸಿದಂತೆ ಕಾರ್ಯನಿರ್ವಹಿಸಲು ‘ಇವ ನಮ್ಮವ ವೇದಿಕೆ’ಯನ್ನು ರಚಿಸಲು ಮಸೂದೆಯು ಜಿಲ್ಲಾಧಿಕಾರಿಗೆ ಅಧಿಕಾರ ನೀಡುತ್ತದೆ. ಪ್ರಸ್ತಾವಿತ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳ ವಿಚಾರಣೆಗಾಗಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಮಸೂದೆಯು ಆದೇಶಿಸುತ್ತದೆ.
ಇದನ್ನೂ ಓದಿ: ರೋಹಿತ್ ವೇಮುಲ ಕಾಯ್ದೆಯ ಉದ್ದೇಶವೇನು? ಸಮರ್ಪಕ ಅನುಷ್ಠಾನವಾಗುವುದೇ?
ಮಸೂದೆಯ ಈ ಎಲ್ಲ ವಿವರಗಳು ಭರವಸೆಯನ್ನು ನೀಡುತ್ತವೆ. ಆದರೆ ಅನುಷ್ಠಾನವು ಎಷ್ಟರ ಮಟ್ಟಿಗೆ ಬಲಗೊಳ್ಳುವುದು ಎಂಬುದನ್ನು ಮುಂದೆ ನೋಡಬೇಕಿದೆ. ಏಕೆಂದರೆ ಹಿಂದಿನ ಕಾನೂನು(ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮೇಲಿನ ಜಾತಿ ದೌರ್ಜನ್ಯ ತಡೆ ಕಾಯ್ದೆ)ಗಳಂತೆ ಇದೂ ಕೂಡ ಕೇವಲ ಕಾಗದದ ಮೇಲೆ ಉಳಿಯಬಾರದು. ಪ್ರಭಾವಿಗಳಿಗೆ ಮಣಿಯಬಾರದು. ಕಾನೂನು ತಪ್ಪಿತಸ್ಥರ ಎಡೆಮುರಿ ಕಟ್ಟುವ ಬಲವಾದ ಕುಣಿಕೆಯಾಗಬೇಕು. ಅಂತೆಯೇ ಮರ್ಯಾದೆಗೇಡು ಹತ್ಯೆಗಳು ದೇಶವ್ಯಾಪಿ ಸಮಸ್ಯೆಯಾಗಿರುವುದರಿಂದ ಇಂತಹ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸಿದರೆ ಜಾತಿ ರಹಿತ, ಸಹಬಾಳ್ವೆಯ ಸಮಾಜ ನಿರ್ಮಾಣವಾಗಿ ಬಸವಣ್ಣನ ಕನಸು ಸಾಕಾರಗೊಳ್ಳಬಹುದು.





