ಧರ್ಮಸ್ಥಳದ ಸಂತ್ರಸ್ತರನ್ನು ಭೇಟಿಯಾಗಿ ಕಂಡುಕೊಂಡ ಸಂಗತಿಗಳನ್ನು ಹೋರಾಟಗಾರ್ತಿಯರು ಹಂಚಿಕೊಂಡರು. ಹತ್ತಾರು ವರ್ಷಗಳಿಂದ ಚಳವಳಿಯೊಂದಿಗೆ ಗುರುತಿಸಿಕೊಂಡವರು ಭೀಕರ ಸಂಗತಿಗಳನ್ನು ತೆರೆದಿಟ್ಟರು.
ಧರ್ಮಸ್ಥಳದಲ್ಲಿ ದಶಕಗಳಿಂದ ಆಗುತ್ತಿರುವ ಅತ್ಯಾಚಾರ, ಕೊಲೆ ಪ್ರಕರಣಗಳ ಹಿಂದಿರುವ ಪಾತಕಿಗಳನ್ನು ಕಂಡು ಹಿಡಿಯುವಂತೆ ವಿವಿಧ ಸಂಘಟನೆಗಳ ಮಹಿಳೆಯರು ಒಗ್ಗೂಡಿ ದನಿ ಎತ್ತಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು (ಮಂಗಳವಾರ) ನಡೆದ ‘ಧರ್ಮಸ್ಥಳ ಸುತ್ತಲಿನ ಅತ್ಯಾಚಾರ/ಹತ್ಯೆ ಪ್ರಕರಣಗಳಲ್ಲಿ ‘ನೊಂದವರೊಂದಿಗೆ ನಾವು ನೀವು: ಸಾರ್ವಜನಿಕ ಸಂವಾದ’ ಕಾರ್ಯಕ್ರಮವು ನ್ಯಾಯಕ್ಕಾಗಿ ಆಗ್ರಹಿಸಿದೆ. ವೇದವಲ್ಲಿ, ಪದ್ಮಲತಾ, ಯಮುನಾ-ನಾರಾಯಣ, ಸೌಜನ್ಯ ಪ್ರಕರಣದಲ್ಲಿನ ತಪ್ಪಿತಸ್ಥರನ್ನು ಕಂಡುಹಿಡಿಬೇಕು ಎಂದು ಹೋರಾಟಗಾರ್ತಿಯರು ಒತ್ತಾಯಿಸಿದ್ದಾರೆ. ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಸೌಜನ್ಯ ಅವರ ತಾಯಿ ಕುಸುಮಾವತಿ ವಿಡಿಯೊ ಸಂದೇಶವನ್ನೂ ರವಾನಿಸಿದ್ದಾರೆ.
ಧರ್ಮಸ್ಥಳದ ಸಂತ್ರಸ್ತರನ್ನು ಭೇಟಿಯಾಗಿ ಕಂಡುಕೊಂಡ ಸಂಗತಿಗಳನ್ನು ಹೋರಾಟಗಾರ್ತಿಯರು ಹಂಚಿಕೊಂಡರು. ಹತ್ತಾರು ವರ್ಷಗಳಿಂದ ಚಳವಳಿಯೊಂದಿಗೆ ಗುರುತಿಸಿಕೊಂಡವರು ಭೀಕರ ಸಂಗತಿಗಳನ್ನು ತೆರೆದಿಟ್ಟರು.
ಮಾನಸ ಬಳಗದ ಚಂಪಾವತಿ ಅವರು ಮಾತನಾಡಿ, “ಸೌಜನ್ಯ ಅವರ ತಾಯಿ ಕುಸುಮಾವತಿಯವರ ಫೋಟೋವನ್ನು ವಿಕಾರಗೊಳಿಸಿ ಹರಿಬಿಡಲಾಗುತ್ತಿದೆ. ಇಂತಹ ಪೋಸ್ಟ್ಗಳನ್ನೆಲ್ಲ ಹಾಕುತ್ತಿರುವವರು ಯಾರು? ಧರ್ಮಸ್ಥಳದಲ್ಲಾಗಿರುವ ಪ್ರಕರಣಗಳಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ತೋರುತ್ತಿದೆ. ಸಂತ್ರಸ್ತರು ದೂರು ಕೊಡಲು ಹೋದರೆ ಬ್ರೈನ್ ಮ್ಯಾಪಿಂಗ್ ಮಾಡೋಣ ಎನ್ನುತ್ತಾರೆ. ಬ್ರೈನ್ ಮ್ಯಾಪಿಂಗ್ ಎಂಬುದನ್ನು ಒಂದು ಅಸ್ತ್ರವಾಗಿ ಬಳಸುತ್ತಿದ್ದಾರೆ” ಎಂದರು.
ಜನಶಕ್ತಿ ಸಂಘಟನೆಯ ಮಲ್ಲಿಗೆ ಸಿರಿಮನೆಯವರು ಮಾತನಾಡಿ, ತಾವು ಧರ್ಮಸ್ಥಳಲ್ಲಿ ಕೇಳಿದ ಸಂಗತಿಗಳನ್ನು ಹಂಚಿಕೊಂಡರು. “ಸಂತ್ರಸ್ತರು ಸ್ಥಳೀಯವಾಗಿ ಆತಂಕ ಮತ್ತು ಒತ್ತಡವನ್ನು ಪ್ರತಿದಿನ ಎದುರಿಸುತ್ತಿದ್ದಾರೆ. ಸೌಜನ್ಯ ಅವರ ತಂದೆ ಕೊಟ್ಟಿರುವ ದೂರಿನಲ್ಲಿ ಹೆಸರಿಸಲಾಗಿರುವ ವ್ಯಕ್ತಿಯೊಬ್ಬ ಇತ್ತೀಚಿನ ಒಂದು ಸಂದರ್ಶನದಲ್ಲಿ, ಕುಸುಮಾವತಿಯವರೂ ಸಾಯುತ್ತಾರೆ ಎಂದಿದ್ದಾನೆ” ಎಂದು ಆತಂಕ ವ್ಯಕ್ತಪಡಿಸಿದರು.

“ವೇದವಲ್ಲಿ ಪ್ರಕರಣದಿಂದ ಇಲ್ಲಿಯವರೆಗೂ ನಾಲ್ಕು ದಶಕಗಳ ಕಾಲ ಸ್ಥಳೀಯರು ಹೋರಾಟವನ್ನು ಕಾಪಿಟ್ಟುಕೊಂಡು ಬಂದಿದ್ದಾರೆ. ಪ್ರಭಾವಿಗಳು, ಏನು ಮಾಡುತ್ತಾರೆ ಎಂಬುದು ಗೊತ್ತಿದ್ದರೂ ಹೋರಾಟವನ್ನು ಸ್ಥಳೀಯರು ನಿಲ್ಲಿಸಿಲ್ಲ. ಎಲ್ಲ ಪಿತೂರಿಗಳನ್ನು ಅರ್ಥಮಾಡಿಕೊಂಡಿದ್ದಾರೆ. ವೇದವಲ್ಲಿಯನ್ನು ಕೊಂದವರು ಯಾರೆಂದು ಗೊತ್ತಿದ್ದರೂ ಆಕೆಯ ಗಂಡನನ್ನೇ ಕೊಲೆ ಅರೋಪಿಯನ್ನಾಗಿ ಮಾಡಿ ಜೈಲಿಗೆ ಕಳುಹಿಸಿದ್ದರು. ಇದು ಸ್ಥಳೀಯರಿಗೆ ಅರಿವಿತ್ತು. ಪದ್ಮಲತಾ ಅವರ ಕೊಲೆಯಾದಾಗ, ಅವರ ತಂದೆ ದೇವಾನಂದರನ್ನು ಆರೋಪಿಯನ್ನಾಗಿ ಮಾಡುತ್ತಾರೆಂದು ಎಚ್ಚೆತ್ತರು. ಪೊಲೀಸರು ದೇವಾನಂದರ ಮನೆಗೆ ಪರಿಶೀಲನೆಗಾಗಿ ಬಂದಾಗ ನೂರಾರು ಕಾರ್ಯಕರ್ತರು ಅವರ ಮನೆಮುಂದೆ ಜಮಾ ಆಗಿದ್ದರು. ಯಾರ ವಿರುದ್ಧ ದೂರು ದಾಖಲಾಗಿತ್ತೋ ಅದೇ ಸಂಸ್ಥೆಯ ಖಾಸಗಿ ವಾಹನದಲ್ಲಿ ಪೊಲೀಸರು ಆಗಮಿಸಿದ್ದರೆಂದು ನಮ್ಮೊಂದಿಗೆ ಸಂತ್ರಸ್ತರು ಹೇಳಿಕೊಂಡಿದ್ದಾರೆ. ನೀವು ಏನು ರಿಪೋರ್ಟ್ ಬರೆಯುತ್ತಿರೋ ಅದನ್ನು ಇಲ್ಲಿಯೇ ಬರೆದು ನಂತರ ತೆರಳಬೇಕೆಂದು ಜನ ಪಟ್ಟು ಹಿಡಿದಿದ್ದರಿಂದ ಮನೆಯಲ್ಲಿ ಏನೂ ಸಿಕ್ಕಿಲ್ಲ ಎಂದು ವರದಿ ಬರೆದು ಪೊಲೀಸರು ಜಾಗ ಖಾಲಿಮಾಡಿದರು. ಇಲ್ಲವಾಗಿದ್ದರೆ ದೇವಾನಂದರನ್ನು ಮತ್ತು ಅವರ ಸ್ನೇಹಿತ ವಿಷ್ಣು ಭಟ್ ಅವರನ್ನು ಆರೋಪಿಯನ್ನಾಗಿ ಮಾಡಿ ಜೈಲಿಗೆ ಕಳುಹಿಸುತ್ತಿದ್ದರು” ಎಂದು ವಿವರಿಸಿದರು.
ಇದನ್ನೂ ಓದಿರಿ: ಧರ್ಮಸ್ಥಳ ಪ್ರಕರಣ | ಬಂಗ್ಲೆಗುಡ್ಡೆ ಪ್ರದೇಶದಲ್ಲಿ ವ್ಯಾಪಕ ಶೋಧಕ್ಕೆ ಎಸ್ಐಟಿ ಮತ್ತೆ ಸಿದ್ಧತೆ!
“ನನ್ನ ಸಹೋದರಿ ಸತ್ತಾಗ ದಾಖಲೆಗಳನ್ನು ಇಡಲಾಗಲಿಲ್ಲ. ಆಗ ಟೆಕ್ನಾಲಜಿ ಇರಲಿಲ್ಲ. ಆದರೆ ಸೌಜನ್ಯ ಸತ್ತಾಗ ಹೇಗೆ ಅನ್ಯಾಯವಾಯಿತು? ಎಂದು ಪದ್ಮಾಲತಾ ಅವರ ಸಹೋದರಿ ಇಂದ್ರಾವತಿ ಕೇಳುತ್ತಾರೆ. ಹೋರಾಟಗಾರರು ಚಳವಳಿಯನ್ನು ಜೀವಂತವಾಗಿ ಇಟ್ಟಿದ್ದಾರೆ. ಈ ಒಗ್ಗಟ್ಟು, ಬಾಂಧವ್ಯ ಮುಖ್ಯ” ಎಂದು ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ ಮಾತನಾಡಿ, “ಎಂಬತ್ತರ ದಶಕದಿಂದಲೂ ಈ ಹೋರಾಟದ ಜೊತೆಯಲ್ಲಿದ್ದೇನೆ. ನ್ಯಾಯ ಸಿಗದೆ ಇರುವುದು ಪ್ರಜಾಪ್ರಭುತ್ವದ ಅಣಕ. ನ್ಯಾಯದೇವತೆಯ ಕಣ್ಣಿನ ಪಟ್ಟಿಯನ್ನು ಮೊದಲೆಲ್ಲ ಕಟ್ಟಲಾಗುತ್ತಿತ್ತು. ಈಗ ತೆಗೆಯಲಾಗುತ್ತಿದೆ. ಆದರೆ ನ್ಯಾಯದೇವತೆಗೆ ಸತ್ಯ ಕಾಣಬೇಕಾಗಿದೆ. ಕೊಂದವರಿಗೆ ಸೂಕ್ತ ‘ಸನ್ಮಾನ’ ಕಾನೂನಿನ ವ್ಯಾಪ್ತಿಯಲ್ಲಿ ಸಿಗಲಿ” ಎಂದು ಮಾರ್ಮಿಕವಾಗಿ ನುಡಿದರು.
ಪೊಲೀಸರ ಬಳಿ ಉತ್ತರವಿರಲಿಲ್ಲ: ಜ್ಯೋತಿ
ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ತಡೆಗಾಗಿ 2016ರಲ್ಲಿ ರಚಿಸಲಾಗಿದ್ದ ಉಗ್ರಪ್ಪ ಸಮಿತಿಯಲ್ಲಿ ಕೆಲಸ ಮಾಡಿರುವ ಜ್ಯೋತಿಯವರು ಧರ್ಮಸ್ಥಳದಲ್ಲಿ ಕಂಡ ಸತ್ಯಗಳನ್ನು ಹೊರಗಿಟ್ಟರು.
“2016ರಲ್ಲಿ ನಮ್ಮ ಸಮಿತಿ ದಕ್ಷಿಣ ಕನ್ನಡ ಜಿಲ್ಲೆಗೆ ಹೋದಾಗ ಧರ್ಮಸ್ಥಳದ ವಿಷಯ ಮುನ್ನೆಲೆಗೆ ಬಂತು. ಸಮಿತಿ ಕೇಳಿದ ಪ್ರಶ್ನೆಗಳಿಗೆ ಬೇಜವಾಬ್ದಾರಿಯಿಂದ ಪೊಲೀಸರು ನಡೆದುಕೊಂಡರು. ಪ್ರತಿ ವರ್ಷ ನೂರು ಅಸಹಜ ಸಾವುಗಳಾಗುತ್ತವೆ ಎಂದು ಅಡಿಷನಲ್ ಎಸ್ಪಿ ಹೇಳಿದ್ದರು. ಒಂದು ಪ್ರದೇಶದಲ್ಲಿ ಎಷ್ಟೊಂದು ಅಸಹಜ ಸಾವುಗಳಾಗುತ್ತಿರುವಾಗ ತಡೆಗಟ್ಟಲು ಏನು ಮಾಡಿದ್ದೀರಿ ಎಂದರೆ ಪೊಲೀಸರ ಬಳಿ ಉತ್ತರವಿರಲಿಲ್ಲ” ಎಂದು ನೆನಪಿಸಿಕೊಂಡರು.

ಧರ್ಮಸ್ಥಳಕ್ಕೆ ಬಂದು ಮುಕ್ತಿ ಪಡೆಯಲು ಸ್ನಾನಘಟ್ಟದಲ್ಲಿ ಸಾಯುತ್ತಾರೆ ಎಂಬ ಉತ್ತರವನ್ನು ಕೊಟ್ಟರು. ಕೇಳಲು ಸಂಕಟವಾಯಿತು. ‘ತಿರುಪತಿಯಲ್ಲಿ ಜನ ಯಾಕೆ ಸಾಯಲ್ಲ’ ಅಂತ ಉಗ್ರಪ್ಪ ಕೇಳಿದರು. ಅವರ ಬಳಿ ಉತ್ತರವಿರಲಿಲ್ಲ. ಹೆಣ್ಣುಮಕ್ಕಳ ಸಾವುಗಳಿಗೆ ಧರ್ಮವನ್ನು ಅಂಟಿಸುವ ಪ್ರಯತ್ನವನ್ನು ನಾವು ಒಪ್ಪಿಕೊಳ್ಳಲು ಆಗಲ್ಲ. ಅಸಹಜ ಸಾವುಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ಹಾಕಲ್ಲ, ಹಾಕಿದರೂ ಸರಿಯಾದ ಸೆಕ್ಷನ್ ಸೇರಿಸಲ್ಲ ಎಂಬುದು ನಮಗೆ ತಿಳಿಯಿತು. ಅಲ್ಲಿನ ಪೊಲೀಸರು ಸರ್ಕಾರದ ಸಮಿತಿಗೂ ಅನುಪಾಲನಾ ವರದಿ ಕೊಟ್ಟಿಲ್ಲ. ಅಂತಹ ಪೊಲೀಸರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಯ ಮಧು ಭೂಷಣ ಮಾತನಾಡಿ, “ಬಲಾಢ್ಯರ ಮರ್ಯಾದೆ, ಘನತೆ ಬಗ್ಗೆ ಬಹಳ ಕಾಳಜಿ ಕಾಣುತ್ತದೆ. ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲ. ಎಸ್ಐಟಿ ರಚನೆಯಾದ ಬಳಿಕ ರಾಜಕೀಯ ಮಾಡಲಾಯಿತು. ಕ್ರೈಮ್ ನಡೆದೇ ಇಲ್ಲ ಎಂಬ ರೀತಿ ವರ್ತಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿರಿ: ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಪೀಕಲಾಟ!
ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಮಾತನಾಡಿ, “ಇದ್ದ ಮೂವರಲ್ಲಿ ಕಂದವರು ಯಾರು? ಧರ್ಮಸ್ಥಳದಲ್ಲಿ ನೀವು ಕೊಲೆ ಮಾಡದೆ ಇನ್ಯಾರು ಕೊಲೆ ಮಾಡಿದರು?” ಎಂದು ಪ್ರಶ್ನಿಸಿದರು.
ಹೋರಾಟಗಾರ್ತಿ ದು.ಸರಸ್ವತಿ ಮಾತನಾಡಿ, “ಗುಜರಾತಿನ ಬಿಲ್ಕಿಸ್ ಬಾನು ಎಂಬ ಹೋರಾಟದ ಹಣತೆಯನ್ನು ನಾವು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ತಪ್ಪಿತಸ್ಥರು ಪರಿವರ್ತನೆ ಹೊಂದುವಂತಹ ಶಿಕ್ಷೆಯನ್ನು ನಾವು ಕೇಳಬೇಕು” ಎಂದು ಆಶಿಸಿದರು.

ಪರ್ಯಾಯ ಕಾನೂನು ವೇದಿಕೆಯ ಪೂರ್ವಾ ಶಂಕರ್ ಮಾತನಾಡಿ, “ಮಾಧ್ಯಮಗಳ ಚೌಕಟ್ಟನ್ನು ಎಸ್ಐಟಿ ನೆನಪಿಸಬೇಕಿದೆ. ಸುಳ್ಳು ಮಾಹಿತಿ ತಪ್ಪಿಸಲು ಕನಿಷ್ಠ ಪಕ್ಷ ಎಸ್ಐಟಿಯಿಂದ ಆಗಾಗ್ಗೆ ಪತ್ರಿಕಾ ಪ್ರಕಟನೆ ಹೊರಬೀಳಬೇಕು” ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿರಿ: ಸೌಜನ್ಯ ಕೇಸ್ ಬಗ್ಗೆ ಅಪಪ್ರಚಾರ; ಸ್ನೇಹಮಯಿ ಕೃಷ್ಣ ವಿರುದ್ಧ ದೂರು
ಚಿಂತಕಿ ಆರ್. ಸುನಂದಮ್ಮ ಮಾತನಾಡಿ, “ಜಿಂಕೆ ಕೊಂದವರ ಮೇಲೆ ಪ್ರಕರಣಗಳಿವೆ. ಇಷ್ಟು ಹೆಣ್ಣುಮಕ್ಕಳು ಸತ್ತರೂ ಬೆಲೆ ಇಲ್ಲವೆ? ಒಂದೇ ರೀತಿಯ ಸಾವುಗಳು ಹೇಗೆ ನಡೆದವು? ಒಂದೇ ಪ್ಯಾಟರ್ನ್ ಇರುವುದನ್ನು ನೋಡಿದರೆ ಒಬ್ಬನೇ ಎಲ್ಲವನ್ನೂ ಎಸಗಿರುವ ಸಾಧ್ಯತೆ ಇದೆ” ಎಂದು ಶಂಕಿಸಿದರು.
ಕಾರ್ಯಕ್ರಮದ ಆಗ್ರಹಗಳು
- ಈಗ ಸರ್ಕಾರ ರಚಿಸಿರುವ ಎಸ್ಐಟಿ ಮೇಲೆ ಯಾವುದೇ ಒತ್ತಡ ಬೀರದಂತೆ, ಪೂರ್ಣ ಸ್ವಾತಂತ್ರ್ಯವನ್ನು ಎಸ್ಐಟಿಗೆ ನೀಡಬೇಕು. ಈವರೆಗೂ ಅಪರಾಧಿಗಳು ಪತ್ತೆಯಾಗಿರದ ಎಲ್ಲ ಅತ್ಯಾಚಾರ ಕೊಲೆ ಪ್ರಕರಣಗಳನ್ನು ತನಿಖೆ ನಡೆಸಲು ಸರ್ಕಾರ ಎಸ್ಐಟಿಗೆ ಸಂಪೂರ್ಣ ಅಧಿಕಾರ ನೀಡಬೇಕು.
- ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿ, ಸಾಕ್ಷ್ಯನಾಶ ಮಾಡಿದ ಅಧಿಕಾರಿಗಳ ವಿರುದ್ಧ ಸೆಪ್ಟೆಂಬರ್ 13, 2024ರಂದು ಹೈಕೋರ್ಟ್ ನೀಡಿರುವ ಆದೇಶದ ಅನ್ವಯ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
- ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಭದ್ರತೆಯನ್ನು ಖಾತ್ರಿಪಡಿಸಲು ಸೂಕ್ತ ಭದ್ರತಾ ನಿಯಮಾವಳಿಗಳನ್ನು ರೂಪಿಸಿ, ಮಹಿಳೆಯರ ಮತ್ತು ಮಕ್ಕಳ ವಿರುದ್ಧದ ಎಲ್ಲ ಸ್ವರೂಪಗಳ ಹಿಂಸೆಯನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಅಭಿಯಾನಗಳನ್ನು ವ್ಯಾಪಕವಾಗಿ ನಡೆಸಬೇಕು.
- ಅಪರಾಧಗಳನ್ನು ಮುಚ್ಚಿಹಾಕಲು ಸಾಕ್ಷ್ಯಗಳನ್ನು ನಾಶಮಾಡುವ ಅಥವಾ ದೂರುದಾರರನ್ನು ಬೆದರಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡು ಮಹಿಳೆಯರ ಮತ್ತು ಮಕ್ಕಳ ವಿರುದ್ಧದ ಹಿಂಸೆಯನ್ನು ನಿಯಂತ್ರಿಸಬೇಕು. ಇಂತಹ ಹೇಯ ಅಪರಾಧಗಳನ್ನು ಎಸಗುವ ಅಪರಾಧಿಗಳಾಗಲಿ ಅವರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ನೀಡುವ ಅಧಿಕಾರಿಗಳಾಗಲಿ ಶಿಕ್ಷೆಯಿಂದ ಪಾರಾಗಲೇಬಾರದು.





