ಮುಖ್ಯಧಾರೆಯ ಮಾಧ್ಯಮ ಜಗತ್ತು ಯಾವುದನ್ನು ತನಗೆ ಮುಖ್ಯ ಎಂದು ಭಾವಿಸಿ ಅದರ ಮೇಲೆಯೇ ಪೂರ್ಣ ದೃಷ್ಟಿ ಹರಿಸುತ್ತದೆಯೋ ವಾರ್ತಾಭಾರತಿ ಅಂತದ್ದನ್ನು ಅನುಮಾನಿಸಿ ನೋಡುತ್ತದೆ. ಇಂತಹ ವಾರ್ತಾಭಾರತಿ ಡಿ. 20ರಿಂದ ಅಧಿಕೃತವಾಗಿ ಕಲ್ಯಾಣ ಕರ್ನಾಟಕ ಆವೃತ್ತಿಯನ್ನು ಆರಂಭಿಸುತ್ತಿದೆ...
ಇದೀಗ ‘ವಾರ್ತಾಭಾರತಿ’ ದೈನಿಕ ಕಲ್ಯಾಣ ಕರ್ನಾಟಕವನ್ನು ಪ್ರವೇಶಿಸುತ್ತಿದೆ. ಡಿಸೆಂಬರ್ 18ರಂದು ವಾರ್ತಾಭಾರತಿ ಕಚೇರಿಯು ಕಲಬುರಗಿಯಲ್ಲಿ ಉದ್ಘಾಟನೆ ಆಗಿದೆ. ಡಿ.20ರಂದು ಅಧಿಕೃತವಾಗಿ ಕಲ್ಯಾಣ ಕರ್ನಾಟಕ ಆವೃತ್ತಿ ಬಿಡುಗಡೆಯಾಗುತ್ತಿದೆ. ಇಷ್ಟೆಲ್ಲಾ ದಿನಪತ್ರಿಕೆಗಳು, ಕಲಬುರಗಿ ಒಂದರಲ್ಲೆ 55ರಷ್ಟು ಸ್ಥಳೀಯ ಪತ್ರಿಕೆಗಳು ಇರುವಾಗ ‘ವಾರ್ತಾಭಾರತಿ’ ಪತ್ರಿಕೆಯ ಅಗತ್ಯವಿತ್ತಾ? ಎನ್ನುವ ಪ್ರಶ್ನೆಯೊಂದು ಮೂಡುತ್ತದೆ. ಸರಳವಾದ ಉತ್ತರವೆಂದರೆ ಹೌದು. ವಾರ್ತಾಭಾರತಿಯಂತಹ ಪತ್ರಿಕೆ ಕಲ್ಯಾಣ ಕರ್ನಾಟಕಕ್ಕೆ ಅಗತ್ಯವಿತ್ತು. ಕಾರಣವೆಂದರೆ ವಾರ್ತಾಭಾರತಿ ಕರ್ನಾಟಕದ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಗುರುತನ್ನು ಛಾಪಿಸಿದೆ.
ಮೊದಲನೆಯದಾಗಿ, ವಾರ್ತಾಭಾರತಿಯ ಗುರುತು ಏನೆಂದರೆ ಮುಖ್ಯಧಾರೆಯ ಮಾಧ್ಯಮ ಜಗತ್ತು ಯಾವುದನ್ನು ತನಗೆ ಮುಖ್ಯ ಎಂದು ಭಾವಿಸಿ ಅದರ ಮೇಲೆಯೇ ಪೂರ್ಣ ದೃಷ್ಟಿ ಹರಿಸುತ್ತದೆಯೋ ವಾರ್ತಾಭಾರತಿ ಅಂತದ್ದನ್ನು ಅನುಮಾನಿಸಿ ನೋಡುತ್ತದೆ. ಎಲ್ಲರೂ ಮುಖ್ಯ ಎಂದು ಬಿಂಬಿಸಿದ್ದನ್ನು ಪರಿಶೀಲಿಸುತ್ತಲೇ, ಅಲಕ್ಷ್ಯಕ್ಕೆ ಒಳಗಾದ ಸಂಗತಿಗಳನ್ನು, ನಿರ್ಲಕ್ಷ್ಯಕ್ಕೆ ಒಳಗಾದ, ಮುಖ್ಯಧಾರೆಯ ಅಬ್ಬರದಲ್ಲಿ ದನಿ ಕಳೆದುಕೊಂಡ ಸಂಗತಿಗಳನ್ನು ಗಮನಿಸುತ್ತದೆ. ಇದಕ್ಕೊಂದು ಉದಾಹರಣೆ ಎಂದರೆ, ಎಲ್ಲ ಪತ್ರಿಕೆಗಳ ಸಂಪಾದಕೀಯಗಳನ್ನು ಎದುರಿಗಿಟ್ಟುಕೊಂಡು ವಾರ್ತಾಭಾರತಿ ಪತ್ರಿಕೆಯ ಸಂಪಾದಕೀಯ ಗಮನಿಸಿದರೆ ಅದರ ಫರಕು ಕಾಣುತ್ತದೆ. ಹಾಗಾಗಿಯೇ ವಾರ್ತಾಭಾರತಿ ಪ್ರತಿ ವರ್ಷದ ಅತ್ಯುತ್ತಮ ಸಂಪಾದಕೀಯಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದೆ. ಇನ್ನು ಸುದ್ದಿಗಳ ಆಯ್ಕೆ ಆದ್ಯತೆ ಪ್ರಕಟಣೆಯಲ್ಲಿ ಕೂಡ ವಾರ್ತಾಭಾರತಿ ತನ್ನದೇ ಆದ ವಿಶಿಷ್ಟತೆಯನ್ನು ಉಳಿಸಿಕೊಂಡು ಬಂದಿದೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಆರಂಭಕ್ಕೆ ಉಲ್ಲೇಖಿಸುವ, ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ; ಯಾವುದೂ ಯಕಶ್ಚಿತವಲ್ಲ’ ಎನ್ನುವ ತತ್ವವನ್ನು ಪಾಲಿಸುತ್ತಾ ಬಂದಿದೆ. ಇದುವೆ ಇತರೆಲ್ಲ ಪತ್ರಿಕೆಗಳಿಗಿಂತ ವಾರ್ತಾಭಾರತಿಯನ್ನು ಭಿನ್ನವಾಗಿಸಿದೆ.
ಇದನ್ನು ಓದಿದ್ದೀರಾ?: ಉತ್ತರ ಕರ್ನಾಟಕವನ್ನು ನಮ್ಮ ಸರ್ಕಾರ ನಿರ್ಲಕ್ಷಿಸಿಲ್ಲ: ಸಿಎಂ ಸಿದ್ದರಾಮಯ್ಯ
ಎರಡನೆಯದಾಗಿ 1991ರಿಂದ ಅಂದರೆ ಬಾಬರಿ ಮಸೀದಿಯ ಧ್ವಂಸದಿಂದ ಭಾರತದಲ್ಲಿ ಮುಸ್ಲಿಮರನ್ನು ಕಲ್ಪಿತ ಶತ್ರುವಿನಂತೆ ಹಿಂದೂ ಮೂಲಭೂತವಾದಿಗಳು ಬಿಂಬಿಸುತ್ತಾ ಬಂದಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ವ್ಯಾಪಕವಾಗುತ್ತಿದೆ. ಎಲ್ಲ ಧರ್ಮಿಯರಲ್ಲೂ ಇರಬಹುದಾದ ಮನುಷ್ಯ ಸಹಜ ಕೇಡಿನ ತರಹವೇ ಮುಸ್ಲಿಮರಲ್ಲಿಯೂ ಇರಬಹುದಾದ ಕೇಡನ್ನು ಮಾತ್ರ ದೊಡ್ಡದಾಗಿ ತೋರಿಸುವುದು, ಮುಸ್ಲಿಮರದಲ್ಲದವರ ಕೇಡನ್ನೂ ಕೂಡ ಮುಸ್ಲಿಮರದ್ದೆಂದು ಸುಳ್ಳು ಸುದ್ದಿಗಳಲ್ಲಿ ಅವರನ್ನು ಅಪರಾಧಿಗಳನ್ನಾಗಿ ತೋರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮುಸ್ಲಿಮರ ಬಗ್ಗೆ ಹಬ್ಬಿಸುತ್ತಿರುವ ಅನಗತ್ಯ ಸುಳ್ಳು ಮತ್ತು ಪೂರ್ವನಿಯೋಜಿತ ಹುನ್ನಾರಗಳನ್ನು ವಾರ್ತಾಭಾರತಿ ಬಯಲು ಮಾಡುತ್ತಾ ಬಂದಿದೆ. ಈ ಅರ್ಥದಲ್ಲಿ ಈ ದೇಶದಲ್ಲಿ ಮುಸ್ಲಿಮರನ್ನೂ ಒಳಗೊಂಡಂತೆ ಜೈನ, ಬೌದ್ಧ, ಸಿಖ್, ಲಿಂಗಾಯತ ಮೊದಲಾದ ಧಾರ್ಮಿಕ ಅಲ್ಪಸಂಖ್ಯಾತರ ಧನಿಯಾಗಿ ವಾರ್ತಾಭಾರತಿ ಹೆಚ್ಚು ಕಾಳಜಿ ವಹಿಸುತ್ತಿದೆ. ಅಂತೆಯೇ ಹಿಂದೂ ಧರ್ಮದಲ್ಲಿಯೇ ಅಸ್ಪೃಶ್ಯತೆಯ ಆಚರಣೆಗೆ ಬಲಿಯಾದ ದಲಿತ ದಮನಿತರ ಪರವಾದ ದನಿಯಾಗಿ ಕೆಲಸ ಮಾಡುತ್ತಿದೆ.
ದೇಶದಲ್ಲಿದ್ದೂ ಕಣ್ಣಿಗೆ ಕಾಣದಂತೆ, ಪ್ರಭುತ್ವವು ಕಣ್ತೆರೆದು ನೋಡದ ಚಿಕ್ಕಪುಟ್ಟ ಬುಡಕಟ್ಟುಗಳು, ಆದಿವಾಸಿ ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳು, ಲಿಂಗಾಂತರಿ (ಟ್ರಾನ್ಸ್ ಜೆಂಡರ್) ಸಮುದಾಯವನ್ನೂ ಒಳಗೊಂಡಂತೆ ದಮನಕ್ಕೆ ಒಳಗಾದ ಸಮುದಾಯಗಳ ಪರವಾದ ಹಕ್ಕೊತ್ತಾಯಗಳಂತೆ ವಾರ್ತಾಭಾರತಿ ಅವುಗಳ ಸಂಕಟವನ್ನು ಮುನ್ನಲೆಗೆ ತರುತ್ತಿದೆ.
ಮೂರನೆಯದಾಗಿ, ಇದೀಗ ಭಾರತದ ಮಾಧ್ಯಮಗಳು ಹೆದರಿಸುತ್ತಿರುವ ಬಹುದೊಡ್ಡ ಬಿಕ್ಕಟ್ಟು ಯಾವುದೆಂದರೆ ಭರಪೂರ ಸುಳ್ಳುಸುದ್ದಿಗಳ ಅಬ್ಬರ. ಜನರಿಗೆ ಸುಳ್ಳು ಯಾವುದು? ಸತ್ಯ ಯಾವುದು ಎಂದು ಗುರುತಿಸುವುದೇ ಕಷ್ಟವಾಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ಪರಿಶೀಲಿಸಿ ಜನರಿಗೆ ತಿಳಿಸಲೆಂದೇ ಫ್ಯಾಕ್ಟ್ ಚೆಕ್ ತರಹದ ವೆಬ್ ಸೈಟುಗಳು ಹುಟ್ಟಿಕೊಂಡಿವೆ. ಇಂತಹ ಹೊತ್ತಲ್ಲಿ ವಾರ್ತಾಭಾರತಿ ಪತ್ರಿಕೆಯು ಸತ್ಯಕ್ಕೆ ನಿಷ್ಠವಾಗಿ ವರದಿ ಮಾಡುತ್ತದೆ. ಯಾವುದೇ ವಿದ್ಯಮಾನವನ್ನು ಹತ್ತಾರು ಬಾರಿ ಪರಿಶೀಲಿಸಿ ಪ್ರಕಟಿಸುತ್ತದೆ. ಹಾಗಾಗಿ ವಾರ್ತಾಭಾರತಿ ಓದುಗರ ವಿಶ್ವಾಸವನ್ನು ಗಳಿಸಿಕೊಂಡಿದೆ. ಭಾರತದಲ್ಲಿನ ಗೋದಿ ಮೀಡಿಯಾ ಸನಾತನವಾದಿ ನಂಬಿಕೆಗಳನ್ನು ವಿಜೃಂಭಿಸುವಂತೆ ಕೆಲಸ ಮಾಡುತ್ತಿದೆ. ಪ್ರಭುತ್ವದ ಗುಲಾಮರಾಗಿ ತಮ್ಮ ದನಿಯನ್ನು ಉಳ್ಳವರ ಪರವಾಗಿ ತಿರುಗಿಸಿವೆ. ಆದರೆ ವಾರ್ತಾಭಾರತಿ ಇಲ್ಲದವರ, ನೊಂದವರ ಪರವಾದ ದನಿಯಾಗಿ ಗಮನಸೆಳೆದಿದೆ. ಈ ಎಲ್ಲಾ ಕಾರಣಕ್ಕೆ ವಾರ್ತಾಭಾರತಿಯು ಕಲ್ಯಾಣ ಕರ್ನಾಟಕಕ್ಕೆ ಅಗತ್ಯವಿತ್ತು.
ಅಂತೆಯೇ ಕಲ್ಯಾಣ ಕರ್ನಾಟಕ ವಾರ್ತಾಭಾರತಿ ನಂಬಿದ ಕೆಲವು ತತ್ವಗಳನ್ನು ಬದುಕುತ್ತಿದೆ. ವಾರ್ತಾಭಾರತಿಯ ಪ್ರಧಾನ ಕಚೇರಿ ಇರುವ ಮಂಗಳೂರು ಭಾಗದಲ್ಲಿ ಧಾರ್ಮಿಕ ಮೂಲಭೂತವಾದಿಗಳು ಹಬ್ಬಿಸಿದ ಕೋಮುದ್ವೇಷ ವ್ಯಾಪಕವಾಗಿದೆ. ಆದರೆ ಅದಿಲ್ಲಿ ತಿರುಗುಮುರುಗು. ಕಾರಣ ಕಲ್ಯಾಣ ಕರ್ನಾಟಕ ಭಾಗವು ಧಾರ್ಮಿಕ ಸಾಮರಸ್ಯದ ಕೇಂದ್ರವಾಗಿದೆ. ಈ ಸಾಮರಸ್ಯದ ನೆಲೆಗಳನ್ನು ಮತ್ತಷ್ಟು ಫೋಕಸ್ ಮಾಡಿ ತೋರಿಸಲು ವಾರ್ತಾಭಾರತಿಗೆ ಸಾಧ್ಯವಾಗಬಹುದು. ನಾನು ಗಮನಿಸಿದಂತೆ ಕಲ್ಯಾಣ ಕರ್ನಾಟಕದ ಮಾಧ್ಯಮಗಳಲ್ಲಿ ಸಂಶೋಧನಾ ವರದಿಗಾರಿಕೆ, ಇನ್ವೆಸ್ಟಿಗೇಷನ್ ಜರ್ನಲಿಸಂ ಅಪರೂಪವಾಗಿದೆ. ಈ ಸಂಗತಿಯನ್ನು ಗಮನಿಸಿ ವಾರ್ತಾಭಾರತಿ ಸಂಶೋಧನ ವರದಿಗಾರಿಕೆಯನ್ನು ಇನ್ವೆಸ್ಟಿಗೇಷನ್ ಜರ್ನಲಿಸಂ ಅನ್ನು ಮುನ್ನಲೆಗೆ ತರಬೇಕಾಗಿದೆ.
ಸರಕಾರದಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಎಷ್ಟೆಲ್ಲಾ ಅನುದಾನ ಹರಿದು ಬಂದರೂ ಕಲ್ಯಾಣ ಕರ್ನಾಟಕದ ಅಭಿವೃದ್ದಿಯಂತೂ ಹೇಳಿಕೊಳ್ಳುವಂತಿಲ್ಲ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ (ಕೆಕೆಆರ್ಡಿಬಿ) ಕೆಲಸಗಳನ್ನು ಪರಾಮರ್ಶಿಸಿ, ಈ ತನಕದ ಅನುದಾನ ಮತ್ತು ಅದರ ಬಳಕೆಯ ಬಗ್ಗೆ ಸಂಶೋಧನ ವರದಿಗಳನ್ನು ಪ್ರಕಟಿಸುವಂತಾಗಬೇಕು. ಅಂತೆಯೇ ಮುಂದಿನ ಯೋಜನೆಯ ನೀಲನಕ್ಷೆಗಳನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುವಂತಾಗಬೇಕು. ಇಷ್ಟು ಮಾಡಿದರೆ ವಾರ್ತಾಭಾರತಿ ಕಲ್ಯಾಣ ಕರ್ನಾಟಕಕ್ಕೆ ಮಾಡಿದ ದೊಡ್ಡ ಉಪಕಾರವಾದಂತಾಗುತ್ತದೆ. ಅಂತೆಯೇ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳನ್ನು ಒಳಗೊಂಡಂತೆ ಅಧಿಕಾರಶಾಹಿಯಲ್ಲಿಯೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಇದನ್ನೂ ಕೂಡ ವಾರ್ತಾಭಾರತಿ ತನ್ನ ವರದಿಗಳಲ್ಲಿ ತೋರಿಸಲು ಸಾಧ್ಯವಾದರೆ ಈ ಭಾಗದ ಜನರಲ್ಲಿ ಹೊಸ ಭರವಸೆಯನ್ನು ಹುಟ್ಟಿಸಬಲ್ಲದು.
ಇದನ್ನು ಓದಿದ್ದೀರಾ? ಡಿ.20ರಂದು ವಾರ್ತಾಭಾರತಿ ದಿನಪತ್ರಿಕೆಯ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ: ಹಲವು ಗಣ್ಯರು ಭಾಗಿ
ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣವನ್ನು ಭ್ರಷ್ಟಗೊಳಿಸಲಾಗಿದೆ. ಅದುವೆ ಈ ಭಾಗದ ಹಿಂದುಳಿಯುವಿಕೆಯ ಅಡಿಪಾಯ. ಹಾಗಾಗಿ, ನಿರಂತರವಾಗಿ ಶಿಕ್ಷಣಕ್ಕೆ ಸಂಬಂಧಿಸಿದ ಚಿಕಿತ್ಸಕ ವರದಿಗಳನ್ನು ಪ್ರಕಟಿಸಬೇಕಿದೆ. ಆ ಮೂಲಕ ಕಿಂಚಿತ್ತಾದರೂ ಶಿಕ್ಷಣದಲ್ಲಿ ಬದಲಾವಣೆ ತರಲು ವಾರ್ತಾಭಾರತಿ ನೆರವಾದರೆ ಅಷ್ಟರ ಮಟ್ಟಿಗೆ ಈ ಭಾಗಕ್ಕೆ ಒಂದು ಕೊಡುಗೆ ಕೊಟ್ಟಂತಾಗುತ್ತದೆ. ಈ ಮೇಲೆ ಹೇಳಿದ ಇಂತಹ ಕೆಲಸಗಳನ್ನು ಈಗಾಗಲೆ ಒಂದಷ್ಟು ಈದಿನ ಡಾಟ್ ಕಾಂ ಆರಂಭಿಸಿದೆ. ಡಿಜಿಟಲ್ ಮಾಧ್ಯಮವಾದ್ದರಿಂದ ಅದರ ಶ್ರಮ ಸಾಲದು. ಇದೀಗ ವಾರ್ತಾಭಾರತಿ ಮತ್ತು ಈದಿನ ಡಾಟ್ ಕಾಮ್ ಎರಡೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕಾಗಿದೆ. ಇಂತಹ ಹಲವು ಕಾರಣಗಳಿಗಾಗಿ ಕಲ್ಯಾಣ ಕರ್ನಾಟಕದ ವಾರ್ತಾಭಾರತಿಯ ಮುದ್ರಿತ ಆವೃತ್ತಿಯ ಅಗತ್ಯವಿತ್ತು.
ಆರಂಭಕ್ಕೆ ನೂರಾರು ಅಪೇಕ್ಷೆಗಳ ಭಾರ ಹೊರಿಸುವುದು ಬೇಡ. ನಿಧಾನಕ್ಕೆ ಈ ಭಾಗದ ಜನರ ಮನೆ ಮನಗಳಲ್ಲಿ ನೆಲೆಯೂರಲಿ ಎಂದು ಆಶಿಸುತ್ತೇನೆ. ವಾರ್ತಾಭಾರತಿಯನ್ನು ಕಲ್ಯಾಣ ಕರ್ನಾಟಕಕ್ಕೆ ಸ್ವಾಗತಿಸುತ್ತಾ, ಅದರ ಪಯಣಕ್ಕೆ ಶುಭಕೋರುವೆ.

ಅರುಣ್ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು




