2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸಾಧಿಸಿದ ಭರ್ಜರಿ ಜಯಿಸಿದ ಬೆನ್ನಲ್ಲೇ ಪಾಕ್ನ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್, ಭಾರತದ ಈ ಪ್ರಾಬಲ್ಯವು “ಕ್ರಿಕೆಟ್ ಅನ್ನು ಹಾಳುಮಾಡಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 96 ರನ್ಗಳ ಬೃಹತ್ ಅಂತರದಿಂದ ನ್ಯೂಜಿಲೆಂಡ್ ಅನ್ನು ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತು. ಕ್ರಿಕೆಟ್ ಪಂಡಿತರು ಭಾರತದ ಈ ಅದ್ಭುತ ಪ್ರದರ್ಶನವನ್ನು ಕೊಂಡಾಡುತ್ತಿದ್ದರೆ, ಸಂದರ್ಶನವೊಂದರಲ್ಲಿ ಮಾತನಾಡಿದ ಅಖ್ತರ್, ಭಾರತದ ತಂಡವನ್ನು ನೆರೆಹೊರೆಯ ಕ್ರಿಕೆಟ್ ಆಟದಲ್ಲಿ ದಬ್ಬಾಳಿಕೆ ಮಾಡುವ ‘ಶ್ರೀಮಂತ ಹುಡುಗನಿಗೆ’ ಹೋಲಿಸಿದ್ದಾರೆ.
”ಇದೊಂಥರಾ ಬೀದಿಯಲ್ಲಿರುವ ಶ್ರೀಮಂತ ಹುಡುಗನೊಬ್ಬ ತನ್ನ ನೆರೆಹೊರೆಯ ಬಡ ಮಕ್ಕಳನ್ನು ಕರೆದು, ‘ಬನ್ನಿ ಕ್ರಿಕೆಟ್ ಆಡೋಣ’ ಎಂದಂತಿದೆ. ಭಾರತ ನಮ್ಮ ಜೊತೆ ಇದನ್ನೇ ಮಾಡುತ್ತಿದೆ. ಎಂಟು ತಂಡಗಳಲ್ಲಿ ನಾಲ್ಕನ್ನು ಉಳಿಸಿಕೊಳ್ಳುತ್ತಾರೆ, ಆಮೇಲೆ ಆ ನಾಲ್ಕರಲ್ಲಿ ಮೂರನ್ನು ಕರೆದು ಮುಂದಕ್ಕೆ ಹೋಗುತ್ತಾರೆ. ನಂತರ ‘ನೋಡಿ, ನಾನು ಗೆದ್ದೆ’ ಎನ್ನುತ್ತಾರೆ. ಅವರು ಕ್ರಿಕೆಟ್ ಅನ್ನು ಸಂಪೂರ್ಣವಾಗಿ ಹಾಳುಮಾಡಿದ್ದಾರೆ” ಎಂದು ಅಖ್ತರ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ನ್ಯೂಜಿಲೆಂಡ್ ಮಣಿಸಿ 96 ರನ್ಗಳ ಬೃಹತ್ ಜಯ; ಸತತ 2ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಭಾರತ
ಫೈನಲ್ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಅಖ್ತರ್, ಭಾರತವೇ ಗೆಲ್ಲುವ ನೆಚ್ಚಿನ ತಂಡ ಎಂಬುದನ್ನು ಒಪ್ಪಿಕೊಂಡಿದ್ದರೂ, “ಕ್ರಿಕೆಟ್ನ ಒಳಿತಿಗಾಗಿ ನ್ಯೂಜಿಲೆಂಡ್ ಗೆಲ್ಲಬೇಕು” ಎಂಬ ಆಶಯ ವ್ಯಕ್ತಪಡಿಸಿದ್ದರು. “ಭಾರತದ 150 ಕೋಟಿ ಜನರ ನಿರೀಕ್ಷೆಯ ಒತ್ತಡ ಭಾರತದ ಮೇಲಿದೆ. ಇದೇ ಅಹಮದಾಬಾದ್ನಲ್ಲಿ ಆಸ್ಟ್ರೇಲಿಯಾ ಎದುರು ಏಕದಿನ ವಿಶ್ವಕಪ್ ಫೈನಲ್ ಸೋತ ಇತಿಹಾಸವೂ ಇದೆ. ಆದರೆ, ಕ್ರಿಕೆಟ್ನ ಒಳಿತಿಗಾಗಿ ಈ ಬಾರಿ ನ್ಯೂಜಿಲೆಂಡ್ ವಿಶ್ವಕಪ್ ಗೆಲ್ಲುವ ಸಮಯ ಬಂದಿದೆ” ಎಂದಿದ್ದರು.
ಒಂದೆಡೆ ಟೀಕೆಗಳ ಮಳೆಗರೆದರೂ, ಭಾರತದ ಯಶಸ್ಸಿನ ಹಿಂದಿರುವ ಮುಖ್ಯ ಕಾರಣವೊಂದನ್ನು ಅಖ್ತರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕಠಿಣ ಪರಿಸ್ಥಿತಿಯಲ್ಲೂ ಆಟಗಾರರ ಬೆನ್ನಿಗೆ ನಿಂತ ಭಾರತ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ನಿಲುವೇ ಇಂಥ ಪ್ರಮುಖ ಟೂರ್ನಿಗಳಲ್ಲಿ ಗೆಲುವಿನ ವ್ಯತ್ಯಾಸವನ್ನು ತಂದುಕೊಡುತ್ತದೆ ಎಂದು ಅವರು ಹೊಗಳಿದ್ದಾರೆ.
ಪಾಕಿಸ್ತಾನದ ಮತ್ತೋರ್ವ ಮಾಜಿ ಆಟಗಾರ ಮೊಹಮ್ಮದ್ ಆಮಿರ್ ಕೂಡ ‘ಹಾರ್ನಾ ಮನಾ ಹೈ’ ಕಾರ್ಯಕ್ರಮದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. “ಭಾರತದ ಗೆಲುವಿನ ಬಹುಪಾಲು ಶ್ರೇಯಸ್ಸು ನ್ಯೂಜಿಲೆಂಡ್ ಬೌಲರ್ಗಳಿಗೆ ಸಲ್ಲಬೇಕು. ಕಿವೀಸ್ ಬೌಲರ್ಗಳು ಒತ್ತಡ ಹೇರಲು ವಿಫಲರಾಗಿದ್ದೇ ಭಾರತೀಯ ಬ್ಯಾಟರ್ಗಳು ಸುಲಭವಾಗಿ, ತಮ್ಮದೇ ವೇಗದಲ್ಲಿ ರನ್ ಕಲೆಹಾಕಲು ಕಾರಣವಾಯಿತು” ಎಂದು ಹೇಳಿದ್ದಾರೆ.





