ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಗಳಲ್ಲಿ ಅಫ್ಘಾನಿಸ್ತಾನದ ಮೂವರು ದೇಶೀಯ ಕ್ರಿಕೆಟಿಗರು ಸಾವನ್ನಪ್ಪಿದ ನಂತರ, ಪಾಕಿಸ್ತಾನ ಮತ್ತು ಶ್ರೀಲಂಕಾ ಒಳಗೊಂಡ ತ್ರಿಕೋನ ಟಿ20 ಸರಣಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಘೋಷಿಸಿದೆ. ಸರಣಿಯು ನವೆಂಬರ್ 5ರಿಂದ 29ರವರೆಗೆ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಿಗದಿಯಾಗಿತ್ತು.
ಈ ದಾಳಿಗಳಲ್ಲಿ ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್ ಎಂಬ ಮೂರು ಕ್ರಿಕೆಟಿಗರು ಸೇರಿದಂತೆ ಐದು ಮಂದಿ ನಾಗರಿಕರು ಹತರಾಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಈ ಆಟಗಾರರು ಶರಣಾ ನಗರದಲ್ಲಿ ಸ್ನೇಹಪೂರ್ವಕ ಪಂದ್ಯದಲ್ಲಿ ಭಾಗವಹಿಸಿ ಮರಳಿ ಉರ್ಗುನ್ ಜಿಲ್ಲೆಗೆ ಆಗಮಿಸುತ್ತಿದ್ದಾಗ ದಾಳಿಗೆ ಗುರಿಯಾದರು. ಎಸಿಬಿ (ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್) ಈ ಘಟನೆಯನ್ನು ಅಫ್ಘಾನಿಸ್ತಾನ ಕ್ರೀಡಾ ಸಮುದಾಯಕ್ಕೆ ದೊಡ್ಡ ನಷ್ಟವೆಂದು ತಿಳಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದೆ.
ಇದನ್ನು ಓದಿದ್ದೀರಾ? ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡ ಸಿದ್ದ; ಶುಭಮನ್ ಗಿಲ್ಗೆ ನಾಯಕತ್ವ – ತಂಡಕ್ಕೆ ಮರಳಿದ ಕೊಹ್ಲಿ, ರೋಹಿತ್
ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಈ ದಾಳಿಗಳನ್ನು “ಅಮಾನುಷ” ಮತ್ತು “ಬರ್ಬರ” ಎಂದು ಖಂಡಿಸಿ, ಎಸಿಬಿಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. “ಮಹಿಳೆಯರು, ಮಕ್ಕಳು ಮತ್ತು ಯುವ ಕ್ರಿಕೆಟಿಗರ ಜೀವಗಳು ಹಾನಿಯಾಗಿವೆ. ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಮಾನವ ಹಕ್ಕುಗಳ ಉಲ್ಲಂಘನೆ” ಎಂದು ಅವರು ಹೇಳಿದ್ದಾರೆ.
ಈ ಘಟನೆ ಅಫ್ಘಾನ್-ಪಾಕ್ ಸಂಬಂಧಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತೋರಿಸುತ್ತದೆ. ಅಕ್ಟೋಬರ್ 9ರಂದು ಪಾಕಿಸ್ತಾನವು ಕಾಬೂಲ್, ಖೋಸ್ತ್, ಜಲಾಲಾಬಾದ್ ಮತ್ತು ಪಕ್ಟಿಕಾದಲ್ಲಿ ಟಿಟಿಪಿ ಗುರಿಯಾಗಿ ವೈಮಾನಿಕ ದಾಳಿ ನಡೆಸಿತು. ಅಕ್ಟೋಬರ್ 11ರಂದು ಗಡಿ ಘರ್ಷಣೆಗಳು ಆರಂಭವಾಗಿ, ಎರಡೂ ಕಡೆಗಳಲ್ಲಿ ಹತ್ತಾರು ಸಾವುಗಳಾದವು. 48 ಗಂಟೆಗಳ ಶಾಂತಿಯುತ ಕದನವಿರಾಮವನ್ನು ಉಲ್ಲಂಘಿಸಿ ಪಾಕಿಸ್ತಾನವು ಪುನಃ ದಾಳಿ ನಡೆಸಿತು ಎಂದು ತಾಲಿಬಾನ್ ಆರೋಪಿಸಿದೆ. ದೋಹಾದಲ್ಲಿ ಮಾತುಕತೆಗಳ ನಡುವೆಯೂ ಉದ್ವಿಗ್ನತೆ ಮುಂದುವರಿದಿದೆ. ಅಕ್ಟೋಬರ್ 17ರಂದು ಗಡಿಯಲ್ಲಿ ಆತ್ಮಹತ್ಯಾ ದಾಳಿಯಲ್ಲಿ 7 ಪಾಕ್ ಸೈನಿಕರು ಸಾವನ್ನಪ್ಪಿದ್ದರು





