ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಭಾರತೀಯ ಮೂಲದ ಆಟಗಾರರು ಮಿಂಚುತ್ತಿರುವುದು ಇದೇ ಮೊದಲೇನಲ್ಲ. ಆದಿತ್ಯ ಅಶೋಕ್ ಮತ್ತು ರಚಿನ್ ರವೀಂದ್ರ ಈ ಪರಂಪರೆಯ ಹೊಸ ಕೊಂಡಿಗಳು ಮಾತ್ರ. ಇವರಿಗಿಂತ ಮೊದಲು ಹಲವು ದಿಗ್ಗಜರು ಕಿವೀಸ್ ಜೆರ್ಸಿಯಲ್ಲಿ ಮಿಂಚಿದ್ದಾರೆ.
ಕಳೆದ ಏಕದಿನ ವಿಶ್ವಕಪ್ನಲ್ಲಿ ಕನ್ನಡಿಗ ರಚಿನ್ ರವೀಂದ್ರ ತಮ್ಮ ಅಮೋಘ ಆಟದ ಮೂಲಕ ಭಾರತೀಯರ ಮನ ಗೆದ್ದಿದ್ದರು. “ನಮ್ಮ ಹುಡುಗ” ಎಂದು ಭಾರತೀಯ ಅಭಿಮಾನಿಗಳು ಅವರನ್ನು ಕೊಂಡಾಡಿದ್ದು ಈಗ ಇತಿಹಾಸ. ಆ ನೆನಪು ಮಾಸುವ ಮುನ್ನವೇ ನ್ಯೂಜಿಲೆಂಡ್ ತಂಡದಲ್ಲಿ ಮತ್ತೊಬ್ಬ ಭಾರತೀಯ ಮೂಲದ ಯುವ ಪ್ರತಿಭೆ ಟೀಮ್ ಇಂಡಿಯಾ ವಿರುದ್ಧ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ. ಅವರೇ ತಮಿಳುನಾಡು ಮೂಲದ ಲೆಗ್ ಸ್ಪಿನ್ನರ್ ಆದಿತ್ಯ ಅಶೋಕ್.
ಇಂದು(ಜ.11) ವಡೋದರದ ಬಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಪ್ರಕ್ರಿಯೆಯ ವೇಳೆ ಕಿವೀಸ್ ನಾಯಕ ಮೈಕೆಲ್ ಬ್ರೇಸ್ವೆಲ್, “ಆದಿತ್ಯ ಅಶೋಕ್ ನಮ್ಮ ತಂಡದ ಪ್ರಮುಖ ಸ್ಪಿನ್ನರ್” ಎಂದು ಘೋಷಿಸಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಈ ಹೇಳಿಕೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಆದಿತ್ಯ ಅಶೋಕ್ ಹೆಸರು ಟ್ರೆಂಡ್ ಆಗಲಾರಂಭಿಸಿದೆ.
ವೆಲ್ಲೂರಿನಿಂದ ಆಕ್ಲೆಂಡ್ ಕಡೆಗೆ: ಒಂದು ಪಯಣ
23 ವರ್ಷದ ಆದಿತ್ಯ ಅಶೋಕ್ ಮೂಲತಃ ನಮ್ಮ ನೆರೆಯ ತಮಿಳುನಾಡಿನವರು. ವೆಲ್ಲೂರಿನಲ್ಲಿ ಜನಿಸಿದ ಇವರು, ತಮ್ಮ ನಾಲ್ಕನೇ ವಯಸ್ಸಿನವರೆಗೂ ಭಾರತದಲ್ಲೇ ಬೆಳೆದರು. ಬಳಿಕ ಇವರ ಪೋಷಕರು ಉಜ್ವಲ ವೃತ್ತಿಜೀವನವನ್ನು ಅರಸಿ ನ್ಯೂಜಿಲೆಂಡ್ನ ಆಕ್ಲೆಂಡ್ಗೆ ವಲಸೆ ಹೋದರು. ಹೀಗೆ ಬಾಲ್ಯದಲ್ಲೇ ಕ್ರಿಕೆಟ್ ಸಂಸ್ಕೃತಿಯಲ್ಲಿ ಬೆಳೆದ ಆದಿತ್ಯ, ಆಕ್ಲೆಂಡ್ನ ದೇಶೀಯ ಕ್ರಿಕೆಟ್ ವ್ಯವಸ್ಥೆಯಲ್ಲಿ ಹಂತ ಹಂತವಾಗಿ ಮೇಲೆರಿದರು. 2020ರ ಅಂಡರ್-19 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವ ಮೂಲಕ ಭವಿಷ್ಯದ ತಾರೆ ಎಂದು ಗುರುತಿಸಿಕೊಂಡರು. 2021ರ ಡಿಸೆಂಬರ್ನಲ್ಲಿ ಆಕ್ಲೆಂಡ್ ಪರ ಟಿ-20ಗೆ ಪದಾರ್ಪಣೆ ಮಾಡಿದ ಅವರು, 2022-23ನೇ ಸಾಲಿನಲ್ಲಿ ನ್ಯೂಜಿಲೆಂಡ್ನ ‘ವರ್ಷದ ಯುವ ಕ್ರಿಕೆಟಿಗ’ ಪ್ರಶಸ್ತಿಗೂ ಭಾಜನರಾಗಿದ್ದರು.

ಇದನ್ನು ಓದಿದ್ದೀರಾ? IND – NZ ODI: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ; ರೋಹಿತ್-ವಿರಾಟ್ ಕಂಬ್ಯಾಕ್, ಪಂತ್ ಔಟ್
ರಜಿನಿಕಾಂತ್ ಮೇಲಿನ ಅಭಿಮಾನ ಮತ್ತು ಹಚ್ಚೆ!
ಆದಿತ್ಯ ಅಶೋಕ್ ಕೇವಲ ಆಟಗಾರನಾಗಿ ಮಾತ್ರವಲ್ಲ, ಅಪ್ಪಟ ಸಿನಿಪ್ರಿಯನಾಗಿಯೂ ಗಮನ ಸೆಳೆದಿದ್ದಾರೆ. ಇವರು ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಪರಮ ಅಭಿಮಾನಿ. ಎಷ್ಟರಮಟ್ಟಿಗೆ ಎಂದರೆ, ತಮ್ಮ ಬೌಲಿಂಗ್ ಮಾಡುವ ಕೈಯ ಮೇಲೆ ರಜಿನಿಕಾಂತ್ ಅಭಿನಯದ ಬ್ಲಾಕ್ಬಸ್ಟರ್ ಚಿತ್ರ ‘ಪಡೆಯಪ್ಪ’ ಸಿನಿಮಾದ ಡೈಲಾಗ್ ಒಂದನ್ನು ತಮಿಳಿನಲ್ಲಿ ಹಚ್ಚೆ (Tattoo) ಹಾಕಿಸಿಕೊಂಡಿದ್ದಾರೆ. ಮೈದಾನದಲ್ಲಿ ಬೌಲಿಂಗ್ ಮಾಡುವಾಗ ಈ ಹಚ್ಚೆ ಎದ್ದು ಕಾಣುತ್ತದೆ.
ಭಾರತದ ಪಿಚ್ಗಳಲ್ಲಿ ಸ್ಪಿನ್ ಜಾದು ಮಾಡಲೇಬೇಕೆಂಬ ಹಂಬಲ ಹೊಂದಿದ್ದ ಅಶೋಕ್, ಈ ಸರಣಿಗೂ ಮುನ್ನವೇ ಸಿದ್ಧತೆ ನಡೆಸಿದ್ದರು. 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಅಕಾಡೆಮಿಯಲ್ಲಿ ಹಲವು ವಾರಗಳ ಕಾಲ ಕಠಿಣ ತರಬೇತಿ ಪಡೆದಿರುವುದು ಅವರ ಬದ್ಧತೆಯನ್ನು ತೋರಿಸುತ್ತದೆ. ಯುಎಇ ವಿರುದ್ಧ ಟಿ-20 ಪದಾರ್ಪಣೆ ಮಾಡಿದ್ದ ಅವರು, ನಂತರ ಬಾಂಗ್ಲಾದೇಶದ ವಿರುದ್ಧ ಏಕದಿನ ಪಂದ್ಯವನ್ನಾಡಿದ್ದರು. ಬೆನ್ನುನೋವಿನ ಸಮಸ್ಯೆಯಿಂದಾಗಿ ಕೆಲಕಾಲ ತಂಡದಿಂದ ಹೊರಗುಳಿದಿದ್ದರೂ, ಈಗ ಸಂಪೂರ್ಣ ಚೇತರಿಸಿಕೊಂಡು ಭಾರತದ ವಿರುದ್ಧ ಕಣಕ್ಕಿಳಿದಿದ್ದಾರೆ.
ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದವರ ದರ್ಬಾರ್
ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಭಾರತೀಯ ಮೂಲದ ಆಟಗಾರರು ಮಿಂಚುತ್ತಿರುವುದು ಇದೇ ಮೊದಲೇನಲ್ಲ. ಆದಿತ್ಯ ಅಶೋಕ್ ಮತ್ತು ರಚಿನ್ ರವೀಂದ್ರ ಈ ಪರಂಪರೆಯ ಹೊಸ ಕೊಂಡಿಗಳು ಮಾತ್ರ. ಇವರಿಗಿಂತ ಮೊದಲು ಹಲವು ದಿಗ್ಗಜರು ಕಿವೀಸ್ ಜೆರ್ಸಿಯಲ್ಲಿ ಮಿಂಚಿದ್ದಾರೆ.

ಅವರಲ್ಲಿ ಪ್ರಮುಖರೆಂದರೆ:
ದೀಪಕ್ ಪಟೇಲ್: 1980-90ರ ದಶಕದಲ್ಲಿ ನ್ಯೂಜಿಲೆಂಡ್ ಪರ ಆಡಿದ ಗುಜರಾತ್ ಮೂಲದ ಸ್ಪಿನ್ನರ್. 1992ರ ವಿಶ್ವಕಪ್ನಲ್ಲಿ ಸ್ಪಿನ್ನರ್ ಆಗಿ ಬೌಲಿಂಗ್ ಆರಂಭಿಸಿ ಇತಿಹಾಸ ನಿರ್ಮಿಸಿದ್ದರು.
ಜೀತ್ ರಾವಲ್: ಗುಜರಾತ್ ಮೂಲದ ಈ ಎಡಗೈ ಬ್ಯಾಟರ್ ಟೆಸ್ಟ್ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ಪರ ಆರಂಭಿಕರಾಗಿ ಆಡಿದ್ದಾರೆ.
ಇಶ್ ಸೋಧಿ: ಲುಧಿಯಾನದಲ್ಲಿ ಜನಿಸಿದ ಇಶ್ ಸೋಧಿ, ನ್ಯೂಜಿಲೆಂಡ್ ತಂಡದ ಪ್ರಮುಖ ಲೆಗ್ ಸ್ಪಿನ್ನರ್ ಆಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಅಜಾಜ್ ಪಟೇಲ್: ಮುಂಬೈ ಮೂಲದ ಅಜಾಜ್ ಪಟೇಲ್, ಇದೇ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ ಪಡೆಯುವ ಮೂಲಕ ಅನಿಲ್ ಕುಂಬ್ಳೆ ವಿಶ್ವದಾಖಲೆ ಬರೆದಿದ್ದರು.
ಈಗ ಈ ಸಾಲಿಗೆ ತಮಿಳುನಾಡು ಮೂಲದ ಆದಿತ್ಯ ಅಶೋಕ್ ಸೇರ್ಪಡೆಯಾಗಿದ್ದು, ತವರಿನ ನೆಲದಲ್ಲಿ ಅವರು ಎಷ್ಟರ ಮಟ್ಟಿಗೆ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.





