ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಚರಿತ್ ಅಸಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಫೈನಲ್ಗೆ ಅಜೇಯ ಲಯದೊಂದಿಗೆ ಪ್ರವೇಶಿಸುವ ಗುರಿಯನ್ನು ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಹೊಂದಿದೆ.
ಇತ್ತೀಚಿನ ಸ್ಕೋರ್ನ ಮಾಹಿತಿಯಂತೆ ಭಾರತ 4 ಓವರ್ನಲ್ಲಿ ಒಂದು ವಿಕೆಟ್ ಕಳೆದುಕೊಂಡು 44 ರನ್ ಗಳಿಸಿತ್ತು. ಶುಭಮನ್ ಗಿಲ್ 4 ರನ್ ಗಳಿಸಿ ಔಟಾಗಿದ್ದರೆ, ಆರಂಭಿಕ ಅಭಿಷೇಕ್ ಶರ್ಮಾ (27) ಹಾಗೂ ನಾಯಕ ಸೂರ್ಯ ಕುಮಾರ್ ಯಾದವ್ 8 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು
ಸೂಪರ್ 4 ಹಂತದ ಎರಡೂ ಪಂದ್ಯಗಳಲ್ಲಿ ಭಾರತ ತಂಡ ಅಮೋಘ ಜಯ ಗಳಿಸಿದ್ದು, ಸ್ಥಿರ ಪ್ರದರ್ಶನದ ಮೂಲಕ ಎದುರಾಳಿಗಳಿಗೆ ಒತ್ತಡ ಹೇರಿದೆ. ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಪವರ್ ಪ್ಲೇನಲ್ಲಿ ಆಕ್ರಮಣಕಾರಿ ಆಟವನ್ನು ಮುಂದುವರೆಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಅಭಿಷೇಕ್ ಶರ್ಮಾ ಈಗಾಗಲೇ ಸೂಪರ್ 4 ಹಂತದಲ್ಲಿ ಎರಡು ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಆದರೆ, ನಾಯಕ ಸೂರ್ಯಕುಮಾರ್ ಯಾದವ್ ಹಿಂದಿನ ಎರಡು ಪಂದ್ಯಗಳಲ್ಲಿ ರನ್ ಕಲೆಹಾಕುವಲ್ಲಿ ವಿಫಲರಾಗಿದ್ದು, ಈ ಪಂದ್ಯದಲ್ಲಿ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.
ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ತೋರ್ಪಡಿಸಿ ತಂಡಕ್ಕೆ ಆಧಾರವಾಗಬೇಕಿದೆ. ಇನ್ನು ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಅಕ್ಸರ್ ಪಟೇಲ್ ತಮ್ಮ ಸ್ಥಿರ ಪ್ರದರ್ಶನದಿಂದ ತಂಡಕ್ಕೆ ಬಲ ತುಂಬಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ಯಾರ್ಕರ್ ಮತ್ತು ಬಿಗುವಿನ ದಾಳಿಯ ಮೂಲಕ ಶ್ರೀಲಂಕಾದ ಬ್ಯಾಟಿಂಗ್ ಲೈನ್ಅಪ್ಗೆ ಸವಾಲು ಒಡ್ಡಲಿದ್ದಾರೆ. ಸ್ಪಿನ್ನರ್ಗಳಾದ ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಸರಿಯಾದ ಸ್ಥಳದಲ್ಲಿ ಎಸೆತವನ್ನು ನಿಯಂತ್ರಿಸಿ ವಿಕೆಟ್ ಕಿತ್ತು ತಂಡಕ್ಕೆ ಮೇಲುಗೈ ತರಬೇಕಿದೆ.
ಇದನ್ನು ಓದಿದ್ದೀರಾ? ಏಷ್ಯಾ ಕಪ್ ಫೈನಲ್ನಲ್ಲಿ ಭಾರತ – ಪಾಕ್ ಮುಖಾಮುಖಿ; ಹೇಗಿದೆ ಸೂಪರ್ 4 ಲೆಕ್ಕಾಚಾರ?
ಲೀಗ್ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಶ್ರೀಲಂಕಾ, ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧ ಸೋಲು ಕಂಡು ಫೈನಲ್ ರೇಸ್ನಿಂದ ಹೊರಬಿದ್ದಿದೆ. ಆದರೂ, ಈ ಪಂದ್ಯದಲ್ಲಿ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳುವ ಕನಸನ್ನು ಚರಿತ್ ಅಸಲಂಕಾ ಪಡೆ ಕಾಣುತ್ತಿದೆ. ಟಾಪ್ ಆರ್ಡರ್ ಬ್ಯಾಟರ್ಗಳಾದ ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಮತ್ತು ಕುಸಾಲ್ ಪೆರೇರಾ ದೊಡ್ಡ ರನ್ ಕಲೆಹಾಕಬೇಕಿದೆ. ಬೌಲಿಂಗ್ನಲ್ಲಿ ವನಿಂದು ಹಸರಂಗಾ, ಮಹೀಶ್ ತೀಕ್ಷಣ, ಮತ್ತು ದುಷ್ಮಂತ ಚಮೀರ ಭಾರತದ ಬ್ಯಾಟಿಂಗ್ ಲೈನ್ಅಪ್ಗೆ ಒತ್ತಡ ಹೇರಬೇಕಿದೆ.
ಭಾರತ ಮತ್ತು ಶ್ರೀಲಂಕಾ ಇದುವರೆಗೆ 31 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 21 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಶ್ರೀಲಂಕಾ 9 ಪಂದ್ಯಗಳಲ್ಲಿ ಜಯ ಗಳಿಸಿದೆ. ಈ ಟೂರ್ನಿಯ ಲೀಗ್ ಹಂತದಲ್ಲಿ ಉಭಯ ತಂಡಗಳು ತಲಾ ಮೂರು ಪಂದ್ಯಗಳನ್ನು ಗೆದ್ದಿದ್ದವು. ಆದರೆ, ಶ್ರೀಲಂಕಾದ ಸೂಪರ್ 4 ಹಂತದ ಪ್ರದರ್ಶನ ನಿರಾಸೆ ಮೂಡಿಸಿತ್ತು. ಈ ಪಂದ್ಯ ಶ್ರೀಲಂಕಾದ ಆಟಗಾರರಿಗೆ ತಮ್ಮ ಕೌಶಲ್ಯವನ್ನು ತೋರ್ಪಡಿಸಲು ಕೊನೆಯ ಅವಕಾಶವಾಗಿದೆ.
ಪಂದ್ಯವಾಡುತ್ತಿರುವ ಉಭಯ ತಂಡಗಳು
ಭಾರತ: ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ
.
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಕುಸಾಲ್ ಪೆರೇರಾ, ಚರಿತ್ ಅಸಲಂಕಾ (ನಾಯಕ), ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗಾ, ಜನಿತ್ ಲಿಯಾನಗೆ, ದುಷ್ಮಂತ ಚಮೀರ, ಮಹೀಶ್ ತೀಕ್ಷಣ, ನುವಾನ್ ತುಷಾರ.





