ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ ಸಿಎ) ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿ ಎಸ್ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಜಾವಾಣಿ – ಡೆಕ್ಕನ್ ಹೆರಾಲ್ಡ್ ಸಮೂಹದ ಕೆ ಎನ್ ಶಾಂತಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡ ಕಾರಣ ವೆಂಕಟೇಶ ಪ್ರಸಾದ್ ಅವಿರೋಧವಾಗಿ ಅಧ್ಯಕ್ಷರಾಗಿದ್ದಾರೆ.
ಕರ್ನಾಟಕ ಹೈಕೋರ್ಟ್ ನ ಆದೇಶದಂತೆ ಡಿ. 7ರಂದು ಕೆಎಸ್ ಸಿಎ ಅಧ್ಯಕ್ಷ ಗಾದಿಗೆ ಚುನಾವಣೆ ನಡೆಯಬೇಕಿತ್ತು. ಈ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಬಣದಿಂದ ಶಾಂತಕುಮಾರ್ ಸ್ವರ್ಧಿಸಿದ್ದರು. ಮತ್ತೊಂದೆಡೆ, ವೆಂಕಟೇಶ್ ಪ್ರಸಾದ್ ಕೂಡ ಅಧ್ಯಕ್ಷ ಗಾದಿಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ನ. 24ರಂದು ನಾಮಪತ್ರಗಳ ಪರಿಶೀಲನೆ ನಡೆದಿತ್ತು. ಪರಿಶೀಲನೆಯಲ್ಲಿ ಶಾಂತಕುಮಾರ್ ನಾಮಪತ್ರ ತಿರಸ್ಕೃತಗೊಂಡಿದೆ. ಅಧ್ಯಕ್ಷ ಗಾದಿಯ ಚುನಾವಣೆಗೆ ಬೇರೆ ಯಾರೂ ನಾಮಪತ್ರ ಸಲ್ಲಿಸಿರದ ಕಾರಣ, ವೆಂಕಟೇಶ್ ಪ್ರಸಾದ್ ಅವರು ಅವಿರೋಧವಾಗಿ ಆಯ್ಕೆಯಾದಂತಾಗಿದ್ದು ಅವರೇ ಅಧ್ಯಕ್ಷ ಸ್ಥಾನಕ್ಕೇರುವುದು ಖಚಿತವಾಗಿದೆ.
ಇದನ್ನು ಓದಿದ್ದೀರಾ? ಪೂರ್ವಜರ ನಾಡಿನಲ್ಲಿ ‘ಫ್ರೀಡಂ ಬೇಬಿ’ಯ ಐತಿಹಾಸಿಕ ಶತಕ: ಹರಿಣಗಳ ನಾಡಿನ ‘ಸೆನುರಾನ್ ಮುತ್ತುಸ್ವಾಮಿ’ ಹಿನ್ನಲೆಯೇ ರೋಚಕ
ಹಿಂದೆ, 2010ರಿಂದ 2013ರವರೆಗೆ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆಯವರು ಕೆಎಸ್ ಸಿಎ ಅಧ್ಯಕ್ಷರಾಗಿದ್ದಾಗ ವೆಂಕಟೇಶ್ ಪ್ರಸಾದ್ ಅವರು ಉಪಾಧ್ಯಕ್ಷರಾಗಿದ್ದರು. ಅದೇ ಸಂದರ್ಭದಲ್ಲಿ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಅವರು ಕಾರ್ಯದರ್ಶಿಯಾಗಿದ್ದರು. ಇದೀಗ, 12 ವರ್ಷಗಳ ಬಳಿಕ ವೆಂಕಟೇಶ್ ಪ್ರಸಾದ್ ಅವರು ಕೆಎಸ್ ಸಿಎ ಆಡಳಿತ ಮಂಡಳಿಯೊಳಗೆ ಕಾಲಿಟ್ಟತಾಗಿದೆ.
ಮೊದಲು ಪ್ರಕಟಿಸಲಾಗಿದ್ದ ವೇಳಾಪಟ್ಟಿಯಂತೆ, ನ. 30ರಂದು ಕೆಎಸ್ ಸಿಎ ಅಧ್ಯಕ್ಷೀಯ ಚುನಾವಣೆ ನಡೆಯಬೇಕಿತ್ತು. ಆದರೆ, ಚುನಾವಣಾ ಅಧಿಕಾರಿಯಾಗಿರುವ ನಿವೃತ್ತ ಐಎಎಸ್ ಅಧಿಕಾರಿಯಾದ ಬಿ. ಬಸವರಾಜ್ ಅವರು, ಚುನಾವಣೆಯಲ್ಲಿ ಕೆಲವು ಗೊಂದಲಗಳು ಕಾಣುತ್ತಿವೆ ಎಂಬ ಕಾರಣವೊಡ್ಡಿ ಚುನಾವಣೆಯಲ್ಲಿ ಒಂದು ತಿಂಗಳ ಅವಧಿಗೆ, ಅಂದರೆ, ಡಿ. 30ರಂದು ನಡೆಸಬೇಕೆಂದು ಆದೇಶ ಹೊರಡಿಸಿದ್ದರು.
ಆದರೆ, ಅವರ ಆದೇಶವನ್ನು ಕೆಎಸ್ ಸಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹಾಗೂ ಬಿ.ಕೆ. ರವಿ ಎಂಬುವರು ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಎರಡು ಪ್ರತ್ಯೇಕ ರಿಟ್ ಅರ್ಜಿಗಳನ್ನು ಪರಿಶೀಲಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರದಂದು (ನ. 21ರಂದು) ಆದೇಶವನ್ನು ಹೊರಡಿಸಿ, ಡಿ. 7ರಂದೇ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ನ. 22ರಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು.





