ಶುಕ್ರವಾರ ಢಾಕಾದಲ್ಲಿ ನಡೆದ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಪಾಕ್ ಬ್ಯಾಟರ್ ಸಲ್ಮಾನ್ ಆಘಾ ಅವರ ವಿವಾದಾತ್ಮಕ ರನೌಟ್ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು ಕ್ರಿಕೆಟ್ ವಲಯದಲ್ಲಿ ‘ಕ್ರೀಡಾಸ್ಫೂರ್ತಿ’ಯ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.
ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಪರವಾಗಿ ಸಲ್ಮಾನ್ ಆಘಾ ಮತ್ತು ಮೊಹಮ್ಮದ್ ರಿಜ್ವಾನ್ 5ನೇ ವಿಕೆಟ್ಗೆ 100ಕ್ಕೂ ಹೆಚ್ಚು ರನ್ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾಗಿದ್ದರು. ಈ ಸಂದರ್ಭದಲ್ಲಿ ಇನಿಂಗ್ಸ್ನ 39ನೇ ಓವರ್ನಲ್ಲಿ ವಿವಾದಾತ್ಮಕ ಘಟನೆಯಿಂದು ನಡೆಯಿತು.
ಆ ಓವರ್ನ ನಾಲ್ಕನೇ ಎಸೆತದಲ್ಲಿ, ಬಾಂಗ್ಲಾ ನಾಯಕ ಮೆಹಿದಿ ಹಸನ್ ಮಿರಾಜ್ ಅವರ ಎಸೆತವನ್ನು ರಿಜ್ವಾನ್ ಬಲ ಭಾಗಕ್ಕೆ ತಳ್ಳಿದರು. ಈ ವೇಳೆ ಚೆಂಡನ್ನು ಶೂನಿಂದ ತಡೆಯಲು ಮಿರಾಜ್ ವೇಗವಾಗಿ ಮುಂದಾದಾಗ, ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಆಘಾ ಅವರಿಗೆ ಡಿಕ್ಕಿ ಹೊಡೆದರು.
ಚೆಂಡು ಅಲ್ಲೇ ನಿಂತಿತ್ತು ಮತ್ತು ಆಘಾ ಕ್ರೀಸ್ನಿಂದ ಹೊರಗಿದ್ದರು. ಆದರೆ, ಅವರು ಬೌಲರ್ಗೆ ಚೆಂಡನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಕೆಳಗೆ ಬಾಗಿದಂತೆ ಕಂಡುಬಂತು. ಅಷ್ಟರಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಿದ ಮಿರಾಜ್, ತಾವೇ ಚೆಂಡನ್ನು ಎತ್ತಿಕೊಂಡು ನಾನ್-ಸ್ಟ್ರೈಕರ್ ತುದಿಯ ವಿಕೆಟ್ಗೆ ಎಸೆದರು. ಆಗ ಆಘಾ ಇನ್ನೂ ಕ್ರೀಸ್ನಿಂದ ಹೊರಗಿದ್ದರು.
ಬೌಲರ್ ಮೇಲ್ಮನವಿ (ಅಪೀಲ್) ಸಲ್ಲಿಸಿದಾಗ, ಫೀಲ್ಡ್ ಅಂಪೈರ್ ತೀರ್ಪನ್ನು ಮೂರನೇ ಅಂಪೈರ್ಗೆ ವಹಿಸಿದರು. ರಿಪ್ಲೇಗಳನ್ನು ಪರಿಶೀಲಿಸಿದ ಟಿವಿ ಅಂಪೈರ್, ‘ಚೆಂಡು ಇನ್ನೂ ಡೆಡ್ ಆಗಿರಲಿಲ್ಲ (ಆಟದಲ್ಲಿತ್ತು)’ ಎಂದು ಪರಿಗಣಿಸಿ ಆಘಾ ಅವರನ್ನು ಔಟ್ ಎಂದು ಘೋಷಿಸಿದರು.
ಇದನ್ನು ಓದಿದ್ದೀರಾ? ದ್ರಾವಿಡ್ಗೆ ಸಿ.ಕೆ. ನಾಯುಡು ಪ್ರಶಸ್ತಿ: ಸಭ್ಯ, ಸಂಭಾವಿತ, ಸಾಧಕನಿಗೆ ಸಂದ ಗೌರವ
62 ಎಸೆತಗಳಲ್ಲಿ 64 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಆಘಾ, ಈ ಅಪೀಲ್ನಿಂದ ತೀವ್ರ ಅಸಮಾಧಾನಗೊಂಡರು. ಮೈದಾನದಲ್ಲೇ ಮಿರಾಜ್ ಜೊತೆ ಮಾತಿನ ಚಕಮಕಿ ನಡೆಸಿದರು. ಬಾಂಗ್ಲಾ ವಿಕೆಟ್ ಕೀಪರ್ ಲಿಟನ್ ದಾಸ್ ಕೂಡ ಇದರಲ್ಲಿ ಭಾಗಿಯಾದಾಗ ಪರಿಸ್ಥಿತಿ ಕೊಂಚ ವಿಕೋಪಕ್ಕೆ ಹೋಯಿತು. ಅಂತಿಮವಾಗಿ ರಿಜ್ವಾನ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
‘ಕ್ರೀಡಾಸ್ಫೂರ್ತಿ ಇರಬೇಕು’
ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಲ್ಮಾನ್ ಆಘಾ, ಘಟನೆಯ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದರು.
”ಕ್ರೀಡಾಸ್ಫೂರ್ತಿ ಎಂಬುದು ಇರಬೇಕು ಎಂದು ನಾನು ಭಾವಿಸುತ್ತೇನೆ. ಮೆಹಿದಿ ಮಾಡಿದ್ದು ನಿಯಮಗಳ ಪ್ರಕಾರ ಸರಿಯಿರಬಹುದು. ಆದರೆ, ನನ್ನ ದೃಷ್ಟಿಕೋನದಲ್ಲಿ ಕೇಳುವುದಾದರೆ, ನಾನು ಬೇರೆ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೆ. ನಾನು ಕ್ರೀಡಾಸ್ಫೂರ್ತಿಗೆ ಬೆಲೆ ಕೊಡುತ್ತಿದ್ದೆ. ನಾವು ಈ ಹಿಂದೆ ಇಂಥ ಕೆಲಸ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ” ಎಂದು ಆಘಾ ಬೇಸರ ವ್ಯಕ್ತಪಡಿಸಿದರು.
ಚೆಂಡು ತಮ್ಮ ಪ್ಯಾಡ್ ಮತ್ತು ಬ್ಯಾಟ್ಗೆ ತಾಗಿದ ತಕ್ಷಣ ಅದು ‘ಡೆಡ್’ ಆಗಿದೆ ಎಂದು ಭಾವಿಸಿದ್ದಾಗಿ ಹೇಳಿದ ಆಘಾ, ಆ ಕ್ಷಣದ ಕೋಪದಲ್ಲಿ ತಾವು ನೀಡಿದ ಪ್ರತಿಕ್ರಿಯೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. “ಆ ಕ್ಷಣದಲ್ಲಿ ಕೋಪದಲ್ಲಿ ಕೆಲವು ಮಾತುಗಳನ್ನಾಡಿದೆ. ನಾನು ಮತ್ತು ಲಿಟನ್ ದಾಸ್ ಇಬ್ಬರೂ ಒಳ್ಳೆಯ ಮಾತುಗಳನ್ನಂತೂ ಆಡಿರಲಿಲ್ಲ. ಆದರೆ, ಅದು ಆ ಕ್ಷಣದ ಆವೇಶವಷ್ಟೇ, ಈಗ ನಾವಿಬ್ಬರೂ ಸರಿಯಾಗಿದ್ದೇವೆ” ಎಂದರು.
ಮಿರಾಜ್ ಜೊತೆಗಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ 32 ವರ್ಷದ ಆಘಾ, “ಇನ್ನೂ ಇಲ್ಲ, ಆದರೆ ಚಿಂತಿಸಬೇಡಿ, ನಾನು ಅವರನ್ನು ಭೇಟಿಯಾಗಿ ಮಾತನಾಡುತ್ತೇನೆ” ಎಂದರು.
ಮಿರಾಜ್ ಸಮರ್ಥನೆ
ಮತ್ತೊಂದೆಡೆ, ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಬಾಂಗ್ಲಾ ನಾಯಕ ಮೆಹಿದಿ ಹಸನ್ ಮಿರಾಜ್, “ಅವರು ವಿಕೆಟ್ನಿಂದ ದೂರವಿದ್ದರು ಮತ್ತು ನಾನು ಕೇವಲ ಚೆಂಡನ್ನು ನೋಡುತ್ತಿದ್ದೆ. ಒಂದು ವೇಳೆ ನಾನು ಚೆಂಡನ್ನು ಹಿಡಿಯಲು ವಿಫಲನಾಗಿದ್ದರೆ, ಅವರು ರನ್ ಕದಿಯುತ್ತಿದ್ದರು. ಹಾಗಾಗಿ ನಾನು ಆ ರೀತಿ ಯೋಚಿಸಿ ರನೌಟ್ ಮಾಡಿದೆ” ಎಂದು ಹೇಳಿದರು.
ಈ ಎಲ್ಲಾ ವಿವಾದಗಳ ನಡುವೆಯೂ, ಉತ್ತಮ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡವು ಡಕ್ವರ್ತ್ ಲೂಯಿಸ್ ನಿಯಮದನ್ವಯ 128 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಸರಣಿಯನ್ನು 1-1 ರಿಂದ ಸಮಬಲಗೊಳಿಸಿಕೊಂಡಿದೆ.





