2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಿಂದ ಬಿಸಿಸಿಐ ನಿರ್ದೇಶನದ ಮೇರೆಗೆ ಹೊರಗುಳಿದಿರುವ ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರಹಮಾನ್, ಇದೀಗ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್) ಜತೆ ಒಪ್ಪಂದ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡವು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ತೀವ್ರ ಪೈಪೋಟಿಯ ಬಳಿಕ ₹9.20 ಕೋಟಿ ನೀಡಿ ಮುಸ್ತಫಿಜುರ್ ಅವರನ್ನು ಖರೀದಿಸಿತ್ತು. ಆದರೆ, ಹರಾಜು ಪ್ರಕ್ರಿಯೆ ಮುಗಿದ ಕೆಲವೇ ದಿನಗಳಲ್ಲಿ “ಸುತ್ತಮುತ್ತಲ ಬೆಳವಣಿಗೆಗಳು” ಎಂಬ ಕಾರಣ ನೀಡಿ ಬಿಸಿಸಿಐ ಸೂಚನೆಯ ಮೇರೆಗೆ ಕೆಕೆಆರ್ ತಂಡದಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನು ಓದಿದ್ದೀರಾ? ಮುಸ್ತಫಿಜುರ್ ವಿವಾದ: ಐಪಿಎಲ್ ಪ್ರಸಾರ ನಿಷೇಧಿಸಿದ ಬಾಂಗ್ಲಾದೇಶ ಸರ್ಕಾರ
ಭಾರತದ ಲೀಗ್ನಿಂದ ಹೊರಬಿದ್ದ ಬೆನ್ನಲ್ಲೇ ಮುಸ್ತಫಿಜುರ್ ಅವರನ್ನು ಪಿಎಸ್ಎಲ್ ಸ್ವಾಗತಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಲೀಗ್, “ಬ್ಯಾಟರ್ಗಳೇ ಎಚ್ಚರ.. ಹೊಸ ಯುಗದಲ್ಲಿ ‘ಫಿಜ್’ ಮ್ಯಾಜಿಕ್ ನಡೆಯಲಿದೆ. ಮುಸ್ತಫಿಜುರ್ ರಹಮಾನ್ ಎಚ್ಬಿಎಲ್ ಪಿಎಸ್ಎಲ್-11ಗೆ ಸೇರ್ಪಡೆಯಾಗಿದ್ದಾರೆ” ಎಂದು ಅಧಿಕೃತವಾಗಿ ಪ್ರಕಟಿಸಿದೆ.
ಬಿಸಿಸಿಐನ ಏಕಾಏಕಿ ನಿರ್ಧಾರಕ್ಕೆ ಬಾಂಗ್ಲಾದೇಶ ಸರ್ಕಾರ ಮತ್ತು ಕ್ರಿಕೆಟ್ ಮಂಡಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. “ಬಿಸಿಸಿಐನ ಈ ನಿರ್ಧಾರಕ್ಕೆ ಯಾವುದೇ ತಾರ್ಕಿಕ ಕಾರಣಗಳಿಲ್ಲ. ಇದು ಬಾಂಗ್ಲಾದೇಶದ ಜನರಿಗೆ ನೋವುಂಟು ಮಾಡಿದೆ ಮತ್ತು ಅಸಮಾಧಾನ ಮೂಡಿಸಿದೆ,” ಎಂದು ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ಪ್ರತಿಭಟನೆಯ ಭಾಗವಾಗಿ, ಮುಂದಿನ ಆದೇಶದವರೆಗೆ ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳು ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಪ್ರಸಾರವನ್ನು ನಿಷೇಧಿಸಲಾಗಿದೆ.





