ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಗೆ ಬಾಂಗ್ಲಾದೇಶದ ಕ್ರಿಕೆಟಿಗನನ್ನು ಖರೀದಿಸಿದ್ದಕ್ಕಾಗಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಟೀಕಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಫ್ರಾಂಚೈಸಿ ಮಾಲೀಕರನ್ನು ದೂಷಿಸುವ ಬದಲು, ಬಿಸಿಸಿಐ ಮತ್ತು ಐಸಿಸಿ ಅಂತಹ ನಿಯಮಗಳನ್ನು ರೂಪಿಸಲು ಏಕೆ ಅವಕಾಶ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬಿಜೆಪಿ ಪ್ರಶ್ನಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.
ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, “ವಿದೇಶಿ ಆಟಗಾರನೊಬ್ಬ ಐಪಿಎಲ್ನಲ್ಲಿದ್ದಾರೆ ಎಂದರೆ, ಬಿಸಿಸಿಐ ಅಥವಾ ಐಪಿಎಲ್ ನಿಯಮಗಳು ಅದಕ್ಕೆ ಅವಕಾಶ ನೀಡಿವೆ ಎಂದರ್ಥ,” ಎಂದು ಸಮರ್ಥಿಸಿಕೊಂಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ, ಶಾರುಖ್ ಖಾನ್ ಸಹ-ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು 2026ರ ಸಾಲಿಗೆ ಖರೀದಿಸಿತ್ತು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ, ಬಾಂಗ್ಲಾ ಆಟಗಾರನ ಸೇರ್ಪಡೆಯು ಈಗ ರಾಜಕೀಯ ಹಾಗೂ ರಾಷ್ಟ್ರೀಯತೆಯ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿರುವ ಉತ್ತರ ಪ್ರದೇಶದ ಹಿರಿಯ ಬಿಜೆಪಿ ನಾಯಕ ಸಂಗೀತ್ ಸೋಮ್, ಶಾರುಖ್ ಖಾನ್ ಅವರನ್ನು ‘ದೇಶದ್ರೋಹಿ’ ಎಂದು ಕರೆದಿದ್ದಾರೆ. “ನೆರೆಯ ದೇಶದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದ್ದರೂ, ಶಾರುಖ್ ಖಾನ್ ಬಾಂಗ್ಲಾ ಆಟಗಾರನನ್ನು ಖರೀದಿಸಿದ್ದಾರೆ. ಇಂತಹ ದೇಶದ್ರೋಹಿಗಳು ಭಾರತದ ಜನರ ಬೆಂಬಲದಿಂದಲೇ ಸ್ಟಾರ್ ಆಗಿದ್ದಾರೆ ಎಂಬುದನ್ನು ಮರೆಯಬಾರದು. ಅವರಿಗೆ ಈ ದೇಶದಲ್ಲಿ ಬದುಕುವ ಹಕ್ಕಿಲ್ಲ,” ಎಂದು ಸೋಮ್ ಹರಿಹಾಯ್ದಿದ್ದಾರೆ. ಅಲ್ಲದೆ, ಬಾಂಗ್ಲಾ ಆಟಗಾರನನ್ನು ವಿಮಾನ ನಿಲ್ದಾಣದಿಂದ ಹೊರಬರಲು ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
’ಅನುಕೂಲಕ್ಕೆ ತಕ್ಕ ರಾಷ್ಟ್ರೀಯತೆ’: ಖರ್ಗೆ ತಿರುಗೇಟು
ಬಿಜೆಪಿ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯ ರಾಷ್ಟ್ರೀಯತೆ ಕೇವಲ ಅವರ ರಾಜಕೀಯ ಲಾಭಕ್ಕೆ ಮಾತ್ರ ಸೀಮಿತ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲಿಗೆ ಹೋಗಿ ಬಂದವರಿಗೆ ಸಂಭ್ರಮದ ಸ್ವಾಗತ; ಕರ್ನಾಟಕ ಹೀಗೇಕಾಯಿತು?
”ಫ್ರಾಂಚೈಸಿಗಳನ್ನು ದೂಷಿಸುವ ಬದಲು, ಬಿಸಿಸಿಐ ಏಕೆ ಬಾಂಗ್ಲಾದೇಶದ ಆಟಗಾರರಿಗೆ ಐಪಿಎಲ್ನಲ್ಲಿ ಭಾಗವಹಿಸಲು ಅನುಮತಿ ನೀಡಿದೆ ಎಂದು ಬಿಜೆಪಿ ನಾಯಕರು ಕೇಳಬೇಕಿತ್ತು. ಆದರೆ ಅವರಿಗೆ ಈ ಪ್ರಶ್ನೆ ಕೇಳಲು ಧೈರ್ಯವಿಲ್ಲ,” ಎಂದು ಖರ್ಗೆ ಹೇಳಿದ್ದಾರೆ.
ಬಿಜೆಪಿಯ ಇಬ್ಬಗೆಯ ನೀತಿಯನ್ನು ಪ್ರಶ್ನಿಸಿದ ಖರ್ಗೆ, “ಪಹಲ್ಗಾಮ್ ದಾಳಿಯ ನಂತರವೂ ಭಾರತವು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಿದಾಗ ಬಿಜೆಪಿ ನಾಯಕರಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಕೋವಿಡ್ ಸಮಯದಲ್ಲಿ ಐಪಿಎಲ್ ಪಂದ್ಯಗಳನ್ನು ಇಸ್ಲಾಮಿಕ್ ರಾಷ್ಟ್ರಗಳಿಗೆ ಸ್ಥಳಾಂತರಿಸಿದಾಗ ಮತ್ತು ಅಲ್ಲಿಯೇ ಹರಾಜು ಪ್ರಕ್ರಿಯೆ ನಡೆಸಿದಾಗಲೂ ಇವರಿಗೆ ತೊಂದರೆಯಾಗಲಿಲ್ಲ,” ಎಂದು ನೆನಪಿಸಿದ್ದಾರೆ.
ಫ್ರಾಂಚೈಸಿಗಳನ್ನು ಪ್ರಶ್ನಿಸುವ ಬದಲು, ಬಿಸಿಸಿಐ ಮತ್ತು ಐಸಿಸಿ ಈ ರೀತಿ ಕಾರ್ಯನಿರ್ವಹಿಸಲು ಏಕೆ ಅವಕಾಶ ನೀಡುತ್ತಿದ್ದೀರಿ ಎಂದು ಗೃಹ ಸಚಿವರನ್ನೇ ಬಿಜೆಪಿಗರು ಕಠಿಣವಾಗಿ ಪ್ರಶ್ನಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ





