ಮುಂಬರುವ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅನಿಶ್ಚಿತತೆ ವ್ಯಕ್ತಪಡಿಸಿರುವ ಬೆನ್ನಲ್ಲೇ, ಭಾರತದ ಮಾಜಿ ಕ್ರಿಕೆಟಿಗ ಕೆ ಶ್ರೀಕಾಂತ್ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
“ನೀವು ಭಾರತಕ್ಕೆ ಬಾರದೇ ಇರುವುದೇ ಒಳ್ಳೆಯದು, ಒಂದು ವೇಳೆ ಬಂದರೆ ಸದೆ ಬಡಿಯುತ್ತೇವೆ,” ಎಂದು ಶ್ರೀಕಾಂತ್ ಹೇಳಿದ್ದಾರೆ.
ಇತ್ತೀಚೆಗೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು, ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆ ಅಥವಾ ಇನ್ನಿತರ ಕಾರಣಗಳನ್ನು ಮುಂದಿಟ್ಟುಕೊಂಡು, ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ಹಿಂದೆ ಸರಿಯುವ ಮುನ್ಸೂಚನೆ ನೀಡಿದ್ದರು. ಇದಕ್ಕೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿರುವ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಶ್ರೀಕಾಂತ್, ಪಾಕಿಸ್ತಾನ ತಂಡದ ಪ್ರಸ್ತುತ ಸ್ಥಿತಿ ಹಾಗೂ ಟೀಮ್ ಇಂಡಿಯಾದ ಅಬ್ಬರದ ಫಾರ್ಮ್ ಅನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಗೌತಮ್ ಗಂಭೀರ್; ತಂಡವನ್ನು ಗೆಲ್ಲಿಸುತ್ತಿಲ್ಲ, ತಾವೂ ಬದಲಾಗುತ್ತಿಲ್ಲ
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟ್ ಆಟಗಾರ ಶ್ರೀಕಾಂತ್, “ಹೇ ಪಾಕಿಸ್ತಾನ್, ನೀವು ಬಾರದಿರುವುದೇ ಲೇಸು. ನಿಮ್ಮ ಸಾಹೇಬರಾದ ಮೊಹ್ಸಿನ್ ನಖ್ವಿ ಅವರು ಟೂರ್ನಿಗೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಅದು ನಿಜಕ್ಕೂ ಒಳ್ಳೆಯ ನಿರ್ಧಾರ. ಯಾವುದಾದರೂ ನೆಪ ಹೇಳಿ ಟೂರ್ನಿಯಿಂದ ದೂರವಿರಿ. ಏಕೆಂದರೆ, ಭಾರತೀಯ ಆಟಗಾರರು ಈಗ ಆಡುತ್ತಿರುವ ರೀತಿಯನ್ನು ನೋಡಿದರೆ, ನೀವು ಬಂದರೆ ನಿಮ್ಮನ್ನು ಅವರು ಹೀನಾಯವಾಗಿ ಸೋಲಿಸುತ್ತಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಭಾರತೀಯ ಬ್ಯಾಟರ್ಗಳ ಇತ್ತೀಚಿನ ಪ್ರದರ್ಶನವನ್ನು ಕೊಂಡಾಡಿದ ಶ್ರೀಕಾಂತ್, “ಕಳೆದ ಪಂದ್ಯದಲ್ಲಿ ಭಾರತ 15 ಓವರ್ಗಳಲ್ಲಿ 209 ರನ್ ಗಳಿಸಿತ್ತು. ಮತ್ತೊಂದು ಪಂದ್ಯದಲ್ಲಿ ಕೇವಲ 10 ಓವರ್ಗಳಲ್ಲಿ 150 ರನ್ ಬಾರಿಸಿದ್ದಾರೆ. ಕೊಲಂಬೊದಲ್ಲಿ ಸಿಕ್ಸರ್ ಹೊಡೆದರೆ ಅದು ಮದ್ರಾಸ್ (ಚೆನ್ನೈ) ತಲುಪುವಷ್ಟು ಶಕ್ತಿಯುತವಾಗಿದೆ. ಟಿ20 ಕ್ರಿಕೆಟ್ನಲ್ಲಿ ಇಂತಹ ಬ್ಯಾಟಿಂಗ್ ಅಬ್ಬರವನ್ನು ನಾನು ಹಿಂದೆಂದೂ ನೋಡಿಲ್ಲ. ಇದನ್ನು ನೋಡಿದರೆ ಎದುರಾಳಿ ತಂಡಗಳು ಕಪ್ ನೀವೇ ಇಟ್ಟುಕೊಳ್ಳಿ ಎಂದು ಹೇಳಿ ಓಡಿಹೋಗಬಹುದು,” ಎಂದು ಅಭಿಪ್ರಾಯಪಟ್ಟಿದ್ದಾರೆ.
2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರದಲ್ಲಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ, ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳ ನಡುವೆ ಶೀತಲ ಸಮರ ಮುಂದುವರಿದಿದೆ. ಇದೇ ವೇಳೆ, ಬಾಂಗ್ಲಾದೇಶದ ಪಂದ್ಯಗಳನ್ನು ತಟಸ್ಥ ಸ್ಥಳಕ್ಕೆ ಬದಲಾಯಿಸದ ಐಸಿಸಿ ನಿರ್ಧಾರವನ್ನು ವಿರೋಧಿಸಿ, ಪಾಕಿಸ್ತಾನವು 2026ರ ಟಿ20 ವಿಶ್ವಕಪ್ಗೆ ಬಹಿಷ್ಕಾರ ಹಾಕುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ನಖ್ವಿ ಸುಳಿವು ನೀಡಿದ್ದರು. ಸದ್ಯ ಪಾಕಿಸ್ತಾನ ಸರ್ಕಾರವು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದು, ಸರ್ಕಾರದ ಸಲಹೆಯಂತೆ ಮುಂದುವರಿಯುವುದಾಗಿ ಪಿಸಿಬಿ ತಿಳಿಸಿದೆ.





