ಭಾನುವಾರ ಅಹಮದಾಬಾದ್ನ ಕ್ರೀಡಾಂಗಣದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದ ಪಡೆ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸುವ ತವಕದಲ್ಲಿದೆ.
ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿರುವ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಬಳಿಕ ಸತತ ಎರಡು ಬಾರಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ವಿಶ್ವದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಕಿವೀಸ್ ಪಡೆ ಅತ್ಯಂತ ಪ್ರಬಲ ಎದುರಾಳಿಯಾಗಿದ್ದು, ಈ ಹಿಂದಿನ ಟಿ20 ವಿಶ್ವಕಪ್ ಮುಖಾಮುಖಿಗಳಲ್ಲಿ ಭಾರತದ ವಿರುದ್ಧ ಇದುವರೆಗೂ ಸೋಲು ಕಂಡಿಲ್ಲ ಎಂಬುದು ಗಮನಾರ್ಹ.
ಇಂತಹ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಥವಾ ಮತ್ಯಾವುದೇ ಅನಿರೀಕ್ಷಿತ ಕಾರಣಗಳಿಂದ ಅಡ್ಡಿಯಾದರೆ ನಿಯಮಗಳೇನು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಐಸಿಸಿ ನಿಯಮಾವಳಿಗಳ ಪ್ರಕಾರ ಪಂದ್ಯದ ಸ್ವರೂಪ ಹೀಗಿರಲಿದೆ:
ಮಳೆ ಬಂದರೆ ಏನಾಗಲಿದೆ?
ನಿಗದಿತ ದಿನದಂದೇ ಯತ್ನ: ಮಳೆಯಿಂದಾಗಿ ಪಂದ್ಯದ ಓವರ್ಗಳನ್ನು ಕಡಿತಗೊಳಿಸಬೇಕಾಗಿ ಬಂದರೂ ಸಹ, ಮೊದಲ ಆದ್ಯತೆಯಾಗಿ ನಿಗದಿತ ದಿನದಂದೇ ಪಂದ್ಯವನ್ನು ಪೂರ್ಣಗೊಳಿಸಲು ಆಯೋಜಕರು ಪ್ರಯತ್ನಿಸುತ್ತಾರೆ.
ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್: ಕಿವೀಸ್ ಫೈನಲ್ಗೆ, ಫಿನ್ ಅಲೆನ್ ವಿಶ್ವದಾಖಲೆಯ ಶತಕ; ಮತ್ತೆ ಮುಗ್ಗರಿಸಿದ ದ.ಆಫ್ರಿಕಾ
ಮೀಸಲು ದಿನ: ನಿಗದಿತ ದಿನದಂದು ಪಂದ್ಯ ಪೂರ್ಣಗೊಳ್ಳದಿದ್ದರೆ, ಮೀಸಲು ದಿನದಂದು ಪಂದ್ಯ ನಡೆಯಲಿದೆ. ಪಂದ್ಯವನ್ನು ಮೊದಲಿನಿಂದ ಆರಂಭಿಸುವ ಬದಲು, ಎಲ್ಲಿ ಸ್ಥಗಿತಗೊಂಡಿತ್ತೋ ಅಲ್ಲಿಂದಲೇ ಆಟ ಮುಂದುವರಿಯಲಿದೆ.
ಜಂಟಿ ವಿಜೇತರು: ಒಂದು ವೇಳೆ ಮೀಸಲು ದಿನದಂದೂ ಮಳೆಯಿಂದಾಗಿ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳನ್ನು ‘ಜಂಟಿ ವಿಜೇತ’ರೆಂದು ಘೋಷಿಸಲಾಗುತ್ತದೆ.
ಪಂದ್ಯ ‘ಟೈ’ ಆದರೆ ಮುಂದೇನು?
ಸೂಪರ್ ಓವರ್ ನಿಯಮ: ನಿಗದಿತ ಓವರ್ಗಳ ಮುಕ್ತಾಯಕ್ಕೆ ಪಂದ್ಯವು ಸಮಬಲಗೊಂಡರೆ (ಟೈ), ವಿಜೇತರನ್ನು ನಿರ್ಧರಿಸಲು ‘ಸೂಪರ್ ಓವರ್’ ಮೊರೆ ಹೋಗಲಾಗುತ್ತದೆ. ಇದರಲ್ಲಿ ಎರಡೂ ತಂಡಗಳಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ತಲಾ ಒಂದು ಓವರ್ ಅವಕಾಶ ನೀಡಲಾಗುತ್ತದೆ.
ಸತತ ಸೂಪರ್ ಓವರ್ಗಳು: ಒಂದು ವೇಳೆ ಸೂಪರ್ ಓವರ್ ಕೂಡ ಟೈ ಆದರೆ, ಸ್ಪಷ್ಟ ವಿಜೇತರು ಹೊರಹೊಮ್ಮುವವರೆಗೆ ಸತತವಾಗಿ ಸೂಪರ್ ಓವರ್ಗಳನ್ನು ಆಡಿಸಲಾಗುತ್ತದೆ.
ಗಮನಿಸಿ: 2019ರ ಏಕದಿನ ವಿಶ್ವಕಪ್ ಫೈನಲ್ನ ವಿವಾದಾತ್ಮಕ ಅಂತ್ಯದ ಬಳಿಕ ಈ ನಿಯಮವನ್ನು ಬದಲಾಯಿಸಲಾಗಿದೆ. ಈ ಹಿಂದೆ, ಸೂಪರ್ ಓವರ್ ಟೈ ಆದರೆ, ಇಡೀ ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ತಂಡವನ್ನು ವಿಜೇತರೆಂದು ಘೋಷಿಸುವ ನಿಯಮವಿತ್ತು. ಈಗ ಆ ‘ಬೌಂಡರಿ ಕೌಂಟ್’ ನಿಯಮವನ್ನು ಕೈಬಿಡಲಾಗಿದೆ.





