ರಣಜಿ ಇತಿಹಾಸದಲ್ಲೇ ಅತ್ಯಂತ ರೋಚಕ ಎನಿಸಿದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಬಲಿಷ್ಠ ಮುಂಬೈ ತಂಡವನ್ನು ಅವರದೇ ನೆಲದಲ್ಲಿ ಮಣಿಸಿದ ಕರ್ನಾಟಕ ತಂಡವು 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ಗೆ ಪ್ರವೇಶಿಸಿದೆ.
ಮುಂಬೈನ ಬಿಕೆಸಿ ಮೈದಾನದಲ್ಲಿ ನಡೆದ ಪಂದ್ಯದ ಅಂತಿಮ ದಿನದಾಟದಲ್ಲಿ ಕೆ.ಎಲ್. ರಾಹುಲ್ ಅವರ ಶತಕ ಹಾಗೂ 7ನೇ ವಿಕೆಟ್ಗೆ ಆರ್. ಸ್ಮರಣ್ ಮತ್ತು ವಿದ್ಯಾಧರ್ ಪಾಟೀಲ್ ಜೋಡಿ ನಡೆಸಿದ ಕೆಚ್ಚೆದೆಯ ಹೋರಾಟವು ರಾಜ್ಯ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿತು. ಎರಡನೇ ಇನಿಂಗ್ಸ್ನಲ್ಲಿ ಗೆಲ್ಲಲು 325 ರನ್ಗಳ ಕಠಿಣ ಗುರಿ ಪಡೆದಿದ್ದ ಕರ್ನಾಟಕ, ಸೋಮವಾರದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಗುರಿ ಬೆನ್ನಟ್ಟುವಾಗ ಆರಂಭಿಕ ಆಘಾತ ಎದುರಿಸಿದ ತಂಡಕ್ಕೆ ಕೆ.ಎಲ್. ರಾಹುಲ್ (130) ಆಸರೆಯಾದರು. ಅನುಭವಿ ಆಟ ಪ್ರದರ್ಶಿಸಿದ ಅವರು ಶತಕ ಸಿಡಿಸಿ ತಂಡವನ್ನು ಪಂದ್ಯದಲ್ಲಿ ಉಳಿಸಿದರು. ಆದರೆ, ರಾಹುಲ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಔಟಾದ ಬಳಿಕ ತಂಡ 6 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು.
ಇದನ್ನು ಓದಿದ್ದೀರಾ? 103 ಡಿಗ್ರಿ ಜ್ವರದ ನಡುವೆಯೂ ‘ಸ್ಮೃತಿ’ ಪರಾಕ್ರಮ: ಆರ್ಸಿಬಿ ನಾಯಕಿಯ ಬದ್ಧತೆಗೆ ಎಲ್ಲಡೆ ಪ್ರಶಂಸೆ
ಈ ನಿರ್ಣಾಯಕ ಹಂತದಲ್ಲಿ ಒಂದಾದ ಎಡಗೈ ಬ್ಯಾಟರ್ ಆರ್. ಸ್ಮರಣ್ ಅಜೇಯ 83 ಮತ್ತು ಆಲ್ರೌಂಡರ್ ವಿದ್ಯಾಧರ್ ಪಾಟೀಲ್ ಅಜೇಯ 31 ರನ್ಗಳು ಮುಂಬೈ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. 7ನೇ ವಿಕೆಟ್ಗೆ ಈ ಜೋಡಿ ಮುರಿಯದ ಅಮೂಲ್ಯ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಒತ್ತಡದ ನಡುವೆಯೂ ತಣ್ಣನೆಯ ಮನಸ್ಥಿತಿಯಲ್ಲಿ ಬ್ಯಾಟ್ ಬೀಸಿದ ಸ್ಮರಣ್ ಮತ್ತು ವಿದ್ಯಾಧರ್, ಮುಂಬೈ ಕೈಯಲ್ಲಿದ್ದ ಪಂದ್ಯವನ್ನು ಕಸಿದುಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ 120 ಮತ್ತು 377 ರನ್ ಕಲೆಹಾಕಿತ್ತು. ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 173 ರನ್ ಗಳಿಸಿತ್ತು. 325 ರನ್ಗಳ ಸವಾಲಿನ ಗುರಿ ಪಡೆದ ಕರ್ನಾಟಕ, ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿ ಐತಿಹಾಸಿಕ ಜಯ ದಾಖಲಿಸಿತು.
ಸಂಕ್ಷಿಪ್ತ ಸ್ಕೋರ್:
ಮುಂಬೈ: 120 ಮತ್ತು 377
ಕರ್ನಾಟಕ: 173 ಮತ್ತು 325/6 (ಗುರಿ: 325)
ಪ್ರಮುಖಾಂಶ: ಕೆ.ಎಲ್. ರಾಹುಲ್ (130), ಆರ್. ಸ್ಮರಣ್(83) ಮತ್ತು ವಿದ್ಯಾಧರ್ ಪಾಟೀಲ್(31)
ಫಲಿತಾಂಶ: ಕರ್ನಾಟಕಕ್ಕೆ 4 ವಿಕೆಟ್ಗಳ ಜಯ.





