ಪ್ರಸ್ತುತ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಭಾರತದ ತಾರಾ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಜೆಮಿಮಾ ರಾಡ್ರಿಗ್ಸ್ ಅವರ ಜುಗಲ್ಬಂದಿ ಕ್ರಿಕೆಟ್ ಪ್ರೇಮಿಗಳ ಕಣ್ಮನ ಸೆಳೆಯುತ್ತಿದೆ. ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿಯುತ್ತಿರುವ ಸ್ಮೃತಿ, ಪವರ್ಪ್ಲೇ ಓವರ್ಗಳಲ್ಲಿ ಬೌಂಡರಿಗಳ ಸುರಿಮಳೆಗೈದು ಎದುರಾಳಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ತಕ್ಕ ಸಾಥ್ ನೀಡುತ್ತಿರುವ ಜೆಮಿಮಾ ರಾಡ್ರಿಗ್ಸ್, ಮಧ್ಯಮ ಕ್ರಮಾಂಕದಲ್ಲಿ ತಮ್ಮ ಚುರುಕಾದ ಓಟ ಮತ್ತು ಸಮಯೋಚಿತ ಹೊಡೆತಗಳ ಮೂಲಕ ತಂಡದ ರನ್ ವೇಗಕ್ಕೆ ಚಾಲನೆ ನೀಡುತ್ತಿದ್ದಾರೆ.
ಈ ಸರಣಿಯಲ್ಲಿ ಇವರಿಬ್ಬರ ಸ್ಥಿರ ಪ್ರದರ್ಶನ ಮತ್ತು ಮ್ಯಾಚ್ ವಿನ್ನಿಂಗ್ ಇನಿಂಗ್ಸ್ಗಳು ಭಾರತ ತಂಡದ ಗೆಲುವಿನ ಓಟಕ್ಕೆ ಪ್ರಮುಖ ಶಕ್ತಿಯಾಗಿದೆಭಾರತೀಯ ಕ್ರಿಕೆಟ್ ಎಂದರೆ ಕೇವಲ ಪುರುಷರ ಕ್ರಿಕೆಟ್ ಎಂಬ ಕಾಲಘಟ್ಟ ಸರಿದು ದಶಕಗಳೇ ಕಳೆದಿವೆ. ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಇಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಜಾಗತಿಕ ಮಟ್ಟದಲ್ಲಿ ತಲೆ ಎತ್ತಿ ನಿಂತಿದೆ. ಈ ಇಬ್ಬರು ಆಟಗಾರ್ತಿಯರು ತಮ್ಮ ವಿಭಿನ್ನ ಶೈಲಿಯ ಬ್ಯಾಟಿಂಗ್ ಮೂಲಕ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದರೆ, ಅಭಿಮಾನಿಗಳಿಗೆ ಗೆಲುವಿನ ಭರವಸೆಯಾಗಿದ್ದಾರೆ.
ಎಡಗೈ ಆಟದ ಸೊಬಗು: ಸ್ಮೃತಿ ಮಂಧಾನ
ಭಾರತೀಯ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರನ್ನು ಆಧುನಿಕ ಕ್ರಿಕೆಟ್ನ ಅತ್ಯುತ್ತಮ ಆರಂಭಿಕ ಆಟಗಾರ್ತಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇವರ ಬ್ಯಾಟಿಂಗ್ನಲ್ಲಿ ಒಂದು ವಿಶಿಷ್ಟವಾದ ಲಯ ಮತ್ತು ಸೊಬಗಿದೆ. ಚೆಂಡನ್ನು ಬಲ ಪ್ರಯೋಗಿಸಿ ಹೊಡೆಯುವುದಕ್ಕಿಂತ ಹೆಚ್ಚಾಗಿ, ‘ಟೈಮಿಂಗ್’ ಮೂಲಕ ಬೌಂಡರಿಗಟ್ಟುವ ಇವರ ಕಲೆ ಅದ್ಭುತ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಎರಡು ಬಾರಿ ‘ವರ್ಷದ ಮಹಿಳಾ ಕ್ರಿಕೆಟರ್’ ಪ್ರಶಸ್ತಿಗೆ ಭಾಜನರಾಗಿರುವುದು ಮಂಧಾನ ಅವರ ಸ್ಥಿರ ಪ್ರದರ್ಶನಕ್ಕೆ ಸಾಕ್ಷಿ. ಏಕದಿನವಿರಲಿ, ಟಿ-20 ಇರಲಿ ಅಥವಾ ಟೆಸ್ಟ್ ಕ್ರಿಕೆಟ್ ಇರಲಿ, ಇನಿಂಗ್ಸ್ ಆರಂಭಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುವುದರಲ್ಲಿ ಸ್ಮೃತಿ ಸದಾ ಮುಂದು. ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಿತ್ತು. ನಾಯಕತ್ವದ ಒತ್ತಡದ ನಡುವೆಯೂ ತಮ್ಮ ಬ್ಯಾಟಿಂಗ್ ಲಯವನ್ನು ಕಾಪಾಡಿಕೊಳ್ಳುವ ಪಕ್ವತೆ ಸ್ಮೃತಿ ಅವರಲ್ಲಿದೆ. ಆಫ್ಸೈಡ್ನಲ್ಲಿ ಅವರು ಬಾರಿಸುವ ಕವರ್ ಡ್ರೈವ್ಗಳು ಕ್ರಿಕೆಟ್ ಪಂಡಿತರ ಮೆಚ್ಚುಗೆಗೆ ಪಾತ್ರವಾಗಿವೆ.
ಚುರುಕುತನದ ಚಿಲುಮೆ: ಜೆಮಿಮಾ ರಾಡ್ರಿಗ್ಸ್
ಸ್ಮೃತಿ ಮಂಧಾನ ಶಾಂತಿಯುತ ಆಟಕ್ಕೆ ಹೆಸರಾದರೆ, ಜೆಮಿಮಾ ರಾಡ್ರಿಗ್ಸ್ ಮೈದಾನದಲ್ಲಿನ ಚುರುಕುತನಕ್ಕೆ ಹೆಸರುವಾಸಿ. ಮುಂಬೈ ಮೂಲದ ಈ ಯುವ ಪ್ರತಿಭೆ, ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬು. ಎದುರಾಳಿ ಬೌಲರ್ಗಳು ಫೀಲ್ಡಿಂಗ್ ಬಿಗಿಗೊಳಿಸಿದಾಗ, ಅಂತರಗಳನ್ನು ಹುಡುಕಿ ರನ್ ಕದಿಯುವ ಕಲೆ ಜೆಮಿಮಾಗೆ ಕರಗತವಾಗಿದೆ.
ಇದನ್ನು ಓದಿದ್ದೀರಾ? ಐಪಿಎಲ್ ಅಖಾಡದಲ್ಲಿ ಮಿನುಗಿದ ಮೇಷ್ಟ್ರುಗಳ ಮಕ್ಕಳು: 14.2 ಕೋಟಿ ಬಾಚಿದ ಕಾರ್ತಿಕ್-ಪ್ರಶಾಂತ್, ಕಾಶ್ಮೀರದ ಕಲಿ ಆಕಿಬ್ಗೆ ಜಾಕ್ಪಾಟ್!
ಜೆಮಿಮಾ ಅವರ ವೃತ್ತಿಜೀವನವು ಏಳು-ಬೀಳುಗಳ ಹಾದಿಯಾಗಿತ್ತು. ಒಮ್ಮೆ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಗುಳಿದಿದ್ದ ಅವರು, ನಂತರ ಫೀನಿಕ್ಸ್ನಂತೆ ಎದ್ದು ಬಂದ ರೀತಿ ಯುವ ಆಟಗಾರ್ತಿಯರಿಗೆ ಮಾದರಿ. ಸ್ಪಿನ್ನರ್ಗಳ ವಿರುದ್ಧ ಕಾಲ್ಚಳಕವನ್ನು ಬಳಸಿ ಆಡುವ ಪರಿ ಮತ್ತು ಮೈದಾನದ ಯಾವುದೇ ಮೂಲೆಯಲ್ಲಿದ್ದರೂ ಮಿಂಚಿನ ವೇಗದಲ್ಲಿ ಫೀಲ್ಡಿಂಗ್ ಮಾಡುವ ಅವರ ಸಾಮರ್ಥ್ಯ ತಂಡಕ್ಕೆ ಪ್ಲಸ್ ಪಾಯಿಂಟ್. ಡಬ್ಲ್ಯೂಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಜೆಮಿಮಾ, ಒತ್ತಡದ ಸಂದರ್ಭಗಳಲ್ಲಿಯೂ ಮುಗುಳ್ನಗುತ್ತಲೇ ಎದುರಾಳಿಗಳನ್ನು ಕಂಗೆಡಿಸುವ ಚಾಕಚಕ್ಯತೆ ಹೊಂದಿದ್ದಾರೆ.
ಜುಗಲ್ಬಂದಿ ಮತ್ತು ಸ್ನೇಹ
ಮೈದಾನದ ಹೊರಗೆ ಈ ಇಬ್ಬರೂ ಆಟಗಾರ್ತಿಯರು ಅತ್ಯುತ್ತಮ ಸ್ನೇಹಿತರು ಎಂಬುದು ವಿಶೇಷ. ಇವರ ನಡುವಿನ ಹೊಂದಾಣಿಕೆ ಮೈದಾನದಲ್ಲಿನ ಓಟಕ್ಕೆ ಸಹಕಾರಿಯಾಗಿದೆ. ವಿಕೆಟ್ ನಡುವಿನ ಓಟದಲ್ಲಿ ಇವರಿಬ್ಬರ ತಿಳುವಳಿಕೆ ಅದ್ಭುತವಾಗಿದ್ದು, ಎದುರಾಳಿಗಳ ಕೈಯಿಂದ ಪಂದ್ಯವನ್ನು ಕಸಿದುಕೊಳ್ಳುವಲ್ಲಿ ಅನೇಕ ಬಾರಿ ಯಶಸ್ವಿಯ್ಗಿದ್ದಾರೆ. ಒಬ್ಬರು ಆಕ್ರಮಣಕಾರಿ ಆಟಕ್ಕೆ ಮುಂದಾದರೆ, ಮತ್ತೊಬ್ಬರು ತಾಳ್ಮೆಯ ಆಟ ಪ್ರದರ್ಶಿಸಿ ಇನಿಂಗ್ಸ್ ಕಟ್ಟುತ್ತಾರೆ.

ಸ್ಮೃತಿ ಮಂಧಾನ ಅವರು ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಯನ್ನು ಎರಡು ಬಾರಿ ಮುಡಿಗೇರಿಸಿಕೊಂಡ ಭಾರತದ ಏಕೈಕ ಆಟಗಾರ್ತಿ. ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ 9000ಕ್ಕೂ ಹೆಚ್ಚು ರನ್ ಕಲೆ ಹಾಕಿರುವ ಇವರು, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನೆಲದಲ್ಲಿ ಶತಕ ಹಾಗೂ ಅರ್ಧಶತಕಗಳನ್ನು ಸಿಡಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಆರ್ಸಿಬಿ ತಂಡದ ನಾಯಕಿಯಾಗಿ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಟ್ರೋಫಿ ಗೆಲ್ಲಿಸಿಕೊಟ್ಟ ಸ್ಮೃತಿ, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಭಾರತ ತಂಡದ ಉಪನಾಯಕಿಯಾಗಿ ಮಹತ್ವದ ಕಾಣಿಕೆ ನೀಡಿದ್ದಾರೆ.
ಮುಂಬೈ ಮೂಲದ ಜೆಮಿಮಾ ರಾಡ್ರಿಗ್ಸ್, ಅತಿ ಚಿಕ್ಕ ವಯಸ್ಸಿನಲ್ಲಿ ಟಿ-20 ಕ್ರಿಕೆಟ್ನಲ್ಲಿ 2000 ರನ್ ಪೂರೈಸಿದ ಸಾಧಕಿ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯೆ ಇವರು. ಕೇವಲ ಭಾರತದಲ್ಲಷ್ಟೇ ಅಲ್ಲದೆ, ವಿದೇಶಿ ಲೀಗ್ಗಳಾದ ಇಂಗ್ಲೆಂಡ್ನ ‘ದಿ ಹಂಡ್ರೆಡ್’ ಮತ್ತು ಆಸ್ಟ್ರೇಲಿಯಾದ ‘ಬಿಗ್ ಬ್ಯಾಷ್’ನಲ್ಲಿಯೂ ಮಿಂಚಿರುವ ಜೆಮಿಮಾ, ಡಬ್ಲ್ಯೂಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಥಿರ ಪ್ರದರ್ಶನ ನೀಡುತ್ತಾ, ಭಾರತದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿದ್ದಾರೆ.
ಭವಿಷ್ಯದ ಹಾದಿ
ಮಹಿಳಾ ಕ್ರಿಕೆಟ್ ಇಂದು ವಾಣಿಜ್ಯಿಕವಾಗಿಯೂ ಮತ್ತು ಜನಪ್ರಿಯತೆಯ ದೃಷ್ಟಿಯಿಂದಲೂ ಬೆಳೆದಿದೆ. ಈ ಬೆಳವಣಿಗೆಯಲ್ಲಿ ಸ್ಮೃತಿ ಮತ್ತು ಜೆಮಿಮಾ ಅವರ ಕೊಡುಗೆ ಅಪಾರ. ಕೇವಲ ವೈಯಕ್ತಿಕ ದಾಖಲೆಗಳಿಗಷ್ಟೇ ಸೀಮಿತವಾಗದೆ, ತಂಡವನ್ನು ಗೆಲ್ಲಿಸುವುದೇ ಇವರ ಮುಖ್ಯ ಗುರಿ. ಮುಂಬರುವ ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತಕ್ಕೆ ಟ್ರೋಫಿ ತಂದುಕೊಡುವಲ್ಲಿ ಈ ‘ಅವಳಿ ತಾರೆ’ಗಳ ಪಾತ್ರ ನಿರ್ಣಾಯಕವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ತಾಂತ್ರಿಕ ನೈಪುಣ್ಯತೆ ಮತ್ತು ಮಾನಸಿಕ ದೃಢತೆಯ ಸಂಗಮವಾಗಿರುವ ಸ್ಮೃತಿ ಮಂಧಾನ ಮತ್ತು ಜೆಮಿಮಾ ರಾಡ್ರಿಗ್ಸ್, ಭಾರತೀಯ ಮಹಿಳಾ ಕ್ರಿಕೆಟ್ನ ಸುವರ್ಣ ಅಧ್ಯಾಯದ ಬರವಣಿಗೆಗಾರರು ಎಂದರೆ ತಪ್ಪಾಗಲಾರದು.





