ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಇದೇ 13 (ಶನಿವಾರ) ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಬೇಟಿ ನೀಡಿದ ವೇಳೆ ಇಡೀ ಕ್ರೀಡಾಂಗಣದ ವಾತಾವರಣವೇ ಹಿಂಸಾಚಾರಕ್ಕೆ ತಿರುಗಿತ್ತು.
ಶನಿವಾರ ಅರ್ಜೆಂಟೀನಾ ಮತ್ತು ಇಂಟರ್ ಮಿಯಾಮಿ ಫಾರ್ವರ್ಡ್ ತಂಡಗಳು ಗೋಟ್(GOAT – Greatest Of All Time) ಇಂಡಿಯಾ ಪ್ರವಾಸದಲ್ಲಿದ್ದಾರೆ. ಭಾರತ ಪ್ರವಾಸದಲ್ಲಿ ಮೊದಲು ಕೋಲ್ಕತ್ತಾಗೆ ಭೇಟಿ ನೀಡಿದ್ದಾರೆ. ಈ ವೇಳೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಫುಟ್ಬಾಲ್ ಅಭಿಮಾನಿಗಳು ನೆಚ್ಚಿನ ತಾರೆಯರನ್ನು ನೋಡಲು ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮೆಸ್ಸಿಯ ಬೆಂಗಾವಲು ಪಡೆ ಮೊದಲು 11:30 ಕ್ರೀಡಾಂಗಣಕ್ಕೆ ಪ್ರವೇಶಿಸಿದರು. ಅವರೊಂದಿಗೆ ಫುಟ್ಬಾಲ್ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋಡಿ ಪಾಲ್ ಇದ್ದರು. ಈ ಸಂಭ್ರಮವನ್ನು ಕಾಣ್ತುಂಬಿಕೊಳ್ಳಲು ಇಡೀ ಕ್ರೀಡಾಂಗಣವೇ ಹರ್ಷೊದ್ಗಾರದಲ್ಲಿ ಮೊಳಗಿತ್ತು.
ಇದನ್ನು ಓದಿ : ಬಂಗಾಳದ ಅಂಗಳದಲ್ಲಿ ‘ಮೆಸ್ಸಿ’ ಆಕರ್ಷಣೆ: ದಾದಾ-ಬಾದ್ಷಾ ಸಾಥ್, ಅಭಿಮಾನಿಗಳ ಪಾಲಿಗೆ ಹಬ್ಬ
ಈ ವೇಳೆ ಲಿಯೋನೆಲ್ ಮೆಸ್ಸಿ ಕ್ರೀಡಾಂಗಣವನ್ನು ಪ್ರವೇಶಿಸಿದ ತಕ್ಷಣ ಸಂಘಟಕರು, ರಾಜ್ಯ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಮತ್ತು ಫುಟ್ಬಾಲ್ ಕ್ಲಬ್ಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 70ರಿಂದ 80 ಜನರ ಗುಂಪು ಅವರನ್ನು ಸುತ್ತುವರೆದಿತ್ತು. ಗಂಟೆಗಟ್ಟಲೆ ಕಾದುಕುಳಿತಿದ್ದ ಅಭಿಮಾನಿಗಳಿಗೆ ಫುಟ್ಬಾಲ್ ದಂತಕಥೆ ಮೆಸ್ಸಿಯನ್ನು ನೋಡಲು ಸಾಧ್ಯವಾಗದಿದ್ದಕ್ಕೆ ಆಕ್ರೋಶಗೊಂಡರು. ಕೋಪಗೊಂಡ ಪ್ರೇಕ್ಷಕರು, ‘ನಮಗೆ ಮೆಸ್ಸಿ ಬೇಕು’ ಎಂದು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.

ಕೇವಲ 15 ನಿಮಿಷ ಮಾತ್ರ ಕ್ರೀಡಾಂಗಣದಲ್ಲಿದ್ದ ಮೆಸ್ಸಿಯನ್ನು ನೋಡಲು ಸಾಧ್ಯವಾಗದೆ ಇದ್ದಾಗ ಪ್ರೇಕ್ಷಕರ ಮತ್ತು ಅಭಿಮಾನಿಗಳ ಕೋಪ ಮುಗಿಲು ಮುಟ್ಟಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಾಲಿವುಡ್ ನಟ ಶಾರುಖ್ ಖಾನ್ ಕ್ರೀಡಾಂಗಣಕ್ಕೆ ಬರುವ ಮೊದಲೇ ಮೆಸ್ಸಿಯನ್ನು ಕ್ರೀಡಾಂಗಣದಿಂದ ಹೊರಗೆ ಕರೆದೊಯ್ಯಲಾಯಿತು. ಅಂದರೆ ಸುಮಾರು 11:50 ಕ್ಕೆ ಮೆಸ್ಸಿ ಕ್ರೀಡಾಂಗಣದಿಂದ ಹೊರಟಿದ್ದರು.
ನಿಜವಾಗಲೂ ಅಭಿಮಾನಿಗಳು ಆಕ್ರೋಶಗೊಳ್ಳಲು ಕಾರಣ ಮೆಸ್ಸಿ ನೋಡಲು ಕ್ರೀಡಾಂಗಣದವರು ಇಟ್ಟಿದ್ದ ಟಿಕೆಟ್ ಬೆಲೆ. ಸುಮಾರು ರೂ.5000 ದಿಂದ ಸುಮಾರು ರೂ16,000 ದ ತನಕ ಟಿಕೆಟ್ ಬೆಲೆ ನಿಗದಿ ಪಡಿಸಿದ್ದರು, ಒಂದು ಅಂದಾಜು 60 ಸಾವಿರದಷ್ಟು ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು. ತಮ್ಮ ನೆಚ್ಚಿನ ಫುಟ್ಬಾಲ್ ತಾರೆಯನ್ನು ನೋಡಲು ಸಾಧ್ಯವಾಗದ ಕಾರಣ ಅಭಿಮಾನಿಗಳ ಕೋಪ ಕೆಲವೇ ನಿಮಿಷಗಳಲ್ಲಿ ಇಡೀ ಕ್ರೀಡಾಂಗಣವೇ ಅಲ್ಲೋಲ ಕಲ್ಲೋಲವಾಯಿತು. ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರು ಕುರ್ಚಿಗಳನ್ನು ಒಡೆದು ಮೈದಾನದ ಮೇಲೆ ಎಸೆಯಲು ಪ್ರಾರಂಭಿಸಿದರು.
ನೀರಿನ ಬಾಟಲಿಗಳು, ತಮಗೆ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಮೈದಾನಕ್ಕೆ ಎಸೆದರು. ಆಕ್ರೋಶ ಇನ್ನಷ್ಟು ಭುಗಿಲೆದ್ದು, ಮೈದಾನದ ಅಂಚಿನಲ್ಲಿರುವ ಗೇಟ್ ಅನ್ನು ಮುರಿದು ದೊಡ್ಡ ಸಂಖ್ಯೆಯಲ್ಲಿ ನುಗ್ಗಲು ಆರಂಭಿಸಿದರು. ನಿಯಂತ್ರಣಕ್ಕೆ ಸಿಗದ ನೂರಾರು ಅಭಿಮಾನಿಗಳು ಮೈದಾನದಲ್ಲಿದ್ದ ಕುರ್ಚಿಗಳನ್ನು ಹೊಡೆದು ಉರುಳಿಸಿದರು. ಕ್ರೀಡಾಂಗಣದ ಒಳಗೆ ಬೆಂಕಿ ಹಚ್ಚುವ ಕಿಡಿಗೇಡಿ ಕೃತ್ಯವೂ ನಡೆಯಿತು.
ಆಕ್ರೋಶಗೊಂಡ ಅಭಿಮಾನಿಗಳನ್ನು ಪೊಲೀಸ್ ಸಿಬ್ಬಂದಿ ಹಿಮ್ಮೆಟಿಸಲು ಎಷ್ಟೇ ಪ್ರಯತ್ನಿಸಿದರು, ಆರಂಭದಲ್ಲಿ ಅಭಿಮಾನಿಗಳ ಕೋಪವನ್ನು ತಣ್ಣಗಾಗಿಸಲು ವಿಫಲರಾದರು. ಇಡೀ ಕ್ರೀಡಾಂಗಣವೇ ಕೆಲವು ನಿಮಿಷಗಳ ಕಾಲ ಅಸ್ತವ್ಯಸ್ತಗೊಂಡ ಪರಿಸ್ಥಿತಿ ನಿರ್ಮಾಣವಾಯಿತು. ಸಂಘಟಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಪೊಲೀಸರು ಅಭಿಮಾನಿಗಳ ಕೋಪವನ್ನು ಮತ್ತು ಕ್ರೀಡಾಂಗಣವನ್ನು ಹೊಡೆಯುವುದನ್ನು ತಡೆಯಲು ಲಾಠಿ ಪ್ರಹಾರ ನಡೆಸಬೇಕಾಯಿತು.
ಮೆಸ್ಸಿಯನ್ನು ಸ್ವಾಗತಿಸಲು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಲೇಕ್ ಟೌನ್ನಲ್ಲಿರುವ ಶ್ರೀ ಭೂಮಿ ಸ್ಟೋರ್ಟಿಂಗ್ ಕ್ಲಬ್ ಬಳಿಯ ಪೂರ್ವ ಮೆಟ್ರೋಪಾಲಿಟನ್ ಬೈಪಾಸ್ನಲ್ಲಿ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆಯಾದ ಲಿಯೋನಾಲ್ ಮೆಸ್ಸಿಯ 70 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಅದರ ಉದ್ಘಾಟನೆಗೆ ಆಗಮಿಸಿದ್ದರು. ಇದು ಅವರ ಎರಡನೇ ಕೋಲ್ಕತ್ತಾ ಭೇಟಿಯಾಗಿದೆ. ಮೊದಲು 14 ವರ್ಷದ ಹಿಂದೆ ಭೇಟಿ ನೀಡಿದ್ದಾರೆ.

ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಘಟನೆಯಿಂದ ನಾನು ತೀವ್ರವಾಗಿ ವಿಚಲಿತನಾಗಿದ್ದೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೇಸರ ವ್ಯಕ್ತಪಡಿಸಿ, ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ. ತಮ್ಮ ನೆಚ್ಚಿನ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಯನ್ನು ನೋಡಲು ಹೋದಾಗ ಈ ಘಟನೆ ನಡೆದದ್ದು ನಿಜಕ್ಕೂ ಬೇಸರ ತರಿಸಿದೆ. ನಾನು ಸಹ ಮೆಸ್ಸಿ ಅವರನ್ನು ನೋಡಲು ಧಾವಿಸುತ್ತಿದ್ದೆ. ಆದರೆ ಮೆಸ್ಸಿ ಅವರ ಅಭಿಮಾನಿಗಳಲ್ಲಿ ಮತ್ತು ಫುಟ್ಬಾಲ್ ಪ್ರೇಮಿಗಳ ಬಳಿ ಕ್ಷಮೆಯಾಚಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಆಶಿಮ್ ಕುಮಾರ್ ರೇ ಅವರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. “ಸಮಿತಿಯು ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುತ್ತದೆ. ವರದಿ ಬಂದ ತಕ್ಷಣ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಜಾಗೃತ ಕ್ರಮಗಳಿಗೆ ಶಿಫಾರಸು ಮಾಡಲಾಗುತ್ತದೆ”
ಈಗಾಗಲೇ ಮೆಸ್ಸಿಯ ಪ್ರಯಾಣದ ಪ್ರಮುಖ ಆಯೋಜನಕರಾಗಿರುವ ಸತಾದ್ರು ದತ್ತ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಮಾನಿಗಳಿಗೆ ತಮ್ಮ ಹಣವನ್ನು ಹಿಂತಿರುಗಿಸಲು ಅಥವಾ ಸೂಕ್ತ ಮಟ್ಟದ ಪರಿಹಾರವನ್ನು ನೀಡುತ್ತೆವೆ. ಪರಿಸ್ಥಿತಿಗೆ ಯಾರೇ ಕಾರಣರಾದರೂ ಅವರನ್ನು ಶಿಕ್ಷೆಗೆ ಒಳಪಡಿಸುತ್ತೆವೆ ಎಂದು ಪಶ್ಚಿಮ ಬಂಗಾಳ ಡಿಜಿಪಿ ರಾಜೀವ್ ಕುಮಾರ್ ಅವರು ತಿಳಿಸಿದ್ದಾರೆ.
ಇದೇ ರೀತಿ ಹೈದರಾಬಾದ್, ಮುಂಬೈ ಮತ್ತು ದೆಹಲಿಯಲ್ಲಿ ಗೋಟ್ ಇಂಡಿಯಾ ಪ್ರವಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೋಲ್ಕತ್ತಾ ನಂತರ ಸಂಜೆ ವೇಳೆಗೆ ಹೈದರಾಬಾದ್ ಗೆ ಮೆಸ್ಸಿ ಬೇಟಿ ನೀಡಿದ್ದಾರೆ. ಈ ವೇಳೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಹುಲ್ ಮತ್ತು ಮೆಸ್ಸಿ ಆತ್ಮೀಯತೆಯಿಂದ ಮಾತನಾಡುವ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ.





