ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ಸರ್ಕಾರದ ಆದೇಶದ ಮೇರೆಗೆ ಫೆಬ್ರವರಿ 15ರಂದು ಭಾರತ ಕ್ರಿಕೆಟ್ ತಂಡದೊಂದಿಗೆ ಟಿ20 ವಿಶ್ವಕಪ್ ಪಂದ್ಯವನ್ನು ಆಡಲು ನಿರ್ಧರಿಸಿದೆ. ಈ ಹಿಂದೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಯನ್ನು ಉಲ್ಲೇಖಿಸಿ ಭಾರತದೊಂದಿಗೆ ಪಂದ್ಯವನ್ನು ಬಹಿಷ್ಕರಿಸಿತ್ತು.
ಸೋಮವಾರ ಹೇಳಿಕೆಯನ್ನು ಹೊರಡಿಸಿದ್ದು, “ಪಾಕಿಸ್ತಾನ ಸರ್ಕಾರವು 2026ರ ಫೆಬ್ರವರಿ 15ರಂದು ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ನಿಗದಿತ ಪಂದ್ಯಕ್ಕಾಗಿ ಪಾಕಿಸ್ತಾನ ತಂಡವನ್ನು ಮೈದಾನಕ್ಕೆ ಇಳಿಸಲು ಈ ಮೂಲಕ ಆದೇಶಿಸುತ್ತದೆ” ಎಂದು ತಿಳಿಸಿದೆ. ಕ್ರೀಡಾ ಸ್ಫೂರ್ತಿಯನ್ನು ಎತ್ತಿಹಿಡಿಯಲು ಮತ್ತು ಜಾಗತಿಕ ಕ್ರಿಕೆಟ್ಗೆ ಬೆಂಬಲ ನೀಡಲು ಈ ನಿರ್ಧಾರ ಕೈಗೊಂಡಿರುವುದಾಗಿ ಪಾಕಿಸ್ತಾನ ಸರ್ಕಾರ ತಿಳಿಸಿದೆ.
ಇದನ್ನು ಓದಿದ್ದೀರಾ? ಭಾರತಕ್ಕೆ ಬಂದರೆ ಸದೆ ಬಡಿಯುತ್ತೇವೆ; ಪಾಕ್ಗೆ ವಿಶ್ವಕಪ್ ವಿಜೇತ ತಂಡದ ಸದಸ್ಯನ ಎಚ್ಚರಿಕೆ
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿ ಮಾಡಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಪ್ರತಿನಿಧಿಗಳೊಂದಿಗೆ ನಡೆಸಿದ ತಮ್ಮ ಸಭೆಯ ಬಗ್ಗೆ ತಿಳಿಸಿದೆ ಕೆಲವೇ ಸಮಯದ ನಂತರ ಪಾಕಿಸ್ತಾನ ಸರ್ಕಾರ ಈ ಪ್ರಕಟಣೆ ಹೊರಡಿಸಿದೆ.
2024ರಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ಪಲಾಯನ ಮಾಡಿದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಐಪಿಎಲ್ 2026ರ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಆಯ್ಕೆಯಾಗಿದ್ದ ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಬಿಸಿಸಿಐ (BCCI) ಸೂಚನೆಯ ಮೇರೆಗೆ ತಂಡದಿಂದ ಕೈಬಿಟ್ಟಿದ್ದು ಬಾಂಗ್ಲಾದೇಶದ ಅಸಮಾಧಾನಕ್ಕೆ ಕಾರಣವಾಗಿದೆ.
ಇದಾದ ಬಳಿಕ ಟಿ20 ಪಂದ್ಯ ಘೋಷಣೆಯಾದ ಬಳಿಕ ಭಾರತದಲ್ಲಿ ತಮ್ಮ ಆಟಗಾರರು, ಅಧಿಕಾರಿಗಳು ಮತ್ತು ಅಭಿಮಾನಿಗಳಿಗೆ ಸೂಕ್ತ ಭದ್ರತೆ ಇಲ್ಲ ಎಂಬ “ಗಂಭೀರ ಭದ್ರತಾ ಅಪಾಯ”ವನ್ನು ಬಾಂಗ್ಲಾದೇಶ ಸರ್ಕಾರ ಮತ್ತು ಕ್ರಿಕೆಟ್ ಮಂಡಳಿ ಉಲ್ಲೇಖಿಸಿದೆ. ಬಾಂಗ್ಲಾದೇಶವು ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ವಿನಂತಿಸಿದೆ. ಆದರೆ ಐಸಿಸಿ ಈ ಬೇಡಿಕೆಯನ್ನು ತಿರಸ್ಕರಿಸಿದ ಕಾರಣ ಬಾಂಗ್ಲಾದೇಶವು ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಪಾಕಿಸ್ತಾನವು ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿತ್ತು.





