ಫೆಬ್ರವರಿ 15ರಂದು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಕಣಕ್ಕಿಳಿಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂದೆ ಮೂರು ಕಠಿಣ ಷರತ್ತುಗಳನ್ನು ವಿಧಿಸಿದೆ. ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ತನ್ನ ನಿರ್ಧಾರವನ್ನು ಬದಲಿಸಬೇಕಾದರೆ, ಈ ಬೇಡಿಕೆಗಳನ್ನು ಈಡೇರಿಸುವಂತೆ ಪಿಸಿಬಿ ಪಟ್ಟು ಹಿಡಿದಿದೆ ಎಂದು ವರದಿಯಾಗಿದೆ.
ಲಾಹೋರ್ನಲ್ಲಿ ಭಾನುವಾರ ನಡೆದ ಮಹತ್ವದ ಸಭೆಯಲ್ಲಿ ಪಿಸಿಬಿ ಅಧಿಕಾರಿಗಳು ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ಬುಲ್ ಅವರು ಐಸಿಸಿ ನಿಯೋಗದೊಂದಿಗೆ ಚರ್ಚೆ ನಡೆಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವು ನಿಗದಿಯಂತೆ ನಡೆಯುವಂತೆ ನೋಡಿಕೊಳ್ಳಲು ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವುದು ಈ ಸಭೆಯ ಪ್ರಮುಖ ಉದ್ದೇಶವಾಗಿತ್ತು. ‘ಕ್ರಿಕ್ಬಜ್’ ವರದಿಯ ಪ್ರಕಾರ, ಪಿಸಿಬಿ ಪ್ರಮುಖವಾಗಿ ಐಸಿಸಿ ಆದಾಯದಲ್ಲಿ ಹೆಚ್ಚಿನ ಪಾಲು, ಭಾರತದೊಂದಿಗೆ ದ್ವಿಪಕ್ಷೀಯ ಸರಣಿಗಳ ಪುನರಾರಂಭ ಮತ್ತು ‘ಹ್ಯಾಂಡ್ಶೇಕ್ ಪ್ರೋಟೋಕಾಲ್’ (ಕಡ್ಡಾಯ ಹಸ್ತಲಾಘವ ಶಿಷ್ಟಾಚಾರ) ಜಾರಿಗೆ ಒತ್ತಾಯಿಸಿದೆ.
ಪ್ರಸ್ತುತ ಐಸಿಸಿ ಆದಾಯ ಹಂಚಿಕೆಯಲ್ಲಿ ಪಾಕಿಸ್ತಾನವು ಶೇ 5.75ರಷ್ಟು (ವಾರ್ಷಿಕ 34.51 ಮಿಲಿಯನ್ ಡಾಲರ್) ಪಾಲನ್ನು ಪಡೆಯುತ್ತಿದ್ದು, ಇದು ಬಿಸಿಸಿಐ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಂಡಳಿಗಳು ಪಡೆಯುವ ಮೊತ್ತಕ್ಕಿಂತ ತೀರಾ ಕಡಿಮೆಯಾಗಿದೆ. ಆರ್ಥಿಕವಾಗಿ ಮಂಡಳಿಯನ್ನು ಬಲಪಡಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ ಎಂಬುದು ಪಿಸಿಬಿಯ ವಾದವಾಗಿದೆ. ಇದರೊಂದಿಗೆ, ದ್ವಿಪಕ್ಷೀಯ ಕ್ರಿಕೆಟ್ ಸಂಬಂಧವನ್ನು ಮರುಸ್ಥಾಪಿಸುವ ಬೇಡಿಕೆಯನ್ನೂ ಮುಂದಿಡಲಾಗಿದೆ. ಆದರೆ, ಈ ವಿಷಯವು ಉಭಯ ದೇಶಗಳ ಸರ್ಕಾರಗಳ ನಿರ್ಧಾರಕ್ಕೆ ಒಳಪಟ್ಟಿರುವುದರಿಂದ, ಐಸಿಸಿ ಇದರಲ್ಲಿ ಮಧ್ಯಸ್ಥಿಕೆ ಮಾತ್ರ ವಹಿಸಬಹುದಾಗಿದೆ ಎಂಬುದು ವಾಸ್ತವ.
ಇದನ್ನು ಓದಿದ್ದೀರಾ? U19 ವಿಶ್ವಕಪ್ ಫೈನಲ್ | ಇಂಗ್ಲೆಂಡ್ ವಿರುದ್ಧ ‘ಸೂರ್ಯ’ನ ಸಿಡಿಲಬ್ಬರದ ಶತಕ; ಸಿಕ್ಸರ್, ಬೌಂಡರಿಗಳ ಸುರಿಮಳೆ
ಮೂರನೇ ಬೇಡಿಕೆಯಾದ ‘ಹ್ಯಾಂಡ್ಶೇಕ್ ಪ್ರೋಟೋಕಾಲ್’ ವಿಷಯವು 2025ರ ಏಷ್ಯಾ ಕಪ್ ಘಟನೆಯ ಹಿನ್ನೆಲೆಯನ್ನು ಹೊಂದಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸಿ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು. ಈ ಅವಮಾನದ ಹಿನ್ನೆಲೆಯಲ್ಲಿ, ಮೈದಾನದಲ್ಲಿ ಶಿಷ್ಟಾಚಾರವನ್ನು ಕಡ್ಡಾಯಗೊಳಿಸಲು ಪಾಕಿಸ್ತಾನ ಒತ್ತಾಯಿಸಿದೆ.
ಭದ್ರತಾ ಕಾರಣಗಳಿಗಾಗಿ ಪಂದ್ಯಗಳನ್ನು ಸ್ಥಳಾಂತರಿಸಲು ಐಸಿಸಿ ನಿರಾಕರಿಸಿದ ನಂತರ ಬಾಂಗ್ಲಾದೇಶ ಟೂರ್ನಿಯಿಂದ ಹಿಂದೆ ಸರಿದಿತ್ತು. ಇದಕ್ಕೆ ಬೆಂಬಲ ಸೂಚಿಸಿ ಪಾಕಿಸ್ತಾನ ಸರ್ಕಾರವು ಭಾರತದ ವಿರುದ್ಧ ಆಡಲು ಅನುಮತಿ ನಿರಾಕರಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ರದ್ದಾದರೆ ಪ್ರಸಾರ ಹಕ್ಕಿನ ಭಾರಿ ಆದಾಯವನ್ನು ಐಸಿಸಿ ಕಳೆದುಕೊಳ್ಳುವ ಭೀತಿಯಿದೆ. ಈ ಆರ್ಥಿಕ ಒತ್ತಡವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು, ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪಿಸಿಬಿ ತಂತ್ರ ರೂಪಿಸಿದೆ ಎಂದು ಹೇಳಾಲಾಗುತ್ತಿದೆ.





