17 ವರ್ಷಗಳ ಬಳಿಕ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಆರ್ಸಿಬಿಯ ಯಾವುದೇ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲ.
ಸಾಮಾನ್ಯವಾಗಿ ಚಾಂಪಿಯನ್ ತಂಡದ ತವರು ಮೈದಾನದಲ್ಲೇ ಮುಂದಿನ ವರ್ಷದ ಟೂರ್ನಿ ಉದ್ಘಾಟನೆ ನಡೆಯುವುದು ಸಂಪ್ರದಾಯ. ಈ ಹಿನ್ನೆಲೆ ಐಪಿಎಲ್ 2026ರ ಆರಂಭವು ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಿಂದಲೇ ಟೂರ್ನಿ ಎತ್ತಂಗಡಿ ಆಗಲಿದೆ ಎಂದು ವರದಿಗಳು ತಿಳಿಸಿವೆ.
ಈ ನಿರ್ಧಾರಕ್ಕೆ ಕಾರಣವಾಗಿರುವುದು ಕಳೆದ ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ. ಟ್ರೋಫಿ ವಿಜಯೋತ್ಸವದ ಹಿನ್ನಲೆಯಲ್ಲಿ ನಡೆದ ಈ ಘಟನೆಯಲ್ಲಿ 11 ಮಂದಿ ಅಭಿಮಾನಿಗಳು ಜೀವ ಕಳೆದುಕೊಂಡಿದ್ದರು. ಈ ದುರ್ಘಟನೆಯ ಬಳಿಕ ಸುರಕ್ಷತಾ ವ್ಯವಸ್ಥೆಯ ಕುರಿತ ಚಿಂತನೆಗಳು ಹೆಚ್ಚಾಗಿದ್ದು, ಕ್ರೀಡಾಂಗಣವನ್ನು ದೊಡ್ಡ ಪ್ರಮಾಣದ ಕಾರ್ಯಕ್ರಮಗಳಿಗೆ ಅಸುರಕ್ಷಿತವೆಂದು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ನೇತೃತ್ವದ ಸಮಿತಿ ವರದಿ ನೀಡಿತ್ತು.
ಇದನ್ನು ಓದಿದ್ದೀರಾ? ಮಹಿಳಾ ವಿಶ್ವಕಪ್ ಗೆದ್ದ ತಂಡಕ್ಕೆ ಎಷ್ಟು ಬಹುಮಾನ?
ಇದರಿಂದಾಗಿ ಬೆಂಗಳೂರು ನಗರದಲ್ಲಿ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಹಾಗೂ ಆಯೋಜಕರು ಹಿಂಜರಿಯುತ್ತಿರುವುದು ತಿಳಿದುಬಂದಿದೆ. ಆರ್ಸಿಬಿ ತಂಡದ ತವರು ಪಂದ್ಯಗಳನ್ನು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (MCA) ಕ್ರೀಡಾಂಗಣದಲ್ಲಿ ನಡೆಸುವ ಕುರಿತು ಚರ್ಚೆಗಳು ನಡೆಯುತ್ತಿವೆ.
“ಆರ್ಸಿಬಿ ತಂಡದ ಪಂದ್ಯಗಳನ್ನು ಪುಣೆಯಲ್ಲಿ ಆಯೋಜಿಸುವ ಕುರಿತು ಪ್ರಾಥಮಿಕ ಮಟ್ಟದ ಮಾತುಕತೆ ನಡೆದಿದೆ. ಕೆಲ ತಾಂತ್ರಿಕ ವಿಚಾರಗಳು ಪರಿಹಾರವಾದರೆ ಪುಣೆ ಆರ್ಸಿಬಿಯ ತಾತ್ಕಾಲಿಕ ತವರು ಮೈದಾನವಾಗುವ ಸಾಧ್ಯತೆ ಇದೆ,” ಎಂದು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಕಮಲೇಶ್ ಪೈ ತಿಳಿಸಿದ್ದಾರೆ.
ಐಪಿಎಲ್ ಪಂದ್ಯಗಳು ಸ್ಥಳಾಂತರವಾಗುತ್ತಿರುವುದು ಇದೇ ಮೊದಲಲ್ಲ. ಹಿಂದೆ 2009ರಲ್ಲಿ ಲೋಕಸಭಾ ಚುನಾವಣೆಯ ಭದ್ರತಾ ಕಾರಣಗಳಿಂದ ಟೂರ್ನಿಯನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು. 2022ರಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ದುಬೈಗೆ ಶಿಫ್ಟ್ ಮಾಡಲಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕೂಡಾ ತಮ್ಮ ತವರು ಮೈದಾನಗಳನ್ನು ಬದಲಾಯಿಸಿದ ಉದಾಹರಣೆಗಳಿವೆ. ಆದರೆ ಈ ಬಾರಿ ಕಾಲ್ತುಳಿತ ದುರಂತದಿಂದಾಗಿ ಆರ್ಸಿಬಿ ಅಭಿಮಾನಿಗಳು ತಮ್ಮ ನಗರದಲ್ಲಿ ಪಂದ್ಯಗಳನ್ನು ಕಳೆದುಕೊಳ್ಳುವಂತಾಗಿದೆ.





