ಭಾರತದ ಖ್ಯಾತ ಷಟ್ಲರ್ ಹಾಗೂ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ಅವರು ದುಬೈನಲ್ಲಿ ಎದುರಾದ ಆತಂಕಕಾರಿ ಪರಿಸ್ಥಿತಿಯಿಂದ ಪಾರಾಗಿ ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ್ದಾರೆ. ಇರಾನ್ ಮೇಲೆ ಅಮೆರಿಕದ ಬಾಂಬ್ ದಾಳಿ ಮತ್ತು ಗಲ್ಫ್ ಪ್ರದೇಶದಲ್ಲಿ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಅವರು ದುಬೈನಲ್ಲಿಯೇ ಸಿಲುಕಿಕೊಳ್ಳುವಂತಾಗಿತ್ತು. ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಲು ತೆರಳುತ್ತಿದ್ದ ಅವರು, ಫೆಬ್ರವರಿ 28ರ ಶನಿವಾರದಿಂದ ದುಬೈನಲ್ಲಿ ವಿಮಾನಯಾನ ಸ್ಥಗಿತಗೊಂಡು ಪರದಾಡುವಂತಾಗಿತ್ತು.
ಮಂಗಳವಾರ ತಾವು ಭಾರತಕ್ಕೆ ಮರಳಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಿಂಧು, ತಮ್ಮ ಸುರಕ್ಷಿತ ಪ್ರಯಾಣಕ್ಕೆ ನೆರವಾದ ಅಲ್ಲಿನ ಸಿಬ್ಬಂದಿ, ದುಬೈ ಅಧಿಕಾರಿಗಳು, ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ವಲಸೆ ವಿಭಾಗದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ, ತಾವು ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ನಿಂದ ಹೊರಗುಳಿಯುತ್ತಿರುವುದಾಗಿ ತಿಳಿಸಿದ ಅವರು, ಸದ್ಯ ವಿರಮಿಸಿ ಭವಿಷ್ಯದ ಹೆಜ್ಜೆಗಳ ಬಗ್ಗೆ ಯೋಚಿಸುವ ಸಮಯ ಬಂದಿದೆ ಎಂದಿದ್ದಾರೆ.
”ಕಳೆದ ಕೆಲವು ದಿನಗಳು ತೀವ್ರ ಆತಂಕ ಮತ್ತು ಅನಿಶ್ಚಿತತೆಯಿಂದ ಕೂಡಿದ್ದವು. ಆದರೆ, ಸುರಕ್ಷಿತವಾಗಿ ನನ್ನ ಮನೆಗೆ ಮರಳಿರುವುದಕ್ಕೆ ನನಗೆ ಅತೀವ ಸಂತಸವಿದೆ. ಈ ಅತ್ಯಂತ ಕಷ್ಟಕರ ಸಮಯದಲ್ಲಿ ನಮ್ಮ ನೆರವಿಗೆ ನಿಂತು, ಅತ್ಯಂತ ಕಾಳಜಿ ವಹಿಸಿದ ಸಿಬ್ಬಂದಿ, ದುಬೈ ಅಧಿಕಾರಿಗಳು, ವಿಮಾನ ನಿಲ್ದಾಣದ ಸಿಬ್ಬಂದಿ, ವಲಸೆ ವಿಭಾಗ ಮತ್ತು ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಅವರ ವೃತ್ತಿಪರತೆ ಮತ್ತು ಸಹಾನುಭೂತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ,” ಎಂದು ಸಿಂಧು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ ವಿಶ್ವಕಪ್ 2026 | ಯುದ್ಧಗಳ ಕಾರ್ಮೋಡದ ನಡುವೆ ಫುಟ್ಬಾಲ್ ಹಬ್ಬಕ್ಕೆ 100 ದಿನಗಳ ಕ್ಷಣಗಣನೆ
ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ಗೆ ತೆರಳಲು ಸಂಪರ್ಕ ಕೊಂಡಿಯಾಗಿದ್ದ ದುಬೈಗೆ ಸಿಂಧು ಶನಿವಾರ ಆಗಮಿಸಿದ್ದರು. ಆದರೆ, ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾದ ಕಾರಣ, ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲೊಂದಾದ ದುಬೈ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿತು. ಇದರಿಂದಾಗಿ, ಸಿಂಧು ಸೇರಿದಂತೆ ಸಾವಿರಾರು ಪ್ರಯಾಣಿಕರು ಮುಂದಿನ ಪ್ರಯಾಣದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೆ ಸಂಕಷ್ಟಕ್ಕೀಡಾಗಿದ್ದರು.
ಮಾರ್ಚ್ 1ರಂದು ಈ ತಾರಾ ಆಟಗಾರ್ತಿ ಮತ್ತು ಅವರ ತಂಡ ತಂಗಿದ್ದ ಸ್ಥಳದ ಸಮೀಪವೇ ಸ್ಫೋಟವೊಂದು ಸಂಭವಿಸಿದ್ದು, ಅವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಆ ಕ್ಷಣ ಅತ್ಯಂತ ಉದ್ವಿಗ್ನ ಹಾಗೂ ಭಯಾನಕವಾಗಿತ್ತು ಎಂದು ಸಿಂಧು ವಿವರಿಸಿದ್ದಾರೆ. ಹೊಗೆ ಮತ್ತು ಅವಶೇಷಗಳು ಬೀಳುತ್ತಿದ್ದ ಸ್ಥಳಕ್ಕೆ ತೀರಾ ಹತ್ತಿರದಲ್ಲಿದ್ದ ತಮ್ಮ ತರಬೇತುದಾರರು (ಕೋಚ್) ತಕ್ಷಣವೇ ಅಲ್ಲಿಂದ ಓಡಿಬಂದು ಪ್ರಾಣಾಪಾಯದಿಂದ ಪಾರಾಗಬೇಕಾಯಿತು ಎಂದೂ ಅವರು ತಿಳಿಸಿದ್ದಾರೆ. ಬಳಿಕ, ದುಬೈ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಭಾರತೀಯ ಹೈಕಮಿಷನ್ನ ಕ್ಷಿಪ್ರ ನೆರವಿನೊಂದಿಗೆ ತಂಡವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.
ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ನ ಆರಂಭಿಕ ಸುತ್ತಿನಲ್ಲಿ ಸಿಂಧು ಅವರು ಥಾಯ್ಲೆಂಡ್ನ ಸುಪನಿದಾ ಕಟೆಥಾಂಗ್ ಅವರನ್ನು ಎದುರಿಸಬೇಕಿತ್ತು. ಇದೀಗ ಸಿಂಧು ಅವರ ಅನುಪಸ್ಥಿತಿಯಲ್ಲಿ, ಪರ್ಯಾಯ ಮಾರ್ಗಗಳ ಮೂಲಕ ಬರ್ಮಿಂಗ್ಹ್ಯಾಮ್ ತಲುಪಿರುವ ಲಕ್ಷ್ಯ ಸೇನ್ ಮತ್ತು ಆಯುಷ್ ಶೆಟ್ಟಿ ಅವರು ಟೂರ್ನಿಯಲ್ಲಿ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ





