ರಣಜಿ ಟ್ರೋಫಿ 2025-26ರ ಫೈನಲ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಬೃಹತ್ ಮೊತ್ತವನ್ನು ಬೆನ್ನಟ್ಟಿರುವ ಕರ್ನಾಟಕ ತಂಡವು ಮೂರನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿದ್ದು, ಸಂಕಷ್ಟಕ್ಕೆ ಸಿಲುಕಿದೆ. ಆದಾಗ್ಯೂ, ನಾಯಕ ಮಯಾಂಕ್ ಅಗರ್ವಾಲ್ ಅವರ ಆಕರ್ಷಕ ಶತಕ ತಂಡಕ್ಕೆ ಆಶಾಕಿರಣವಾಗಿದೆ.
ಮೊದಲು ಬ್ಯಾಟ್ ಮಾಡಿದ ಜಮ್ಮು ಕಾಶ್ಮೀರ ತಂಡವು ತನ್ನ ಮೊದಲ ಇನಿಂಗ್ಸ್ನಲ್ಲಿ 584 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು, ಪ್ರಮುಖ ವಿಕೆಟ್ಗಳನ್ನು ಬೇಗನೆ ಕಳೆದುಕೊಂಡು ಆಘಾತ ಅನುಭವಿಸಿತು. ಮೂರನೇ ದಿನದ ಆಟ ಮುಗಿಯುವ ಹೊತ್ತಿಗೆ ಕರ್ನಾಟಕ ಇನ್ನೂ 364 ರನ್ಗಳ ಹಿನ್ನಡೆಯಲ್ಲಿದೆ.
ಇದನ್ನು ಓದಿದ್ದೀರಾ? ‘ಚಿನ್ನಸ್ವಾಮಿ’ಯಲ್ಲಿ ಐಪಿಎಲ್ ಪಂದ್ಯಗಳು ಇನ್ನೂ ಅತಂತ್ರ: ಬೇಷರತ್ ಅನುಮತಿಗೆ ಆರ್ಸಿಬಿ ಪಟ್ಟು
ಒಂದೆಡೆ ವಿಕೆಟ್ಗಳು ಉರುಳುತ್ತಿದ್ದರೂ ಕ್ರೀಸ್ನಲ್ಲಿ ಭದ್ರವಾಗಿ ನೆಲೆಯೂರಿ ಛಲದಿಂದ ಹೋರಾಟ ನಡೆಸುತ್ತಿರುವ ನಾಯಕ ಮಯಾಂಕ್ ಅಗರ್ವಾಲ್ 207 ಎಸೆತಗಳಲ್ಲಿ ಅಜೇಯ 130 ರನ್ ಗಳಿಸಿ ಆಡುತ್ತಿದ್ದಾರೆ. ಅವರಿಗೆ ಉತ್ತಮ ಜೊತೆ ನೀಡುತ್ತಿರುವ ಕೃತಿಕ್ ಕೃಷ್ಣ 75 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸದ್ಯ ಕ್ರೀಸ್ನಲ್ಲಿರುವ ಇವರಿಬ್ಬರ ಜೊತೆಯಾಟವು ಕರ್ನಾಟಕ ತಂಡದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ.
ಜಮ್ಮು ಕಾಶ್ಮೀರ ತಂಡದ ಪರ ಅಖೀಬ್ ನಬಿ 32/3, ಸುನಿಲ್ ಕುಮಾರ್, ಯದುವೀರ್ ಸಿಂಗ್ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ. ನಾಲ್ಕನೇ ದಿನದ ಆಟವು ಕರ್ನಾಟಕ ತಂಡಕ್ಕೆ ಅಗ್ನಿಪರೀಕ್ಷೆಯಾಗಿದ್ದು, ಮಯಾಂಕ್ ಅಗರ್ವಾಲ್ ಮತ್ತು ಕೃತಿಕ್ ಕೃಷ್ಣ ಅವರ ಮೇಲೆ ತಂಡವನ್ನು ಹಿನ್ನಡೆಯಿಂದ ಪಾರು ಮಾಡುವ ಅತಿದೊಡ್ಡ ಜವಾಬ್ದಾರಿಯಿದೆ.





