ಆರ್ಸಿಬಿ ಐಪಿಎಲ್ ಗೆಲುವಿನ ಬಳಿಕ ನಡೆದ ಬೆಂಗಳೂರು ಕಾಲ್ತುಳಿತ ದುರಂತದ ಬಗ್ಗೆ ಇತ್ತೀಚೆಗಷ್ಟೇ ಮೌನ ಮುರಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಇದೀಗ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ನೆರವು ಘೋಷಿಸಿದೆ.
ಜೂನ್ 4ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪ್ರಶಸ್ತಿ ಆಚರಣೆಯ ವೇಳೆ ಕಾಲ್ತುಳಿತ ದುರಂತ ಸಂಭವಿಸಿದ್ದು ಒಟ್ಟು ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಎಕ್ಸ್ನಲ್ಲಿ ಮೂರು ತಿಂಗಳ ಬಳಿಕ ಪೋಸ್ಟ್ ಮಾಡಿದ್ದು, ಆರ್ಸಿಬಿ ಕೇರ್ಸ್ ಬಗ್ಗೆ ಘೋಷಣೆ ಮಾಡಿತ್ತು.
ಇದನ್ನು ಓದಿದ್ದೀರಾ? ಬೆಂಗಳೂರು ಕಾಲ್ತುಳಿತ ದುರಂತ | ಹೈಕೋರ್ಟ್ಗೆ ವರದಿ ಸಲ್ಲಿಸಲು ಒಂದು ವಾರ ಕಾಲಾವಕಾಶ ಕೋರಿದ ಸರ್ಕಾರ
ಇದೀಗ ಎಕ್ಸ್ನಲ್ಲಿ ಮತ್ತೆ ಪೋಸ್ಟ್ ಮಾಡಿರುವ ಆರ್ಸಿಬಿ, “ಜೂನ್ 4 ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ… ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು, ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ” ಎಂದು ಹೇಳಿದೆ.
𝗥𝗖𝗕 𝗖𝗮𝗿𝗲𝘀: 𝗢𝗳𝗳𝗶𝗰𝗶𝗮𝗹 𝗔𝗻𝗻𝗼𝘂𝗻𝗰𝗲𝗺𝗲𝗻𝘁
— Royal Challengers Bengaluru (@RCBTweets) August 30, 2025
Our hearts broke on June 4, 2025.
We lost eleven members of the RCB family. They were part of us. Part of what makes our city, our community & our team unique. Their absence will echo in the memories of each one of… pic.twitter.com/1hALMHZ6os
ಹಾಗೆಯೇ, “ನಾವು ನೀಡುವ ಯಾವುದೇ ಸಹಾಯ ಅವರನ್ನು ಹಿಂದಿರುಗಿಸಿಕೊಟ್ಟಂತೆ ಆಗದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್ಸಿಬಿ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ; ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆ” ಎಂದಿದೆ.
“ಇದು ಆರ್ಸಿಬಿ ಕೇರ್ಸ್ನ ಆರಂಭವೂ ಹೌದು. ಅವರ ನೆನಪನ್ನು ಗೌರವಿಸುವ ಮೂಲಕ ಶುರುವಾದ ಈ ಪ್ರಯತ್ನ, ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆ ಪ್ರತಿಬಿಂಬಿಸುವ ದೀರ್ಘಕಾಲದ ಬದ್ಧತೆಯಾಗಿರುತ್ತದೆ. ಆರ್ಸಿಬಿ ಕೇರ್ಸ್ ಕುರಿತು ಇನ್ನಷ್ಟು ವಿವರಗಳು ಶೀಘ್ರದಲ್ಲೇ ಬರಲಿದೆ” ಎಂದು ತಿಳಿಸಿದೆ.





