ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಮೊದಲ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮದಲ್ಲಿ ಜೂನ್ 4 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಗೌರವಾರ್ಥವಾಗಿ ಬೆಂಗಳೂರಿನಲ್ಲಿ ಸ್ಮಾರಕವನ್ನು ಸ್ಥಾಪಿಸುವುದಾಗಿ ಸೋಮವಾರ ಘೋಷಿಸಿದೆ.
ಆರ್ಸಿಬಿ ತನ್ನ “ಆರ್ಸಿಬಿ ಕೇರ್ಸ್” ಎಂಬ ಹೊಸ ಸಾಮಾಜಿಕ ಉಪಕ್ರಮದಡಿಯಲ್ಲಿ ಈ ಘೋಷಣೆ ಮಾಡಿದೆ. ಸ್ಮಾರಕವು ಮೃತರ “ಹೆಸರು, ಕಥೆ ಮತ್ತು ಉತ್ಸಾಹ”ವನ್ನು ಶಾಶ್ವತವಾಗಿ ಕಾಪಾಡಲಿದೆ ಎಂದು ತಿಳಿಸಿದೆ. ಆದರೆ, ಸ್ಮಾರಕದ ಸ್ಥಳವನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಘಟನೆಯ ನಂತರ ಆರ್ಸಿಬಿಯ ಮೌನಕ್ಕೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ತಂಡವು ಆರು ಅಂಶಗಳ ಕಾರ್ಯಯೋಜನೆಯನ್ನು ಘೋಷಿಸಿದೆ. ಪ್ರತಿ ದುರಂತಗೊಂಡ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ಒದಗಿಸುವ ಭರವಸೆಯನ್ನೂ ನೀಡಿದೆ, ಆದರೆ ಔಪಚಾರಿಕವಾಗಿ ಕ್ಷಮೆಯಾಚನೆ ಇನ್ನೂ ಮಾಡಿಲ್ಲ.
ಸ್ಮಾರಕದ ಹೊರತಾಗಿ, ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ಉದ್ಯೋಗಾವಕಾಶ, ಸ್ಥಳೀಯ ಕ್ರೀಡಾ ಪ್ರತಿಭೆಗಳ ಬೆಳವಣಿಗೆ ಹಾಗೂ ಭವಿಷ್ಯದ ಕ್ರೀಡಾಪಟುಗಳಿಗೆ ಬೆಂಬಲ ನೀಡುವುದಾಗಿ ಆರ್ಸಿಬಿ ತಿಳಿಸಿದೆ.
ಇದರ ಜೊತೆಗೆ, ಆರ್ಸಿಬಿ ಅಭಿಮಾನಿಗಳ ಸುರಕ್ಷತೆಗಾಗಿ ನೂತನ ನಿಯಮವನ್ನು ರೂಪಿಸಲಿದ್ದು, ಪ್ರತಿವರ್ಷ ತನ್ನ ಸಿಬ್ಬಂದಿಗೆ ಜನಸಂದಣಿ ನಿರ್ವಹಣೆ ಮತ್ತು ತುರ್ತು ಪ್ರತಿಕ್ರಿಯೆ ತರಬೇತಿಯನ್ನು ನೀಡಲಿದೆ.
ಇದನ್ನು ಓದಿದ್ದೀರಾ? ಆನ್ಲೈನ್ ಜೂಜಾಟ ಕಂಪನಿ ಡ್ರೀಮ್11ನೊಂದಿಗೆ ಸಂಬಂಧ ಕೊನೆಗೊಳಿಸಿದ ಬಿಸಿಸಿಐ
ಆರ್ಸಿಬಿಯ ಕಾರ್ಯಯೋಜನೆಯು ಶೀಘ್ರ, ಪಾರದರ್ಶಕ ಮತ್ತು ಸಹಾನುಭೂತಿಯಿಂದ ಕೂಡಿದ ಬೆಂಬಲವನ್ನು ಒದಗಿಸುವ ಭರವಸೆಯನ್ನು ಒಳಗೊಂಡಿದೆ. ಕ್ರೀಡಾಂಗಣದ ಅಧಿಕಾರಿಗಳು, ಕ್ರೀಡಾ ಸಂಸ್ಥೆಗಳು ಮತ್ತು ಲೀಗ್ ಪಾಲುದಾರರೊಂದಿಗೆ ಜನಸಂದಣಿಯ ಸುರಕ್ಷತೆಯನ್ನು ಬಲಪಡಿಸಲು ಆರ್ಸಿಬಿ ಕೆಲಸ ಮಾಡಲಿದೆ. ಜನಸಂದಣಿಯ ಸುರಕ್ಷತೆಯ ಕುರಿತು ಸ್ವತಂತ್ರ ಸಂಶೋಧನೆಯನ್ನು ಆರಂಭಿಸಿದ್ದು, ಕರ್ನಾಟಕದ ಗ್ರಾಮೀಣ ಭಾಗದಲ್ಲಿ, ವಿಶೇಷವಾಗಿ ಸಿದ್ದಿ ಸಮುದಾಯದೊಂದಿಗೆ ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಿದೆ. ಸಿದ್ದಿ ಸಮುದಾಯವು ಕರ್ನಾಟಕದಲ್ಲಿ ಅನುಸೂಚಿತ ಬುಡಕಟ್ಟು ಎಂದು ಗುರುತಿಸಲ್ಪಟ್ಟಿರುವ ಸಮುದಾಯವಾಗಿದೆ.





