2026ರ ಟಿ-20 ವಿಶ್ವಕಪ್ಗಾಗಿ ಭಾರತ ತಂಡವನ್ನು ಬಿಸಿಸಿಐ ಶನಿವಾರ ಪ್ರಕಟಿಸಿದ್ದು, ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದೇ ವೇಳೆ ದೇಶಿ ಕ್ರಿಕೆಟ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿರುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ತಂಡಕ್ಕೆ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ.
ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಆಲ್ ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ಜನವರಿ 21 ರಿಂದ 31ರವರೆಗೆ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಗೂ ಇದೇ ತಂಡ ಕಣಕ್ಕಿಳಿಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ತಿಳಿಸಿದ್ದಾರೆ.
ಗಿಲ್ ಆಟಕ್ಕೆ ಬ್ರೇಕ್:
ಟಿ-20 ಮಾದರಿಯಲ್ಲಿ ಒಮ್ಮೆ ಉಪನಾಯಕನಾಗಿದ್ದ ಶುಭಮನ್ ಗಿಲ್, ಇತ್ತೀಚಿನ ದಿನಗಳಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಈ ವರ್ಷ ಆಡಿದ 15 ಪಂದ್ಯಗಳಲ್ಲಿ ಕೇವಲ 291 ರನ್ (ಸರಾಸರಿ 24.25) ಗಳಿಸಿದ್ದು, ಒಂದೇ ಒಂದು ಅರ್ಧಶತಕ ದಾಖಲಿಸಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ (3 ಪಂದ್ಯ, 32 ರನ್) ವೈಫಲ್ಯ ಅನುಭವಿಸಿದ್ದು ಅವರಿಗೆ ಮುಳುವಾಯಿತು.
ಇದನ್ನು ಓದಿದ್ದೀರಾ? ‘ಟೀಂ ಇಂಡಿಯಾ’ ಅಧಿಕೃತವಾಗಿ ಭಾರತವನ್ನು ಪ್ರತಿನಿಧಿಸದ ಖಾಸಗಿ ತಂಡ; ಬಿಸಿಸಿಐಗೆ ಬೀಳುವುದೇ ಸರ್ಕಾರಿ ಮೂಗುದಾರ?
ಇಶಾನ್ ಕಿಶನ್ ಮಿಂಚು:
2023ರ ನವೆಂಬರ್ ನಂತರ ಟೀಂ ಇಂಡಿಯಾದಿಂದ ದೂರ ಉಳಿದಿದ್ದ ಇಶಾನ್ ಕಿಶನ್, ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಬ್ಬರಿಸಿದ್ದರು. 10 ಇನಿಂಗ್ಸ್ಗಳಲ್ಲಿ 517 ರನ್ ಸಿಡಿಸಿ ಟೂರ್ನಿಯ ಟಾಪ್ ಸ್ಕೋರರ್ ಎನಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಹರಿಯಾಣ ವಿರುದ್ಧ ಕೇವಲ 49 ಎಸೆತಗಳಲ್ಲಿ 101 ರನ್ ಚಚ್ಚಿ ಜಾರ್ಖಂಡ್ ತಂಡಕ್ಕೆ ಮೊದಲ ಬಾರಿಗೆ ಪ್ರಶಸ್ತಿ ತಂದುಕೊಟ್ಟಿದ್ದು ಅವರ ಆಯ್ಕೆಗೆ ಪ್ರಮುಖ ಕಾರಣವಾಯಿತು.
ವಿಶ್ವಕಪ್ ಅಭಿಯಾನ:
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು 3-1 ಅಂತರದಲ್ಲಿ ಗೆದ್ದಿರುವ ಭಾರತ, ನ್ಯೂಜಿಲೆಂಡ್ ಸರಣಿಯ ಮೂಲಕ ವಿಶ್ವಕಪ್ಗೆ ಅಂತಿಮ ಸಿದ್ಧತೆ ನಡೆಸಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಫೆ.7 ರಂದು ಮುಂಬೈನಲ್ಲಿ ಅಮೆರಿಕ ವಿರುದ್ಧ ಆಡಲಿದ್ದು, ಫೆ.14 ರಂದು ಕೊಲಂಬೊದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಭಾರತ ತಂಡ ಇಂತಿದೆ:
ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್.





