ಭಾರತ ತಂಡದ ನಾಯಕ ಶುಭ್ಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧ ಗುವಾಹಟಿಯಲ್ಲಿ ನಡೆಯುವ ಎರಡನೇ ಟೆಸ್ಟ್ಗೆ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ. ಶುಕ್ರವಾರ ಬಿಸಿಸಿಐ ಅಧಿಕೃತವಾಗಿ ಗಿಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದ್ದು, ಅವರು ಬೆಳಗ್ಗೆಯೇ ಮುಂಬೈಗೆ ತೆರಳಿ ತಜ್ಞ ವೈದ್ಯರ ಸಲಹೆ ಪಡೆಯಲು ಪ್ರಯಾಣಿಸಿದ್ದಾರೆ.
ಕತ್ತು ನೋವಿನ ಪರಿಣಾಮದಿಂದ ಅವರು ಕೆಲವು ದಿನಗಳಿಂದ ತರಬೇತಿ ಪಡೆಯಲು ಸಾಧ್ಯವಾಗಿರಲಿಲ್ಲ. ಗುರುವಾರ ತಂಡದ ಜೊತೆಗೆ ಅಭ್ಯಾಸ ಮಾಡದ ಗಿಲ್, ಶುಕ್ರವಾರ ಅಂತಿಮ ಫಿಟ್ನೆಸ್ ಪರೀಕ್ಷೆಗಿಳಿಯುವ ನಿರೀಕ್ಷೆಯಿತ್ತು. ಆದರೆ ವೈದ್ಯಕೀಯ ತಂಡವು ಅತಿಯಾದ ಅಪಾಯ ತೆಗೆದುಕೊಳ್ಳಬಾರದೆಂದು ಸಲಹೆ ನೀಡಿದ್ದು, ಇದರಿಂದಲೇ ಪಂದ್ಯದಿಂದ ಅವರನ್ನು ದೂರ ಇಡಲಾಗಿದೆ.
“ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ,” ಎಂದು ಬ್ಯಾಟಿಂಗ್ ಕೋಚ್ ಕೋಟಕ್ ಗುರುವಾರ ಹೇಳಿದ್ದರು. “ಆದರೆ ಮತ್ತೆ ಸಮಸ್ಯೆ ಆಗುವ ಸಾಧ್ಯತೆಯಿರುವುದರಿಂದ ಇನ್ನೊಂದು ಪಂದ್ಯ ವಿಶ್ರಾಂತಿ ನೀಡುವುದು ಉತ್ತಮ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ರಣಜಿ ಟ್ರೋಫಿ | ಚಂಡೀಗಢ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ; ಕ್ವಾರ್ಟರ್ ಫೈನಲ್ ಕನಸು ಜೀವಂತ
ತಂಡವು ಪ್ರಬಲವಾಗಿದ್ದು, ಯಾವುದೇ ಆಟಗಾರ ಬಂದು ಆಡಿದರೂ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಲಿದೆ. ಸೇರಿಕೊಳ್ಳುವ ಆಟಗಾರರು ಕೂಡ ಉತ್ತಮ ಆಟವಾಡುವ ನಿರೀಕ್ಷೆಯಿದೆ ಎಂದು ಬ್ಯಾಟಿಂಗ್ ಕೋಚ್ ಕೋಟಕ್ ತಿಳಿಸಿದ್ದಾರೆ.
ಗಿಲ್ ಗೈರು ಹಾಜರಾತಿಯಿಂದ ಈಗಾಗಲೇ 1–0ರಿಂದ ಹಿನ್ನಡೆಯಲ್ಲಿ ಇರುವ ಭಾರತದ ಮೇಲೆ ಇನ್ನಷ್ಟು ಒತ್ತಡ ತಂದಿದೆ. ಕೊಲ್ಕತ್ತಾದಲ್ಲಿ 30 ರನ್ಗಳ ಅಂತರದಿಂದ ಸೋತ ನಂತರ, ಎರಡನೇ ಟೆಸ್ಟ್ನಲ್ಲಿ ಭಾರತ ತಂಡಕ್ಕೆ ಪರ್ಯಾಯ ಆಟಗಾರರ ಮೇಲೆ ಹೆಚ್ಚಿನ ನಂಬಿಕೆ ಇರಬೇಕಾಗಿದೆ.
ನಾಳೆ ನ.22 ರಂದು ನಡೆಯಲಿರುವ 2ನೇ ಟೆಸ್ಟ್ನಲ್ಲಿ ಗಿಲ್ ಬದಲಿಗೆ ಯಾರು ಸೇರಿಕೊಳ್ಳಲಿದ್ದಾರೆ ಎಂದು ನಿರ್ಧಾರವಾಗಲಿದೆ.





