ಟಿ20 ವಿಶ್ವಕಪ್ ವಿಜೇತ ಟೀಂ ಇಂಡಿಯಾ ಮಂಗಳವಾರ ಸಂಜೆ ಚಾರ್ಟರ್ ವಿಮಾನದಲ್ಲಿ ಭಾರತಕ್ಕೆ ಮರಳಲು ಸಜ್ಜಾಗುತ್ತಿರುವಂತೆ ಮತ್ತೊಂದು ಭೀಕರ ಚಂಡಮಾರುತದ ಎಚ್ಚರಿಕೆಯನ್ನು ಬಾರ್ಬಡೋಸ್ ಪ್ರಧಾನಿ ಮಿಯಾ ಮೊಟ್ಲಿ ನೀಡಿದ್ದಾರೆ. ಆದರೆ ಮುಂದಿನ ಆರರಿಂದ 12 ಗಂಟೆಗಳಲ್ಲಿ ವಿಮಾನ ನಿಲ್ದಾಣ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಶನಿವಾರ ನಡೆದ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳಿಂದ ಸೋಲಿಸಿದ ಟೀ ಇಂಡಿಯಾ ವಿಶ್ವಕಪ್ ಗೆದ್ದಿದೆ. ಅದಾದ ಬಳಿಕ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ, ಅದರ ಸಹಾಯಕ ಸಿಬ್ಬಂದಿ, ಕೆಲವು ಬಿಸಿಸಿಐ ಅಧಿಕಾರಿಗಳು ಮತ್ತು ಆಟಗಾರರ ಕುಟುಂಬಸ್ಥರು ಕಳೆದ ಎರಡು ದಿನಗಳಿಂದ ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್ನಲ್ಲಿ ಸಿಲುಕಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಚಾರ್ಟರ್ ವಿಮಾನ ಸಂಜೆ 6 ಗಂಟೆಗೆ (ಸ್ಥಳೀಯ ಕಾಲಮಾನ) ಬ್ರಿಡ್ಜ್ಟೌನ್ನಿಂದ ಹೊರಟು ಬುಧವಾರ ಸಂಜೆ 7:45ಕ್ಕೆ ದೆಹಲಿಗೆ ಬಂದಿಳಿಯುವ ಸಾಧ್ಯತೆಯಿದೆ. ಅದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಆಟಗಾರರನ್ನು ಸನ್ಮಾನಿಸುವ ನಿರೀಕ್ಷೆಯಿದೆ. ಆದರೆ ಚಂಡಮಾರುತದ ಕಾರಣ ಈ ವೇಳಾಪಟ್ಟಿ ಅಂತಿಮವಾಗಿಲ್ಲ.
ಇದನ್ನು ಓದಿದ್ದೀರಾ? ಬಾರ್ಬಡೋಸ್ನಲ್ಲಿ ಚಂಡ ಮಾರುತ: ವೆಸ್ಟ್ ಇಂಡೀಸ್ನಲ್ಲಿ ಉಳಿದ ಟೀಂ ಇಂಡಿಯಾ
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಬಾರ್ಬಡೋಸ್ ಪ್ರಧಾನಿ ಮಿಯಾ ಮೊಟ್ಲಿ, ” ನಾನು ವಿಮಾನ ನಿಲ್ದಾಣದ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಅವರು ಈಗ ತಮ್ಮ ಕೊನೆಯ ತಪಾಸಣೆಗಳನ್ನು ಮಾಡುತ್ತಿದ್ದಾರೆ. ನಾವು ತುರ್ತು ವಿಷಯವಾಗಿ ಸಾಮಾನ್ಯ ಕಾರ್ಯಾಚರಣೆಯನ್ನು ಪುನರಾರಂಭಿಸಲು ಬಯಸುತ್ತೇವೆ” ಎಂದು ಹೇಳಿದರು.
“ಕಳೆದ ರಾತ್ರಿ ತಡವಾಗಿ ಅಥವಾ ಇಂದು ಅಥವಾ ನಾಳೆ ಬೆಳಿಗ್ಗೆ ಇನ್ನೂ ಹಲವಾರು ಜನರು ಹೊರಡಬೇಕಾಗಿತ್ತು. ತಮ್ಮ ತಮ್ಮ ದೇಶಕ್ಕೆ ಪ್ರಯಾಣಿಸಲಿರುವವರಿಗೆ ಅನುಕೂಲ ಮಾಡಿಕೊಡಲು ನಾವು ಬಯಸುತ್ತೇವೆ. ಮುಂದಿನ ಆರರಿಂದ 12 ಗಂಟೆಗಳ ಒಳಗೆ ವಿಮಾನ ನಿಲ್ದಾಣವು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ” ಎಂದು ತಿಳಿಸಿದರು.
ಭೀಕರ ಚಂಡಮಾರುತವು ಸೋಮವಾರ ಬಾರ್ಬಡೋಸ್ ಮತ್ತು ಹತ್ತಿರದ ದ್ವೀಪಗಳನ್ನು ಅಪ್ಪಳಿಸಿದೆ. ಸುಮಾರು ಮೂರು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ದೇಶವು ಭಾನುವಾರ ಸಂಜೆಯಿಂದ ಲಾಕ್ಡೌನ್ ಆಗಿದೆ.
#WATCH | Barbados: Electricity and water supply affected as hurricane hits the country with strong winds and rain.
Team India and media from India stuck in Barbados as all flights cancelled because of the curfew. pic.twitter.com/NswPxkaWig
— ANI (@ANI) July 2, 2024





