ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಧ್ಯಕ್ಷ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಮಾಜಿ ಕ್ರಿಕೆಟಿಗ ಬಿ ಕೆ ವೆಂಕಟೇಶ್ ಪ್ರಸಾದ್ ಗೆಲುವು ಸಾಧಿಸಿದ್ದಾರೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಒಟ್ಟು 16 ಸ್ಥಾನಗಳಿಗೆ ಡಿಸೆಂಬರ್ 07ರಂದು ಬೆಳಗ್ಗೆಯಿಂದ ಸಂಜೆವರೆಗೆ ಮತದಾನ ನಡೆದಿದ್ದು, ಇದೀಗ ಮತದಾನ ಎಣಿಕೆಯಲ್ಲಿ ವೆಂಕಟೇಶ್ ಪ್ರಸಾದ್ 191 ಮತಗಳ ಅಂತರದಿಂದ ಗೆದ್ದಿದ್ದಾರೆ. ಇದರೊಂದಿಗೆ ವೆಂಕಟೇಶ್ ಪ್ರಸಾದ್ 12 ವರ್ಷಗಳ ಬಳಿಕ ಮತ್ತೆ ಅಧ್ಯಕ್ಷರಾಗಿ ಕೆಎಸ್ಸಿಎಗೆ ವಾಪಸ್ಸಾಗಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 1,315 ಮತಗಳ ಚಲಾವಣೆ ಆಗಿದ್ದವು. ಕೆಎಸ್ಸಿಎ ಚುಕ್ಕಾಣಿ ಹಿಡಿಯಲು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹಾಗೂ ಕೆ ಎನ್ ಶಾಂತಕುಮಾರ್ ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಮಾಜಿ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಹಾಗೂ ಅನಿಲ್ ಕುಂಬ್ಳೆ ಬಣದ ವೆಂಕಟೇಶ್ ಪ್ರಸಾದ್ಗೆ ಒಟ್ಟು 749 ಮತಗಳು ಬಂದಿದ್ದರೆ, ಬ್ರಿಜೇಶ್ ಪಾಟೀಲ್ ಬಣದ ಕೆ ಎನ್ ಶಾಂತಕುಮಾರ್ ಅವರಿಗೆ 558 ಮತಗಳು ಲಭವಿಸಿವೆ.
ಇನ್ನು ವೆಂಕಟೇಶ್ ಪ್ರಸಾದ್ ಬಣದಿಂದ ಸುಜಿತ್ ಸೋಮಸುಂದರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಮಧುಕರ್ ಅವರು ಖಜಾಂಚಿಯಾಗಿ ಆಯ್ಕೆಯಾಗಿದರು. ಇನ್ನು ಕೆಎಸ್ಸಿಎ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ ಗೆಲುವು ಸಾಧಿಸಿದ್ದಾರೆ. ಈ ಬಾರಿ ಒಟ್ಟು 1315 ಮತಗಳ ಚಲಾವಣೆಯಾಗಿವೆ. 2013 ರಲ್ಲಿ 1351 ಮತಗಳ ಚಲಾವಣೆಗೊಂಡಿದ್ದವು. ಕೆಎಸ್ಸಿಎ ಇತಿಹಾಸದಲ್ಲಿ 2013ರಲ್ಲೇ ಅತಿ ಹೆಚ್ಚು ಮತದಾನವಾಗಿತ್ತು.
ಇದನ್ನು ಓದಿದ್ದೀರಾ? ಇಮ್ರಾನ್ ಖಾನ್ | ಮೈದಾನದ ‘ಕಪ್ತಾನ’ನಿಂದ ಜೈಲಿನ ಕೈದಿಯವರೆಗೆ
ಪರಾಜಿತ ಅಥ್ಯರ್ಥಿ ಶಾಂತಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ವೆಂಕಟೇಶ್ ಪ್ರಸಾದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಶಾಂತಕುಮಾರ್ ಅವರು ಕೋರ್ಟ್ ಮೊರೆ ಹೋಗಿದ್ದು, ಶಾಂತಕುಮಾರ್ ಅವರ ನಾಮಪತ್ರ ಸಿಂಧುಗೊಳಿಸಿ ಚುನಾವಣೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿತ್ತು.
ಉಪಾಧ್ಯಕ್ಷ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಸುಜೀತ್ ಸೋಮಸುಂದರ್ (719) ಅವರು ವಿನೋದ್ ಶಿವಪ್ಪ (588) ಎದುರು ಮೇಲುಗೈ ಸಾಧಿಸಿದರು. ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ್ ಮೆನನ್ (675) ಅವರು ಇ.ಎಸ್ . ಜಯರಾಮ್ (632) ವಿರುದ್ಧ ಗೆದ್ದರು. ಬಿ.ಎನ್. ಮಧುಕರ್ (736) ಅವರು ಎಂ.ಎಸ್. ವಿನಯ್ (571) ಎದುರು ಜಯಿಸಿ, ಖಜಾಂಚಿ ಸ್ಥಾನ ಪಡೆದರು.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬ್ರಿಜೇಶ್ ಬಣದ ಬಿ.ಕೆ. ರವಿ (669) ಅವರು ಎ.ವಿ. ಶಶಿಧರ್ (638) ಎದುರು ಜಯಿಸಿದರು.
ಆಡಳಿತ ಸಮಿತಿಯ ಸದಸ್ಯರಾಗಿ ವಿ.ಎಂ. ಮಂಜುನಾಥ್ , ಶೈಲೇಶ್ ಪೋಳ್ (ಇಬ್ಬರೂ ಆಜೀವ ಸದಸ್ಯರ ವಿಭಾಗ), ಕಲ್ಪನಾ ವೆಂಕಟಾಚಾರ್, ಆಶಿಶ್ ಅಮರಲಾಲ್, ಅವಿನಾಶ್ ವೈದ್ಯ (ಬೆಂಗಳೂರು ವಲಯ), ಶ್ರೀನಿವಾಸ್ ಪ್ರಸಾದ್ (ಮೈಸೂರು), ಡಿ.ಎಸ್. ಅರುಣ್ (ಶಿವಮೊಗ್ಗ), ಸಿ.ಆರ್. ಹರೀಶ್ (ತುಮಕೂರು), ವೀರಣ್ಣ ಸವಡಿ (ಧಾರವಾಡ), ಕುಶಾಲ್ ಪಾಟೀಲ ಗಡಗಿ (ರಾಯಚೂರು) ಮತ್ತು ಶೇಖರ್ ಶೆಟ್ಟಿ (ಮಂಗಳೂರು–ಅವಿರೋಧ) ಅವರು ಆಯ್ಕೆಯಾದರು.
‘ಸಂಸ್ಥೆಯ ಸದಸ್ಯರು ನಮಗೆ ಅವಕಾಶ ಕೊಟ್ಟಿದ್ದಾರೆ. ಇದು ಕ್ರಿಕೆಟ್ಗೆ ಒಲಿದ ಗೆಲುವು. ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಮಾಡಿರುವ ವಾಗ್ದಾನಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ’ ಎಂದು ಫಲಿತಾಂಶ ಪ್ರಕಟವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟೇಶ್ ಪ್ರಸಾದ್ ಹೇಳಿದರು.
ನಾಡಿನ ದಿಗ್ಗಜ ಕ್ರಿಕೆಟಿಗರಾದ ಜಿ.ಆರ್. ವಿಶ್ವನಾಥ್, ಬಿ.ಎಸ್. ಚಂದ್ರಶೇಖರ್, ರೋಜರ್ ಬಿನ್ನಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಹಲವರು ಮತ ಚಲಾಯಿಸಿದರು.
12 ವರ್ಷಗಳ ಬಳಿಕ ಮತ್ತೆ ಕೆಎಸ್ಸಿಎಗೆ
ವೆಂಕಟೇಶ್ ಈ ಹಿಂದೆ 2010 ರಿಂದ 2013ರವರೆಗೆ ಕೆಎಸ್ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಗ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದರು. ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು. ಇದೀಗ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ 12 ವರ್ಷಗಳ ಬಳಿಕ ಮತ್ತೆ ಕೆಎಸ್ಸಿಎಗೆ ವಾಪಸ್ಸಾಗಿದ್ದಾರೆ.
1994ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ವೆಂಕಟೇಶ್ ಪ್ರಸಾದ್, 33 ಟೆಸ್ಟ್ ಪಂದ್ಯದಿಂದ 96 ವಿಕೆಟ್ ಕಬಳಿಸಿದ್ದರೆ, 161 ಏಕದಿನ ಪಂದ್ಯದಿಂದ 196 ವಿಕೆಟ್ ಉರುಳಿಸಿದ್ದಾರೆ.





