ಐಪಿಎಲ್ 2026ರ ಆವೃತ್ತಿಯು ಮಾರ್ಚ್ 28 ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಲಿದೆ.
ಪಂದ್ಯಾವಳಿಗೂ ಮುನ್ನವೇ ಮಾಜಿ ನಾಯಕ ವಿರಾಟ್ ಕೊಹ್ಲಿ ತರಬೇತಿ ಆರಂಭಿಸಿದ್ದು, ಅವರು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿವೆ. ಸತತ ಮೂರು ಆವೃತ್ತಿಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿರುವ ಕೊಹ್ಲಿ, ಈ ಬಾರಿಯೂ ಆರ್ಸಿಬಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ನಡುವೆ ‘ಎಕ್ಸ್’ ಖಾತೆಯಲ್ಲಿ ಫ್ರಾಂಚೈಸಿ ಹಂಚಿಕೊಂಡಿರುವ ವಿಡಿಯೊವೊಂದರಲ್ಲಿ ತಂಡವನ್ನು ಉದ್ದೇಶಿಸಿ ಮಾತನಾಡಿರುವ ಕೊಹ್ಲಿ, ಶ್ರದ್ಧೆ ಮತ್ತು ಏಕಾಗ್ರತೆಯನ್ನು ಕಾಯ್ದುಕೊಳ್ಳುವಂತೆ ಆಟಗಾರರನ್ನು ಒತ್ತಾಯಿಸಿದ್ದಾರೆ.
”ಕಳೆದ ವರ್ಷ ನಾವು ಸಾಧಿಸಿದ್ದನ್ನು ಪಡೆಯಲು ಹಿಂದಿನ ಎರಡು-ಮೂರು ಸೀಸನ್ಗಳಲ್ಲಿ ಕಠಿಣ ಶ್ರಮ ಪಟ್ಟಿದ್ದೇವೆ. ಇತರ ತಂಡಗಳು ನಮ್ಮ ವಿರುದ್ಧ ಪ್ರಬಲವಾಗಿ ಹೋರಾಡುವುದರಿಂದ ಮುಂದಿನ ದಿನಗಳಲ್ಲಿ ಸವಾಲು ಇನ್ನಷ್ಟು ಕಠಿಣವಾಗಲಿದೆ. ನಾವು ಈ ದಿನಗಳನ್ನು ವ್ಯರ್ಥ ಮಾಡುವುದಿಲ್ಲ. ಆದ್ದರಿಂದ, ಈಗಲೇ ಸಜ್ಜಾಗಿ. ನಾವು ಭಾಗವಹಿಸುವ ಪ್ರತಿ ಅಭ್ಯಾಸದ ಅವಧಿಯ ಒಂದು ನಿಮಿಷವನ್ನೂ ವ್ಯರ್ಥ ಮಾಡಬಾರದು. ಈ ಎರಡೂವರೆ ತಿಂಗಳು ನಾವು ನಮ್ಮ ಶೇಕಡಾ 120ರಷ್ಟು ಶ್ರಮವನ್ನು ಹಾಕಬೇಕು. ಪ್ರಶಸ್ತಿ ಉಳಿಸಿಕೊಳ್ಳಲು ಎಲ್ಲರೂ ಉತ್ಸುಕರಾಗಿರುವುದು ಪ್ರತಿಯೊಬ್ಬರ ಮುಖದಲ್ಲೂ ಕಾಣುತ್ತಿದೆ” ಎಂದು ಕೊಹ್ಲಿ ಹುರಿದುಂಬಿಸಿದ್ದಾರೆ.
ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ
2025ರ ಫೈನಲ್ನಲ್ಲಿ ಅಹಮದಾಬಾದ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ರೋಚಕವಾಗಿ ಮಣಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಆರ್ಸಿಬಿ, ಈ ಬಾರಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ.
ಹರಾಜಿನಲ್ಲಿ ಆಯ್ಕೆಯಾದ ಆಟಗಾರರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಮುಖ್ಯ ಕೋಚ್ ಆಂಡಿ ಫ್ಲವರ್, “ನಮ್ಮ ತಂಡವನ್ನು ನಾವು ಇನ್ನಷ್ಟು ಬಲಿಷ್ಠಗೊಳಿಸಿದ್ದೇವೆ. ತಂಡಕ್ಕೆ ಕೆಲವು ಅತ್ಯುತ್ತಮ ಆಟಗಾರರು ಸೇರ್ಪಡೆಯಾಗಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ನಾಯಕ ರಜತ್ ಪಾಟೀದಾರ್ ಅವರಂತಹ ಹಿರಿಯ ಆಟಗಾರರೊಂದಿಗೆ ಹೊಸ ಆಟಗಾರರನ್ನು ಆರ್ಸಿಬಿ ಶೈಲಿಗೆ ಒಗ್ಗಿಸುವುದು ಹೊಸ ತಂಡವನ್ನು ಕಟ್ಟುವ ಒಂದು ರೋಮಾಂಚಕ ಭಾಗವಾಗಿದೆ” ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ನಲ್ಲಿ ಮತ್ತೊಂದು ಮಹತ್ವದ ವೈಯಕ್ತಿಕ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. ಇದುವರೆಗೆ ಆಡಿರುವ 267 ಐಪಿಎಲ್ ಪಂದ್ಯಗಳಲ್ಲಿ 8 ಶತಕ ಹಾಗೂ 63 ಅರ್ಧಶತಕಗಳೊಂದಿಗೆ 8,661 ರನ್ ಗಳಿಸಿರುವ ಅವರು, ಐಪಿಎಲ್ ಇತಿಹಾಸದಲ್ಲೇ 9,000 ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಸುವರ್ಣಾವಕಾಶ ಹೊಂದಿದ್ದಾರೆ.





