ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಕೆಎಫ್ಸಿಸಿ) ಶನಿವಾರ(ಜ.31) ನಡೆದ ಚುನಾವಣೆಯಲ್ಲಿ ಹಿರಿಯ ನಟಿ ಜಯಮಾಲಾ ಆಯ್ಕೆಯಾಗಿದ್ದಾರೆ.
ಬೆಂಗಳೂರು ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣೆ ನಡೆದಿತ್ತು. ಈ ಭಾರಿಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರ ವಲಯ ಮೀಸಲಾಗಿತ್ತು. ಅದರಂತೆ ಚುನಾವಣೆಯಲ್ಲಿ ಹಿರಿಯ ನಟಿ ಜಯಮಾಲಾ ಹಾಗೂ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮಾ.ಹರೀಶ್ ಕಣದಲ್ಲಿದ್ದರು. ಈ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟು, ಒಟ್ಟು ಚಲಾವಣೆಗೊಂಡ 846 ಮತಗಳಲ್ಲಿ ಜಯಮಾಲಾ ಅವರು 512 ಮತಗಳನ್ನು ಪಡೆದುಕೊಂಡು ಜಯಸಾಧಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ನಟ ಸುಂದರ್ರಾಜ್, ವಿತರಕ ವಲಯದಿಂದ ನಿರ್ಮಾಪಕ ಕೆ.ಮಂಜು ಹಾಗೂ ಪ್ರದರ್ಶಕರ ವಲಯದಿಂದ ಕಿಶೋರ್ ಕುಮಾರ್ ಎಂ.ಎನ್. ಆಯ್ಕೆಯಾಗಿದ್ದಾರೆ.
ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ಎ.ಗಣೇಶ್, ಪ್ರದರ್ಶಕ ವಲಯದಿಂದ ಅಶೋಕ್ ಕೆ.ಸಿ, ವಿತರಕ ವಲಯದಿಂದ ರಮೇಶ್ ಬಾಬು ಎಂ.ಆರ್. ಚುನಾಯಿತರಾದರು.
ಖಜಾಂಚಿಯಾಗಿ ಜಯಸಿಂಹ ಮುಸುರಿ ಬಿ.ಕೆ. ಆಯ್ಕೆಯಾದರು. ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿಗೆ ಮೂರು ವಲಯದಿಂದ 48 ಮಂದಿ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿದೆ.
1970ರ ದಶಕದಿಂದಲೂ ಜಯಮಾಲಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ 2008 ರಿಂದ 2010 ರ ವರೆಗೆ ಜಯಮಾಲಾ ಕೆಎಫ್ಸಿಸಿ ಅಧ್ಯಕ್ಷೆ ಆಗಿದ್ದರು. ಇದೀಗ 2ನೇ ಬಾರಿಗೆ ಜಯಮಾಲಾ ಅಧ್ಯಕ್ಷೆ ಆಗಿ ಆಯ್ಕೆಯಾಗಿದ್ದಾರೆ.





