“ಕೇಂದ್ರ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಹೊಸದಾಗಿ ತಂದಿರುವ 4 ಕಾರ್ಮಿಕ ಸಂಹಿತೆಗಳನ್ನು, ಬೀಜ ಮಸೂದೆ, ವಿದ್ಯುಚ್ಛಕ್ತಿ ಮಸೂದೆಯನ್ನು ವಾಪಸ್ ಹಾಗೂ ಮನರೇಗಾವನ್ನು ಮರು ಸ್ಥಾಪಿಸಬೇಕು ಎಂದು ರೈತಸಂಘದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ಒತ್ತಾಯಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಫೆ.12ರಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ – ಜೆಸಿಟಿಯು ಕರ್ನಾಟಕ ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಸ್ವಯಂ ಪ್ರೇರಿತ ʼಅಖಿಲ ಭಾರತ ಸಾರ್ವತ್ರಿಕ ಮುಷ್ಕರʼಕ್ಕೆ ಕರೆ ನೀಡಲಾಯಿತು.
“ಜಾಗತೀಕರಣದ ನಂತರ ಸರ್ಕಾರಗಳು ಬಂಡವಾಳ ಶಾಹಿಗಳ ಪರವಾಗಿ ಕಾನೂನುಗಳನ್ನು ತರುತ್ತಿದ್ದಾರೆ. ಈಗ ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ತಂದಿದೆ. ಇದನ್ನು ವಾಪಸ್ಸು ಪಡೆಯಬೇಕೆಂದು” ಆಗ್ರಹಿಸಿದರು.
ಇದನ್ನು ಓದಿ : ಹಾಸನ | ಫೆ. 12ಕ್ಕೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ರಸ್ತೆ ತಡೆ ಮತ್ತು ಪಿಕೆಟಿಂಗ್
ಕಾರ್ಮಿಕ ಮುಂಖಡರಾದ ಎಸ್.ವರಲಕ್ಷ್ಮಿ ಮಾತನಾಡಿ “ರಾಜ್ಯ ಸರ್ಕಾರ ಕಾರ್ಮಿಕ ಕೋಡ್ಗಳಿಗೆ ನಿಯಮಾವಳಿ ರಚಿಸವಾರದೆಂದೂ ಒತ್ತಾಯಿಸಿದರೂ, ಕಾರ್ಮಿಕ ಸಚಿವರು ಹಾಗೂ ಮುಖ್ಯಮಂತ್ರಿಗಳು 4 ಕಾರ್ಮಿಕ ಕೋಡ್ಗಳಿಗೆ ಗೆಜೆಟ್ ನೋಟೀಫಿಕೇಷನ್ ತರಲು ಹೊರಟಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಬಂಡವಾಳಿಗರ ಹಿತವನ್ನು ಕಾಯುತ್ತಿವೆ” ಎಂದು ಆರೋಪಿಸಿದರು.
ಸಂಯುಕ್ತ ಹೋರಾಟ ಕರ್ನಾಟಕದ ಪ್ರಮುಖರಾದ ನೂರ್ ಶ್ರೀಧರ್ ಮಾತನಾಡಿ “ದೇಶದಲ್ಲಿ ಕಾರ್ಪೊರೇಟ್ ಬಾಂಬಿಗ್ ನಡೆಯುತ್ತಿದೆ. ರಾಜ್ಯದ ಮೂರು ಪಕ್ಷಗಳು ಬಡವರ ವಿರೋಧಿ ಕೆಲಸಗಳನ್ನು ಮಾಡುತ್ತಿವೆ. ಜೆಡಿಎಸ್ ಈಗಾಗಲೇ ತಮ್ಮನ್ನು ತಾವು ಮಾರಿಕೊಂಡಿದೆ. 4 ಕಾರ್ಮಿಕ ಕೋಡ್ಗಳ ಬಗ್ಗೆ ಮೌನವಹಿಸಿರುವ ಕಾಂಗ್ರೆಸ್, ಕೇವಲ ನರೇಗಾ ವಿಚಾರವನ್ನು ಮಾತ್ರ ಚರ್ಚೆ ನಡೆಸುತ್ತಿದೆ” ಎಂದು ಆರೋಪಿಸಿದರು.
“ಕಾರ್ಮಿಕ, ರೈತ, ದಲಿತ, ವಿದ್ಯಾರ್ಥಿ, ಯುವಜನ ಹಾಗೂ ಕೂಲಿಕಾರ್ಮಿಕರೆಲ್ಲರೂ ಒಗ್ಗೂಡಿ ಬೃಹತ್ ಮಟ್ಟದ ಬಂದ್ ನಡೆಸಲಾಗುತ್ತದೆ. ಅಂದು ದೇಶದಲ್ಲಿರುವ ಎಲ್ಲಾ ಕೈಗಾರಿಕೆಗಳು ಕೆಲಸ ನಿಲ್ಲಿಸುತ್ತವೆ. ಜೊತೆಗೆ ಸಂಘಟಿತ ಹಾಗೂ ಅಸಂಘಟಿತ ನೌಕರರೆಲ್ಲರೂ ಪ್ರತಿಭಟನೆಯನ್ನು ಪಾಲ್ಗೊಳ್ಳುತ್ತಾರೆ. ಆಳುವ ಸರ್ಕಾರಗಳಿಗೆ ಬೀಸಿ ಮುಟ್ಟಿಸದೆ ಹೋದರೆ ಎಚ್ಚರಗೊಳ್ಳುವುದಿಲ್ಲ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ಕೆ ವಿ ಭಟ್, ಟಿ. ಯಶವಂತ್, ಚಂದ್ರಪ್ಪ ಹೊಸಕೆರೆ, ಅಪ್ಪಣ್ಣ, ಕಾಳಪ್ಪ, ಗಂಗಣ್ಣ, ವೀರಸಂಗಯ್ಯ, ಛಾಯಾ, ಜಿ. ಆರ್. ಶಿವಶಂಕರ್ ಭಾಗವಹಿಸಿದ್ದರು.





