ರಾಜ್ಯ ರಾಜಧಾನಿ ಬೆಂಗಳೂರಿನ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಮೇ 23ರಿಂದ ಜೂನ್ 9ರವರೆಗೆ ಮಾವು ಮತ್ತು ಹಲಸಿನ ಮೇಳ ನಡೆದಿದ್ದು, ಬರೋಬ್ಬರಿ 500 ಟನ್ ಮಾವುಗಳು ಮಾರಾಟವಾಗಿದೆ.
“17 ದಿನಗಳ ಕಾಲ ನಡೆದ ಈ ಮಾವಿನ ಮೇಳದಲ್ಲಿ ರಾಜ್ಯದ 100ಕ್ಕೂ ಹೆಚ್ಚು ರೈತರು 50ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಿದ್ದರು. ಈ ಬಾರಿ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾರಾಂತ್ಯದಲ್ಲಿ ಈ ಬಾರಿ ಹೆಚ್ಚು ಮಾವು ಮಾರಾಟವಾಗಿದೆ” ಎಂದು ಮೇಳದ ಆಯೋಜಕರಾದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜು ತಿಳಿಸಿದರು.
“ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ಬಾರಿಯ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮೇಳದಲ್ಲಿ 13 ರಿಂದ 14 ತಳಿಯ ಮಾವು ಮಾರಾಟವಾಗಿದೆ. ಮಾವು ಮಾರಾಟವಾದ ಹಿನ್ನೆಲೆ, ರೈತರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಕೂಡ ಮೇಳದಲ್ಲಿ ಇತ್ತು” ಎಂದು ಹೇಳಿದರು.
ಈ ವರ್ಷದ ಮೇಳದಲ್ಲಿ ‘ಕರಿ ಇಶಾದ್’ ಮಾವಿನ ತಳಿ ಕೂಡ ಇತ್ತು. ಈ ಮಾವನ್ನು ಜನರು ಹೆಚ್ಚಾಗಿ ಖರೀದಿ ಮಾಡಿದ್ದಾರೆ. ಇದರಿಂದ ರೈತರು ಹೆಚ್ಚು ಸಂತಸ ಪಟ್ಟಿದ್ದಾರೆ. ಈ ಕರಿ ಇಶಾದ್ ತಳಿಯ ಮಾವಿಗೆ ಈ ಹಿಂದೆ ಹೆಚ್ಚಾಗಿ ಬೇಡಿಕೆ ಇರಲಿಲ್ಲ. ಇದೀಗ ಈ ತಳಿಗೆ ಬಾರಿ ಬೇಡಿಕೆ ಬಂದಿದೆ. ಮೇಳದ ವೇಳೆ ರೈತರು ಮೂರು ಬಾರಿ ತಮ್ಮ ದಾಸ್ತಾನು ತರಿಸಿದ್ದರು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ‘ಚಾಲಕ ರಹಿತ ರೈಲು’ ಸಂಚಾರಕ್ಕೆ ಶೀಘ್ರದಲ್ಲೇ ಸಿಗ್ನಲಿಂಗ್ ಟೆಸ್ಟ್
“ಮಾವಿನ ಮಾರುಕಟ್ಟೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿ ಮಾವು ಮಂಡಳಿಯು ತನ್ನ ಆನ್ಲೈನ್ ಮಾರಾಟ ವೇದಿಕೆಯಾದ ‘ಕರ್ ಸಿರಿ’ಗೆ ಗಮನಾರ್ಹವಾದ ಪ್ರಾಮುಖ್ಯತೆ ನೀಡಿದೆ. ಇಲ್ಲಿಯೂ ಕೂಡ ಅಧಿಕ ಪ್ರಮಾಣದಲ್ಲಿ ಮಾವು ಮಾರಾಟವಾಗಿದೆ. ಆನ್ಲೈನ್ ಮೂಲಕ ಗ್ರಾಹಕರು ಉತ್ತಮ ಗುಣಮಟ್ಟದ ಮಾವುಗಳನ್ನು ಖರೀದಿ ಮಾಡಿದ್ದಾರೆ. ಇಂಡಿಯಾ ಪೋಸ್ಟ್ ಮೂಲಕ ಮಾವುಗಳು ರೈತರಿಂದ ನೇರವಾಗಿ ಗ್ರಾಹಕರ ಕೈ ಸೇರಿದವು. ಆನ್ಲೈನ್ ವೇದಿಕೆ ಮುಖಾಂತರ ಕನಿಷ್ಠ 27 ರೈತರು ಕರಿ ಇಶಾದ್ ಸೇರಿದಂತೆ 13 ತಳಿಯ ಮಾವಿನ ಹಣ್ಣುಗಳನ್ನು ಮಾರಾಟ ಮಾಡಿದ್ದಾರೆ” ಎಂದರು.
“ಆನ್ಲೈನ್ ಪೋರ್ಟಲ್ನಲ್ಲಿ 4,514 ಬಾಕ್ಸ್ಗಳ (13.5 ಟನ್) ಮಾವಿನಹಣ್ಣುಗಳನ್ನು ಮಾರಾಟ ಮಾಡಿದ್ದೇವೆ. ಕರಿ ಇಶಾದ್ಗಾಗಿ 60–70 ಆರ್ಡರ್ಗಳನ್ನು ಸ್ವೀಕರಿಸಿದ್ದೇವೆ. ನಮ್ಮ ಪ್ಲಾಟ್ಫಾರ್ಮ್ಗಳ ಹೊರತಾಗಿ, ರೈತರು ನಾನಾ 14 ಪೋರ್ಟಲ್ಗಳ ಮೂಲಕವೂ ಮಾವು ಮಾರಾಟ ಮಾಡಿದ್ದಾರೆ” ಎಂದು ಹೇಳಿದರು.




