ರಾಜ್ಯ ರಾಜಧಾನಿ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಇತ್ತೀಚೆಗೆ 12 ವರ್ಷದ ಬಾಲಕ ತನ್ನ ಪೋಷಕರಿಗೆ ಮಾಹಿತಿ ನೀಡದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಮೂಲಕ ಪ್ರಯಾಣ ಮಾಡಿ ನಾಪತ್ತೆಯಾಗಿದ್ದನು. ಈತನನ್ನು ಹೈದರಾಬಾದ್ನಲ್ಲಿ ಪತ್ತೆಹಚ್ಚಿ ಬೆಂಗಳೂರಿಗೆ ಕರೆತರಲಾಗಿತ್ತು. ಇದೀಗ, ಎಚ್ಚೆತ್ತ ಬಿಎಂಟಿಸಿ ಅಧಿಕಾರಿಗಳು ಬಸ್ನಲ್ಲಿ ಸಂಚರಿಸುವ ಅಪ್ರಾಪ್ತರ ಮೇಲೆ ನಿಗಾ ಇಡಲು ಮುಂದಾಗಿದ್ದಾರೆ.
ಈ ಪ್ರಕರಣದ ನಂತರ ಬಿಎಂಟಿಸಿ ಬಸ್ಗಳಲ್ಲಿ ಅಪ್ರಾಪ್ತ ಮಕ್ಕಳು ಅನುಮಾನಾಸ್ಪದವಾಗಿ ಪ್ರಯಾಣಿಸುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಕಾರ್ಯಾಲಯವು ಬಿಎಂಟಿಸಿಗೆ ಸೂಚನೆ ನೀಡಿತ್ತು.
ಒಂಟಿಯಾಗಿ ಸಂಚರಿಸುವ ಅಪ್ರಾಪ್ತರ ಮೇಲೆ ನಿಗಾ ಇರಿಸಲು ಬಿಎಂಟಿಸಿ ಅಧಿಕಾರಿಗಳು ಮುಂದಾಗಿದ್ದಾರೆ. ಅನುಮಾನಾಸ್ಪದ ಓಡಾಟ ಕಂಡು ಬಂದರೆ ಮಕ್ಕಳ ಸಹಾಯವಾಣಿಗೆ ತಿಳಿಸುವಂತೆ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
“ತಮ್ಮ ಚಾಲಕ ಮತ್ತು ನಿರ್ವಾಹಕರಿಗೆ ಕೆಲವೊಂದು ಸೂಚನೆ ನೀಡಿದ್ದಾರೆ. ಅದರಂತೆ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸುವ ಅಪ್ರಾಪ್ತ ಮಕ್ಕಳ ಮೇಲೆ ನಿಗಾವಹಿಸಬೇಕು. ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳನ್ನ ಹೊರತು ಪಡಿಸಿ ಬಸ್ಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಒಬ್ಬಂಟಿಯಾಗಿ ಪ್ರಯಾಣಿಸುತ್ತಿರುವ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಿಸಬೇಕು” ಎಂದು ಹೇಳಿದ್ದಾರೆ.
“ಮಕ್ಕಳ ಹಾವ-ಭಾವದಲ್ಲಿ ಗೊಂದಲಗಳಿದ್ದಲ್ಲಿ ಅಥವಾ ಅನುಮಾನಾಸ್ಪದವಾಗಿ ಪ್ರಯಾಣಿಸುತ್ತಿರುವುದು ಕಂಡುಬಂದಲ್ಲಿ ಅಂತಹ ಮಕ್ಕಳನ್ನ ಗುರುತಿಸಿ ಅವರ ಬಳಿ ಮಾತನಾಡಿ ಪೋಷಕರ ಬಗ್ಗೆ ಮಾಹಿತಿಯನ್ನ ಪಡೆಯಬೇಕು. ಮಕ್ಕಳು ಗೊಂದಲದ ಉತ್ತರವನ್ನ ನೀಡಿದಲ್ಲಿ, ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಬೇಕು. ಹತ್ತಿರದ ಪೊಲೀಸ್ ಠಾಣೆಗೆ ಅಂತಹ ಮಕ್ಕಳ ಕರೆದೊಯ್ಯಬೇಕು” ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮತದಾನದ ಧ್ಯೇಯವಾಕ್ಯ | ‘ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’
ಇತ್ತೀಚೆಗೆ ವೈಟ್ಫೀಲ್ಡ್ನಲ್ಲಿ 12 ವರ್ಷದ ಬಾಲಕ ಪೋಷಕರಿಗೆ ತಿಳಿಸದೆ ಬಿಎಂಟಿಸಿ ಬಸ್ ಮೂಲಕ ಪ್ರಯಾಣಿಸಿ ನಾಪತ್ತೆಯಾಗಿದ್ದನು. ಈ ಕುರಿತಂತೆ ಬಾಲಕನ ಪೋಷಕರು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗೆ ಮಾಹಿತಿ ನೀಡಿದ್ದರು. ನಂತರ ಮುಖ್ಯಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳು ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಬಾಲಕ ಹೈದರಾಬಾದ್ನಲ್ಲಿ ಇರುವುದನ್ನು ಪತ್ತೆ ಮಾಡಿ ವಾಪಸ್ ಕರೆತಂದಿದ್ದರು. ಈ ಪ್ರಕರಣದ ನಂತರ ಬಿಎಂಟಿಸಿ ಬಸ್ಗಳಲ್ಲಿ ಅಪ್ರಾಪ್ತ ಮಕ್ಕಳು ಅನುಮಾನಾಸ್ಪದವಾಗಿ ಪ್ರಯಾಣಿಸುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಕಾರ್ಯಾಲಯವು ಬಿಎಂಟಿಸಿಗೆ ಸೂಚನೆ ನೀಡಿತ್ತು.




