ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲು ಗುರುವಾರ (ಮಾರ್ಚ್ 7) ಪ್ರಾಯೋಗಿಕ ಸಂಚಾರ ನಡೆಸಿದೆ. ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ರೈತರು ಚಲಿಸಿದೆ.
ಇತ್ತೀಚೆಗಷ್ಟೇ ಹಳದಿ ಮಾರ್ಗದಲ್ಲಿ ಟ್ರ್ಯಾಕ್ ಜೋಡನೆಯಾಗಿದೆ. ಹಳದಿ ಮಾರ್ಗದಲ್ಲಿ ಲೋಕೋ ಪೈಲಟ್ ಇಲ್ಲದ ಮೆಟ್ರೋ ರೈಲು ಬೊಮ್ಮಸಂದ್ರ ಹಾಗೂ ಬೊಮ್ಮನಹಳ್ಳಿ ನಡುವೆ ಯಶಸ್ವಿಯಾಗಿ ಟ್ರಯಲ್ ರನ್ ನಡೆಸಿದೆ. ಮುಂದಿನ ದಿನಗಳಲ್ಲಿ ರೈಲು ಸಂಚಾರ ಪರೀಕ್ಷೆ ಕೂಡ ನಡೆಯಲಿದೆ.
ಗುರುವಾರ, ಹೆಬ್ಬಗೋಡಿ ಡಿಪೋ ಐಬಿಎಲ್- 1ರಿಂದ ಮೊದಲ ಹಂತದಲ್ಲಿ 6.55ಕ್ಕೆ ವೇಗದಿಂದ ಆರಂಭಿಸಿ 25 ಕಿ.ಮೀ ಸ್ಪೀಡ್ವರೆಗೆ ಚಾಲಕ ರಹಿತ ಮೆಟ್ರೋದ ಟ್ರಯಲ್ ರನ್ ಮಾಡಲಾಗಿದೆ. ಅದರಂತೆ ಸಂಜೆ 7.14 ಕ್ಕೆ ಬೊಮ್ಮಸಂದ್ರ ನಿಲ್ದಾಣವನ್ನು ತಲುಪಿದೆ. ಬಿಎಂಆರ್ಸಿಎಲ್ ಇದೇ ರೀತಿ ಮೂರು ದಿನಗಳ ಕಾಲ ಚಾಲಕ ರಹಿತ ಮೆಟ್ರೋ ರೈಲಿನ ಟ್ರಯಲ್ ರನ್ ಮಾಡಲಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಒಟ್ಟು 37 ಪರೀಕ್ಷೆಗಳನ್ನು ಬಿಎಂಆರ್ಸಿಎಲ್ ಮಾಡಲಿದ್ದು, ಈ ಪರೀಕ್ಷೆ ಸಂಪೂರ್ಣ ಯಶಸ್ವಿಯಾದ ನಂತರ ಸಾರ್ವಜನಿಕರ ಪ್ರಯಾಣಕ್ಕೆ ಚಾಲಕ ರಹಿತ ಮೆಟ್ರೋ ರೈಲು ಲಭ್ಯವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ | ಎನ್ಐಎ ವಶಕ್ಕೆ ಶಂಕಿತ ಆರೋಪಿ
ಚೀನಾದ ಶಾಂಘೈ ಬಂದರಿನಿಂದ ಜನವರಿ 24ರಂದು ಸಮುದ್ರ ಮಾರ್ಗವಾಗಿ ಚಾಲಕ ರಹಿತ ರೈಲು ಬೋಗಿಗಳನ್ನು ಸಾಗಿಸಲಾಗಿತ್ತು. ಫೆ.6ರಂದು ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಫೆಬ್ರುವರಿ 14ರಂದು ಬೆಳಗ್ಗೆ 3.30ಕ್ಕೆ ಚೆನ್ನೈ ಬಂದರಿನಿಂದ ರಸ್ತೆ ಮಾರ್ಗದ ಮೂಲಕವಾಗಿ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಬಂದು ತಲುಪಿದೆ.
ಆರು ಬೋಗಿಗಳನ್ನು ಟ್ರೇಲರ್ಗಳ ಮೂಲಕ ಸಾಗಿಸಲಾಗಿದೆ. ಪ್ರತಿ ಕೋಚ್ 38.7 ಮೆಟ್ರಿಕ್ ಟನ್ ತೂಕವಿದೆ. ಈ ಚಾಲಕ ರಹಿತ ರೈಲು ಆರ್ವಿ ರಸ್ತೆ-ಬೊಮ್ಮಸಂದ್ರ ಲೈನ್ನಲ್ಲಿ ಸಂಚರಿಸಲಿದೆ. ಚೀನಾದ ಸಿಆರ್ಆರ್ಸಿ ನಾನ್ ಜಿಂಗ್ ಪುಜೆನ್ ಕಂ. ಲಿಮಿಟೆಡ್ನಿಂದ ಈ ರೈಲು ತಯಾರಾಗಿದೆ.
ನಮ್ಮ ಮೆಟ್ರೋದ ಫೇಸ್ 2 ಯೋಜನೆಯ ಕಾರಿಡಾರ್ 3ರ ಆರ್ವಿ ರಸ್ತೆ – ಬೊಮ್ಮಸಂದ್ರ ಮಾರ್ಗವಾಗಿ ಚಲಿಸಲಿದೆ. ಒಟ್ಟು 19.15 ಕಿಲೋಮೀಟರ್ ಉದ್ದದ ಈ ಹಳದಿ ಮಾರ್ಗದಲ್ಲಿ 6 ಬೋಗಿಗಳ ಚಾಲಕ ರಹಿತ ಮೆಟ್ರೋ ಸಂಚರಿಸಲಿದೆ. ಈ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ರೈಲು ನಿಲ್ದಾಣಗಳಿವೆ.
ಚಾಲಕ ಇಲ್ಲದಿದ್ದರೂ ಈಗಾಗಲೇ ಅಳವಡಿಸಲಾದ ಪ್ರೋಗ್ರಾಂ ಆಧಾರದ ಮೇಲೆ ಈ ರೈಲು ಸಂಚರಿಸಲಿದೆ. ರೈಲಿನ ಸಂಚಾರವನ್ನು ಕಂಟ್ರೋಲ್ ರೂಮ್ನಲ್ಲಿ ನಿಗಾ ವಹಿಸಲಾಗುತ್ತದೆ. ಚಾಲಕ ಇಲ್ಲದೇ ಈ ಮೆಟ್ರೋ ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸಲಿದೆ. 25 ಕೆವಿ ಸಾಮರ್ಥ್ಯದ ವಿದ್ಯುತ್ ಸಹಾಯದಿಂದ ಸಂಚರಿಸುತ್ತದೆ.

ರೈಲಿನಲ್ಲಿ ಟ್ಯಾಕ್ ಮಾನಿಟರಿಂಗ್ ವ್ಯವಸ್ಥೆಯಿದೆ. ಅಂದರೆ, ರೈಲು ಸಂಚರಿಸುವ ಪ್ರತಿ ಹಂತದಲ್ಲೂ ಟ್ರ್ಯಾಕ್ನ ಪ್ರತಿ ಹಂತವೂ ದಾಖಲಾಗುತ್ತದೆ. ಈ ವ್ಯವಸ್ಥೆ ಹೊಂದಿದ ಭಾರತದ ಮೊದಲ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸಣ್ಣ, ಸೂಕ್ಷ್ಮ ವ್ಯತ್ಯಯಗಳು ಕಾರ್ಯಾಚರಣೆ ನಿಯಂತ್ರಣ ಕೇಂದ್ರಕ್ಕೆ (ಒಸಿಸಿ) ಸಂದೇಶ ರವಾನೆಯಾಗಲಿದೆ.
ರೈಲಿನೊಳಗೆ ಬೆಂಕಿ, ಹೊಗೆ ಕಾಣಿಸಿದಲ್ಲಿ ಕ್ಷಣದಲ್ಲಿ ಕೇಂದ್ರಕ್ಕೆ ಮಾಹಿತಿ ಸಿಗುತ್ತದೆ. ಇದರಿಂದ ಮೆಟ್ರೊ ನಿಲ್ದಾಣದಲ್ಲಿ ರೈಲು ನಿಲ್ಲಿಸಲು ಅನುಕೂಲವಾಗಲಿದೆ. ಸಿಸಿಟಿವಿ ಕ್ಯಾಮೆರಾಗಳನ್ನೂ ಬೋಗಿಗಳಲ್ಲಿ ಅಳವಡಿಸಲಾಗಿದೆ. ಇನ್ನು ಸಂಚಾರದಲ್ಲಿ ಸಮಸ್ಯೆ ಉಂಟಾದರೆ ತಕ್ಷಣ ಓಸಿಸಿಗೆ ಸಂದೇಶ ರವಾನೆ ಆಗಲಿದೆ. ಆಗ ತಕ್ಷಣ ರೈಲಿನ ಸಂಚಾರವನ್ನು ನಿಲ್ಲಿಸಲಾಗುತ್ತದೆ.
ಹೊಸ ಮೆಟ್ರೋ ಮಾರ್ಗಗಳಲ್ಲಿ ನಿಯೋಜಿಸಲಾಗುವ ಎಲ್ಲ ರೈಲುಗಳು ಚಾಲಕ ರಹಿತ ತಂತ್ರಜ್ಞಾನವನ್ನು ಹೊಂದಿದೆ. ಚಾಲಕ ರಹಿತ ರೈಲುಗಳು ಡಿಕ್ಕಿಯಾಗುವುದಿಲ್ಲ. ಯಾವುದೇ ಅವಘಡ ಸಂಭವಿಸುವುದಿಲ್ಲ ಎಂಬ ವಿಶ್ವಾಸವನ್ನು ಬಿಎಂಆರ್ಸಿಎಲ್ ಹೊಂದಿದೆ.




