ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ನೀರಿನ ಸಮಸ್ಯೆ ಇದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಟ್ಯಾಂಕರ್ ಮಾಲೀಕರು ದುಪ್ಪಟ್ಟು ದರ ನಿಗದಿ ಮಾಡಿ ಜನರಿಂದ ಹಣ ವಸೂಲಿ ಮಾಡುತ್ತಿದ್ದರು. ಇದಕ್ಕೆ ಜಲಮಂಡಳಿ ಟ್ಯಾಂಕರ್ ನಿಯಮ ತಂದು ಟ್ಯಾಂಕರ್ ನೀರಿಗೆ ದರ ನಿಗದಿ ಮಾಡಿತ್ತು. ಆದರೂ, ಸಾರ್ವಜನಿಕರಿಗೆ ಉಚಿತವಾಗಿ ಪೂರೈಕೆ ಮಾಡಲು ಉದ್ದೇಶಿಸಿದ್ದ ಕುಡಿಯುವ ನೀರನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಖಾಸಗಿ ಟ್ಯಾಂಕರ್ ಚಾಲಕನೊಬ್ಬನ ವಿರುದ್ಧ ದೂರು ದಾಖಲಾಗಿದೆ.
ಚಾಲಕ ಸುನೀಲ್ ಎಂಬುವವರ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರನ್ನು ಪೂರೈಸಲು ಸುನೀಲ್ ಎಂಬುವವರಿಗೆ ಸೇರಿದ ಖಾಸಗಿ ಟ್ಯಾಂಕರ್ ಕೆಎ-52 ಸಿ-0204 ಪಡೆದುಕೊಳ್ಳಲಾಗಿತ್ತು.
ವಾರ್ಡ್ ನಂ 130ರಲ್ಲಿರುವ ಸಾರ್ವಜನಿಕರಿಗೆ ವಿತರಿಸಲು ಸೂಚನೆ ನೀಡಲಾಗಿತ್ತು. ಆದರೆ, ಖಾಸಗಿ ಟ್ಯಾಂಕರ್ ಮಾಲೀಕ ಸುನೀಲ್ ಅವರು ಶೆಟ್ಟಿಹಳ್ಳಿ ಮುಖ್ಯ ರಸ್ತೆಯ ಮಲ್ಲಸಂದ್ರ ವಾರ್ಡ್ ಸಂ 14ರಲ್ಲಿ ವಾಣಿಜ್ಯ ಉದ್ದೇಶಕ್ಕೆ ನೀರು ವಿತರಣೆ ಮಾಡಿದ್ದಾರೆ. ಈ ವಿಚಾರ ಮಾ.24ರಂದು ತಿಳಿದುಬಂದಿದೆ.
ಹೀಗಾಗಿ, ಖಾಸಗಿ ಟ್ಯಾಂಕರ್ನ ಸುನೀಲ್ ಎನ್ನುವವರ ವಿರುದ್ಧ ಬಿಡಬ್ಲ್ಯೂಎಸ್ಎಸ್ಬಿ ಸಹಾಯಕ ಎಂಜನಿಯರ್ ಕಾರ್ತಿಕ್ ಮಂಜು ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ಬೆಂಗಳೂರು ಜಲಮಂಡಳಿ ಹಾಗೂ ಬಿಬಿಎಂಪಿ ವತಿಯಿಂದ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಪೂರೈಸಲು ಖಾಸಗಿ ಟ್ಯಾಂಕರ್ಗಳನ್ನು ಪಡೆದುಕೊಳ್ಳಲಾಗಿದ್ದು, ಈ ಖಾಸಗಿ ಟ್ಯಾಂಕರ್ಗಳ ಮೂಲಕ ಅಗತ್ಯವಿರುವ ಕಡೆಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರನ್ನು ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಉಚಿತವಾಗಿ ಕುಡಿಯುವ ನೀರು ಒದಗಿಸಬೇಕಾದ ನೀರನ್ನು ಅನ್ಯ ಉದ್ದೇಶಗಳಿಗೆ ಮಾರಾಟ ಮಾಡಿದ್ದು ಕಂಡುಬಂದರೇ ಮಂಡಳಿಯಿಂದ ಕಠಿಣ ಕ್ರಮಕೈಗೊಳ್ಳಲಾಗುವುದು” ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಎಚ್ಚರಿಕೆ ನೀಡಿದ್ದಾರೆ.
“ಸಾರ್ವಜನಿಕರಿಗೆ ಕುಡಿಯುವ ನೀರನ್ನು ಪೂರೈಸಲು ಪಡೆದುಕೊಳ್ಳಲಾದ ಖಾಸಗಿ ಟ್ಯಾಂಕರ್ಗಳ ಚಾಲಕರು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಿದರೆ, ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಖಾಸಗಿ ಟ್ಯಾಂಕರ್ ಅವರಿಗೆ ಸೂಚಿಸಲಾದ ಸ್ಥಳಗಳಿಗೆ ಸರಬರಾಜು ಮಾಡಬೇಕು. ನಿಯಮಗಳನ್ನು ಉಲ್ಲಂಘಿಸಿದರೆ, ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೆರೆಗಳಿಗೆ ಬಿಡುತ್ತಿರುವ ಸಂಸ್ಕರಿಸಿದ ನೀರನ್ನು ಬಳಸಬೇಡಿ: ಬೆಂಗಳೂರು ಜನತೆಗೆ ಜಲಮಂಡಳಿ ಸೂಚನೆ
“ಬೆಂಗಳೂರಿನಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಮಂಡಳಿ ಕೈಗೊಳ್ಳುತ್ತಿದೆ” ಎಂದು ಅವರು ವಿವರಿಸಿದ್ದಾರೆ.




