ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷದ ಜನವರಿಯಿಂದ ಮೇ ವೇಳೆಗೆ (5 ತಿಂಗಳು) 2,000ಕ್ಕೂ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸಿವೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಅಂಕಿಅಂಶಗಳಿಂದ ತಿಳಿದುಬಂದಿದೆ. ಈ ವರ್ಷ ದಾಖಲೆ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸಿವೆ ಎಂದು ಹೇಳಲಾಗಿದೆ.
ದ್ವಿಚಕ್ರ ವಾಹನ ಸವಾರರೇ ಹೆಚ್ಚಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದು ಕೂಡ ಕಂಡುಬಂದಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ.
ಸಂಭವಿಸಿರುವ ಅಪಘಾತಗಳ ಪೈಕಿ 368 ಮಾರಣಾಂತಿಕ ಮತ್ತು 1,672 ಮಾರಣಾಂತಿಕ ಅಲ್ಲದವುಗಳಾಗಿವೆ. ಅಲ್ಲದೇ, 376 ಸಾವು ಸಂಭವಿಸಿದ್ದು, 1,736 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಂಕಿಅಂಶಗಳು ತಿಳಿಸಿವೆ.
ಬೆಂಗಳೂರು ಟ್ರಾಫಿಕ್ ಪೋಲೀಸರ ಅಂಕಿಅಂಶಗಳ ಪ್ರಕಾರ, 2024ರಲ್ಲಿ 39,10,980 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಸಂಚಾರ ನಿಯಮ ಪಾಲನೆ ಮಾಡದೇ ಇರುವುದು, ಅತಿ ವೇಗದ ವಾಹನ ಚಾಲನೆ ಮಾಡುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಜತೆಗೆ, ಕುಡಿದು ವಾಹನ ಚಾಲನೆ ಮಾಡುವ ಪ್ರಕರಣಗಳು 5,433 ದಾಖಲಾಗಿವೆ. ಉಳಿದಂತೆ ಪರವಾನಗಿ ಇಲ್ಲದೆ ಚಾಲನೆ (2,710 ಪ್ರಕರಣಗಳು), ದೋಷಯುಕ್ತ ನಂಬರ್ ಪ್ಲೇಟ್ (87,277 ಪ್ರಕರಣಗಳು), ಮತ್ತು ಟ್ರಾಫಿಕ್ ಸಿಗ್ನಲ್ ಜಂಪ್ (2,46,284 ಪ್ರಕರಣಗಳು) ಕೂಡ ಸೇರಿವೆ.
ಸದ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಲ್ಮಟ್ ರಹಿತ ಚಾಲನೆ ಬಹುದೊಡ್ಡ ಸಮಸ್ಯೆಯಾಗಿ ಉಳಿದಿದೆ. 16 ಲಕ್ಷಕ್ಕೂ ಹೆಚ್ಚು ಸವಾರರು ಮತ್ತು 10 ಲಕ್ಷ ಹಿಂಬದಿ ಸವಾರರು ಹೆಲ್ಮೆಟ್ ಇಲ್ಲದ ಸಿಕ್ಕಿ ಬಿದ್ದಿದ್ದಾರೆ. ಸೀಟು ಬೆಲ್ಟ್ ಧರಿಸದೇ ಸಂಚಾರ ಮಾಡಿದ 1,83,321 ಪ್ರಕರಣಗಳು ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ 48,947 ಪ್ರಕರಣಗಳು ವರದಿಯಾಗಿವೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ನೀಟ್ ಪರೀಕ್ಷೆ ವ್ಯವಸ್ಥೆ ಕೊನೆಯಾಗಲಿ: ಆಮ್ ಆದ್ಮಿ ಪಾರ್ಟಿ ಆಗ್ರಹ
ದ್ವಿಚಕ್ರ ವಾಹನಗಳು ನಿಯಮ ಉಲ್ಲಂಘನೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 33 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಟೆಂಪೋಗಳು, ಲಘು ಮೋಟಾರು ವಾಹನಗಳು, ಆಟೋರಿಕ್ಷಾಗಳು, ಸರಕು ವಾಹನಗಳು ಮತ್ತು ಬಸ್ಗಳು ನಿಯಮ ಉಲ್ಲಂಘನೆಯಲ್ಲಿ ನಂತರದ ಸ್ಥಾನದಲ್ಲಿವೆ. ಕುಡಿದು ವಾಹನ ಚಾಲನೆ ಮಾಡುವುದರ ವಿರುದ್ಧ ಕಟ್ಟು ನಿಟ್ಟಾದ ಜಾರಿ ಮತ್ತು ಜಾಗೃತಿ ಅಭಿಯಾನಗಳ ತುರ್ತು ಅಗತ್ಯ ಒತ್ತಿಹೇಳುತ್ತದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.




