ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ₹2,000 ಕದ್ದು, ವಿದ್ಯಾರ್ಥಿನಿ ಕೈಗೆ ಸಿಕ್ಕಿಬಿದ್ದಿದ್ದ. ಈ ವಿಚಾರ ಮನೆಯವರಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಮೇ 15ರಂದು ಯುವತಿ ತನ್ನ ಮನೆಯ ಬಾತ್ ರೂಮ್ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
ಸುಬ್ರಮಣ್ಯಪುರದ ಬೃಂದಾವನ ಲೇಔಟ್ ನಿವಾಸಿ ಪ್ರಬುದ್ಧಾ (21) ಸಾವನ್ನಪ್ಪಿದ ಯುವತಿ. ಆಕೆ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮನೆಯ ಬಾತ್ ರೂಮ್ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು.
ಆರಂಭದಲ್ಲಿ ಯುವತಿಯ ಸಾವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಪೊಲೀಸರು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯ ಶಂಕೆ ಇರುವುದರಿಂದ ಕೊಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಚುರುಕುಗೊಳಿಸಿದ್ದರು.
ತನಿಖೆಯ ಬೆನ್ನತ್ತಿದ್ದ ಪೊಲೀಸರು ಮನೆಯ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದ್ದಾರೆ. ಈ ವೇಳೆ, ದೃಶ್ಯಗಳಲ್ಲಿ ಬಾಲಕನಿರುವುದು ಪತ್ತೆಯಾಗಿದೆ. ಈ ಬಗ್ಗೆ ಅನುಮಾನಗೊಂಡ ಪೊಲೀಸರು ಬಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಆತಂಕಕಾರಿ ವಿಷಯ ತಿಳಿದುಬಂದಿದೆ.
ಘಟನೆ ಹಿನ್ನೆಲೆ
ಬಂಧಿತ ಆರೋಪಿ ಕೃತ್ಯವನ್ನು ತಾನೆ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಕೃತ್ಯದ ಬಗ್ಗೆ ಆರೋಪಿ ಹೇಳಿಕೆಯನ್ನು ಆಲಿಸಿರುವ ಪ್ರಬುದ್ಧಾ ಅವರ ತಾಯಿಯ ಸ್ನೇಹಿತೆ ಈದಿನ.ಕಾಮ್ ಜೊತೆ ಹಂಚಿಕೊಂಡಿದ್ದಾರೆ.
ಆರೋಪಿ ಬಾಲಕ 15 ವರ್ಷದವನಾಗಿದ್ದು, ಈಗ ತಾನೇ 9ನೇ ತರಗತಿ ಮುಗಿಸಿ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ. ಆರೋಪಿ ಬಾಲಕ ಪ್ರಬುದ್ಧಾಳ ತಮ್ಮನ ಸ್ನೇಹಿತ. ಆಕೆಯ ಕುಟುಂಬದೊಂದಿಗೆ ಬಾಲಕನ ಒಡನಾಟವಿತ್ತು. ಕೊಲೆ ಮಾಡಿದ ಅಪ್ರಾಪ್ತ ತನ್ನ ಸ್ನೇಹಿತನ ಕನ್ನಡಕ ಒಡೆದು ಹಾಕಿದ್ದನು. ಇದನ್ನು ರಿಪೇರಿ ಮಾಡಿಸಿಕೊಡುವಂತೆ ಸ್ನೇಹಿತ ಪಟ್ಟು ಹಿಡಿದಿದ್ದನು. ಹೀಗಾಗಿ, ದುಡ್ಡಿಗಾಗಿ ಹುಡುಕಾಟ ನಡೆಸಿದ ಆರೋಪಿ ಯುವತಿಯ ಮನೆಗೆ ಬಂದಾಗ ಆಕೆಯ ಮೊಬೈಲ್ ಪೌಚ್ ಹಿಂದೆ ₹2,000 ನೋಟು ಇಟ್ಟುಕೊಂಡಿದ್ದು ಕಣ್ಣಿಗೆ ಬಿದ್ದಿದೆ.
ಯಾರಿಗೂ ತಿಳಿಯದ ಹಾಗೇ ₹2 ಸಾವಿರ ಹಣವನ್ನು ಕಳ್ಳತನ ಮಾಡಿದ್ದಾನೆ. ಪ್ರಬುದ್ಧಾಗೆ ತನ್ನ ಹಣ ಎಲ್ಲಿ ಹೋಯಿತು ಎಂದು ತಿಳಿಯದೇ ಇದ್ದಾಗ ಎಲ್ಲ ಕಡೆಯೂ ಹುಡುಕಾಟ ನಡೆಸಿದ್ದಾಳೆ. ಆದರೆ, ಎಲ್ಲೂ ಸಿಕ್ಕಿಲ್ಲ. ಬಳಿಕ, ಆರೋಪಿ ಬಾಲಕನೇ ಹಣ ತೆಗೆದುಕೊಂಡಿದ್ದಾನೆ ಎಂದು ಅರಿತ ಯುವತಿ ಹಣ ವಾಪಾಸ್ ಕೊಡು ಎಂದು ಆರೋಪಿ ಬಾಲಕನನ್ನು ಮನೆಗೆ ಕರೆದು ಕೇಳಿದ್ದಾಳೆ.
ಹಣ ನೀಡದೇ ಇದ್ದರೇ, ಆರೋಪಿ ಬಾಲಕನ ಪೋಷಕರಿಗೆ ತಿಳಿಸುವುದಾಗಿ ಹೇಳಿದ್ದಳು. ಇದಕ್ಕೆ ಹೆದರಿದ ಬಾಲಕ ಅಪ್ಪ-ಅಮ್ಮನಿಗೆ ಹೇಳುತ್ತಾಳೆ ಎನ್ನುವ ಭಯದಲ್ಲಿ ಯುವತಿಯ ಕಾಲು ಹಿಡಿದುಕೊಂಡು ತಪ್ಪಾಯಿತು ಕ್ಷಮಿಸು ಎಂದು ಕೇಳಿದ್ದಾನೆ. ಇದೇ ನೆಪದಲ್ಲಿ ಪ್ರಬುದ್ಧಾಳನ್ನು ಜೋರಾಗಿ ಹಿಂದಕ್ಕೆ ತಳಿದ್ದಾನೆ. ಈ ವೇಳೆ, ಯುವತಿಯ ತಲೆಗೆ ಫ್ರೀಡ್ಜ್ನ ತುದಿ ಭಾಗ ತಾಕಿದೆ. ಈ ವೇಳೆ, ರಕ್ತಸ್ರಾವವಾಗಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾಳೆ.
ಪ್ರಬುದ್ಧಾ ಸತ್ತಿದ್ದಾಳೆ ಎಂದು ತಿಳಿದ ಬಾಲಕ ಯುವತಿಯ ದೇಹವನ್ನು ಬಾತ್ರೂಮ್ವರೆಗೂ ಎಳೆದುಕೊಂಡು ಹೋಗಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಬಾಲಕ ಚಾಕುವಿನಿಂದ ಯುವತಿಯ ಕೈ ಕುಯ್ದಿದ್ದಾನೆ. ರಕ್ತಸ್ರಾವ ಆಗುವವರೆಗೂ ಕಾದ ಆತ ಬಳಿಕ ಯುವತಿಯ ಕುತ್ತಿಗೆ ಕುಯ್ದಿದ್ದಾನೆ. ಈ ನಂತರ, ಹಾಲ್ನಲ್ಲಿ ಬಿದ್ದ ರಕ್ತದ ಕಲೆ ಹಾಗೂ ಬಾತ್ರೂಮ್ನಲ್ಲಿರುವ ರಕ್ತವನ್ನು ತಾನೇ ನೀರು ಹಾಕಿ ತೊಳೆದಿದ್ದಾನೆ. ಈ ನಂತರ ಈ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ತಾನೇ ಲೇಟರ್ ಬರೆದಿಟ್ಟು, ಪರಾರಿಯಾಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ಮೇ 26ರಂದು ಬಂಗಾಳಕೊಲ್ಲಿಯಲ್ಲಿ ಉಂಟಾಗಲಿದೆ ‘ರೆಮಲ್ ಚಂಡಮಾರುತ’; ಭಾರೀ ಮಳೆ ಸಾಧ್ಯತೆ
ಸದ್ಯ ಈ ಪ್ರಕಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪ್ರಾಪ್ತ ಬಾಲಕನನ್ನ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.




