ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಡೆಯುತ್ತಿರುವ ಪ್ರಯತ್ನಗಳ ಮುಂದುವರಿಕೆ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಕರ್ನಾಟಕ ಪೊಲೀಸ್ ರನ್ 10ಕೆ / 5ಕೆ ಕಾರ್ಯಕ್ರಮವನ್ನು ಮಾರ್ಚ್ 10ರಂದು ಬೆಂಗಳೂರಿನಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 10,000 ಜನ ಭಾಗವಹಿಸುವ ನಿರೀಕ್ಷೆಯಿದೆ. ಹೀಗಾಗಿ, ಸಂಚಾರ ದಟ್ಟಣೆ ಉಂಟಾಗದಂತೆ ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಅನೇಕ ಗಣ್ಯರು ಈ ಕಾರ್ಯಕ್ರಮದ ಪಾಲ್ಗೊಳ್ಳಲಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವು ವಿಧಾನಸೌಧದ ಮುಂಭಾಗದಲ್ಲಿರುವ ಗ್ರಾಂಡ್ ಸ್ಟೆಪ್ನ ಮೆಟ್ಟಿಲುಗಳಿಂದ ಆರಂಭವಾಗಲಿದ್ದು, ಕೆ.ಆರ್.ವೃತ್ತ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಸಿದ್ದಲಿಂಗಯ್ಯ ವೃತ್ತ, ಕ್ವೀನ್ಸ್ ಪ್ರತಿಮೆ ವೃತ್ತ, ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ವೃತ್ತದ ಮೂಲಕ ವಿಧಾನಸೌಧ ತಲುಪಲಿದೆ. 10ಕೆ ಓಟದ ಮಾರ್ಗವು ಎರಡು ಬಾರಿ ಪುನರಾವರ್ತನೆಯಾಗಲಿದೆ.
“ಸಂಚಾರ ಸಲಹೆ / Traffic Advisory” pic.twitter.com/UxqRTWgeUG
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) March 9, 2024
ವಾಹನ ಸಂಚಾರ ನಿರ್ಬಂಧದ ರಸ್ತೆಗಳು
- ವಿಧಾನಸೌಧದ ಕಡೆಗೆ ಸಂಚರಿಸುವ ವಾಹನಗಳನ್ನು ಕೆ.ಆರ್.ಸರ್ಕಲ್ನಲ್ಲಿ ಮಾರ್ಗ ಬದಲಾಯಿಸಿ, ಪೊಲೀಸ್ ಕಾರ್ನರ್ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ವಿಧಾನಸೌಧದ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
- ಬಾಳೇಕುಂದ್ರಿ ವೃತ್ತದಿಂದ ವಿಧಾನಸೌಧದ ಕಡೆಗೆ ಬರುವ ವಾಹನಗಳನ್ನು ಪಟ್ಟಾ ಜಂಕ್ಷನ್ನಲ್ಲಿ ಮಾರ್ಗ ಬದಲಾಯಿಸಿ, ರಾಜಭವನ ಹಾಗೂ ಚಾಲುಕ್ಯ ವೃತ್ತದ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ.
ಬೆಳಗ್ಗೆ 6ರಿಂದ ಮದ್ಯಾಹ್ನ 11:30 ರವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾರ್ಚ್ 10ರ ಭಾನುವಾರ ಬೆಳಗ್ಗೆ 6 ಗಂಟೆಗೇ ಆರಂಭ ನಮ್ಮ ಮೆಟ್ರೋ
ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು
ಎಂ.ಎಸ್. ನಿಲ್ಡಿಂಗ್ ಸುತ್ತಮುತ್ತಲಿನ ಪ್ರದೇಶಗಳು, ಹೈಕೋರ್ಟ್ ಪಾರ್ಕಿಂಗ್ ಪ್ರದೇಶ, ಎಜಿ ಕಚೇರಿಯಿಂದ ಎಂ.ಎಸ್. ಬಿಲ್ಡಿಂಗ್ ವರೆಗೆ, ಫ್ರೀಡಂ ಪಾರ್ಕ್, ಲೋಕೋಪಯೋಗಿ ಇಲಾಖಾ ಕಚೇರಿಯ ಆವರಣ, ಕೆ.ಆರ್. ವೃತ್ತ, ಜ್ಞಾನಜ್ಯೋತಿ ಸಭಾಂಗಣದ ಆವರಣ, ಶಾಸಕರ ಭವನದ ಪಾರ್ಕಿಂಗ್ ಆವರಣ, ನೆಹರೂ ಪ್ಲಾನಿಟೋರಿಯಮ್ ಒಳಾಂಗಣ, ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ, ಅರಮನೆ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳು
ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಕೆ.ಬಿ.ರಸ್ತೆ, ನೃಪತುಂಗ ರಸ್ತೆ, ಕ್ವೀನ್ಸ್ ರಸ್ತೆ, ರಾಜಭವನ ರಸ್ತೆ, ಸ್ಯಾಂಕಿ ರಸ್ತೆ, ಎಂಜಿ ಕಚೇರಿಯಿಂದ ಚಾಲುಕ್ಯ ಜಂಕ್ಷನ್ ವರೆಗೆ, ಮ್ಯೂಸಿಯಂ ರಸ್ತೆಯಲ್ಲಿ ವಾಹನ ನಿಲುಗಡೆಗೆ ನಿರ್ಬಂಧಿಸಲಾಗಿದೆ.




