ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ (ಐಐಎಚ್ಆರ್) ಶುಕ್ರವಾರ ಆರಂಭವಾದ ಮೂರು ದಿನಗಳ ತ್ರಿಫಲ ವೈವಿಧ್ಯ ಪ್ರದರ್ಶನದಲ್ಲಿ ಭಾರತ ಮತ್ತು ವಿದೇಶಗಳಿಂದ 500ಕ್ಕೂ ಹೆಚ್ಚು ತಳಿಯ ಹಣ್ಣುಗಳು ಪ್ರದರ್ಶನದಲ್ಲಿವೆ.
ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (ಐಐಎಚ್ಆರ್) ಮೇ 31ರಿಂದ ಆರಂಭವಾಗಿದ್ದು, ಜೂನ್ 2ರವರೆಗೆ ‘11ನೇ ತ್ರಿಫಲ ವೈವಿಧ್ಯ’ (ಮಾವು, ಹಲಸು ಮತ್ತು ಬಾಳೆ) ಮೇಳ ನಡೆಯಲಿದೆ. 300 ತಳಿಯ ಮಾವಿನ ಹಣ್ಣುಗಳು, 100 ತಳಿಯ ಹಲಸಿನ ಹಣ್ಣು ಹಾಗೂ 100 ತಳಿಯ ಬಾಳೆಹಣ್ಣುಗಳನ್ನು ಪ್ರದರ್ಶಿಸಲಾಗಿದೆ. ಜತೆಗೆ ಮೂರು ಫಲಗಳ ವೈವಿಧ್ಯಮಯ ಮೌಲ್ಯವರ್ಧಿತ ಉತ್ಪನ್ನಗಳು ಪ್ರದರ್ಶನದಲ್ಲಿರುತ್ತವೆ. ಹಣ್ಣಿನ ಬೆಳೆಗಳ ಕೃಷಿಯನ್ನು ಉತ್ತೇಜಿಸುವುದು ಹಾಗೂ ರೈತರ ಜೀವನಮಟ್ಟವನ್ನು ಸುಧಾರಿಸುವುದು ಈ ಮೇಳದ ಉದ್ದೇಶವಾಗಿದೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಉಪ ಮಹಾನಿರ್ದೇಶಕ (ತೋಟಗಾರಿಕಾ ವಿಜ್ಞಾನ) ಸಂಜಯ್ ಕುಮಾರ್ ಸಿಂಗ್ ಮಾತನಾಡಿ, “ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳ ನಡುವೆ ಮೈಲಿಗಲ್ಲುಗಳನ್ನು ಸಾಧಿಸಲು ಹಣ್ಣುಗಳ ವೈವಿಧ್ಯತೆಯನ್ನು ಸಂರಕ್ಷಿಸುವುದು ಮುಖ್ಯವಾಗಿದೆ” ಎಂದರು.
“ಈ ಹಣ್ಣುಗಳ ರಫ್ತು ಸಾಮರ್ಥ್ಯವು ಸುಗ್ಗಿಯ ನಂತರದ ಸಂಸ್ಕರಣೆಯೊಂದಿಗೆ ಸೇರಿ ಹೆಚ್ಚಿನ ಆದಾಯ ಉತ್ಪಾದನೆಗೆ ಕಾರಣವಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೆಎಸ್ಆರ್ಟಿಸಿ | ವಿದ್ಯಾರ್ಥಿ ಬಸ್ ಪಾಸ್ ವಿತರಣೆ ಆರಂಭ
“ಹವಾಮಾನ ಬದಲಾವಣೆಯ ಕಾಲದಲ್ಲಿ ಸ್ಥಿತಿಸ್ಥಾಪಕತ್ವವು ಮುಂಬರುವ ವರ್ಷಗಳಲ್ಲಿ ರೈತರ ಆದ್ಯತೆಗಳನ್ನು ಹೆಚ್ಚಿಸುವ ಪ್ರಮುಖ ಅಂಶವಾಗಿದೆ. ವೈವಿಧ್ಯತೆಯನ್ನು ಸಂರಕ್ಷಿಸುವ ಮೂಲಕ, ಚೇತರಿಸಿಕೊಳ್ಳುವ ಪ್ರಭೇದಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಾದ ಮೂಲ ವಸ್ತುಗಳನ್ನು ನಾವು ಹೊಂದಿದ್ದೇವೆ” ಎಂದು ಐಐಎಚ್ಆರ್ ಬೆಂಗಳೂರು ನಿರ್ದೇಶಕ ಪ್ರಕಾಶ್ ಪಾಟೀಲ್ ಹೇಳಿದರು.
ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ಮತ್ತು IIHR ತಿಳುವಳಿಕೆ ಪತ್ರಕ್ಕೆ (MoU) ಸಹಿ ಮಾಡಿದೆ.




