ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಶುರುವಾಗಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಈಗಾಗಲೇ ಜಲಮಂಡಳಿ ಮಿತವ್ಯಯವಾಗಿ ನೀರನ್ನು ಬಳಕೆ ಮಾಡಿ ಎಂದು ಸೂಚನೆ ನೀಡಿದೆ. ಜತೆಗೆ, ಹೌಸಿಂಗ್ ಸೊಸೈಟಿಗಳು ಕೂಡ ನೀರಿನ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿ, ನೀರು ಪೋಲಾಗದಂತೆ ನೋಡಿಕೊಳ್ಳಿ ಎಂದು ನಿವಾಸಿಗರಿಗೆ ಎಚ್ಚರಿಕೆ ನೀಡಿದೆ. ಈ ಮದ್ಯೆ, ಐಟಿ ಕಂಪನಿಗಳು, ಶಾಲೆಗಳು, ಮಾಲ್ಗಳು ಸೇರಿದಂತೆ ಹಲವೆಡೆ ನೀರಿನ ಸಮಸ್ಯೆ ಆರಂಭವಾಗಿದೆ.
ಅತೀ ಹೆಚ್ಚು ಐಟಿ ಕಂಪನಿಗಳನ್ನು ಹೊಂದಿರುವ ನಗರದ ವೈಟ್ಫೀಲ್ಡ್ ಪ್ರದೇಶದಲ್ಲಿ ನೀರಿನ ಅಭಾವ ಎದುರಾಗಿದೆ ಈ ಬಗ್ಗೆ ವೈಟ್ಫೀಲ್ಡ್ ಏರಿಯಾ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್ ಮಾಹಿತಿ ನೀಡಿದೆ.
”5,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಟೆಕ್ ಹಬ್ಗೆ ದಿನಕ್ಕೆ ಸುಮಾರು 1 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಇದು 10-12 ಟ್ಯಾಂಕರ್ ಲೋಡ್ಗಳಿಗೆ ಸಮನಾಗಿರುತ್ತದೆ. ಹಾಗಾಗಿ, ನೀರಿನ ಸಮಸ್ಯೆ ಪರಿಹರಿಸಬೇಕಾಗಿದೆ. ಪೇಂಟಿಂಗ್ ಮತ್ತು ನಿರ್ಮಾಣ ಚಟುವಟಿಕೆಯಂತಹ ಅಥವಾ ತಕ್ಷಣಕ್ಕೆ ಅನಿವಾರ್ಯವಲ್ಲದ ಚಟುವಟಿಕೆಗಳನ್ನು ಮುಂದೂಡಿಕೆ ಮಾಡಲಾಗುತ್ತಿದೆ. ಈಗಿನ ನೀರಿನ ಸಮಸ್ಯೆಯ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗಿದೆ” ಎಂದು ವೈಟ್ಫೀಲ್ಡ್ ಏರಿಯಾ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ರಾಜೇಶ್ ಮಲ್ಯ ತಿಳಿಸಿದ್ದಾರೆ.
”ಉತ್ಪಾದನೆಯ ಚಟುವಟಿಕೆಗಳನ್ನು ಐಟಿ ಕಂಪನಿಗಳು ತಕ್ಷಣಕ್ಕೆ ಕಡಿತ ಮಾಡದಿದ್ದರೂ, ಇತರ ಕೈಗಾರಿಕೆಗಳು ಹೆಣಗಾಡುವಂತಾಗಿದೆ. ವಾಹನ ವಲಯಕ್ಕೆ ಸರಬರಾಜು ಮಾಡುವ ಮೂಲ ಉಪಕರಣ ತಯಾರಕರು ಕೂಡ ಸಮಸ್ಯೆ ಎದರಿಸುತ್ತಿದ್ದಾರೆ. ಕೈಗಾರಿಕೆಗಳಿಗೆ, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸದ್ಯದ ನೀರಿನ ಬಿಕ್ಕಟ್ಟು ಆತಂಕ ಉಂಟುಮಾಡುತ್ತಿದೆ” ಎಂದಿದ್ದಾರೆ.
ರಾಜ್ಯದಲ್ಲಿನ ನೀರಿನ ಕೊರತೆಯ ತುರ್ತು ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಮಂಗಳವಾರ ಮಹತ್ವದ ಸಭೆಯನ್ನು ಕರೆದಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, “ನಾನು ಇದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇನೆ. ನೀರಿನ ಮೂಲಗಳು ಲಭ್ಯವಿರುವ ಪ್ರದೇಶಗಳನ್ನು ಗುರುತಿಸಲು ನಾನು ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಬೆಂಗಳೂರಿನಲ್ಲಿ 3000ಕ್ಕೂ ಹೆಚ್ಚು ಬೋರ್ವೆಲ್ಗಳು ಬತ್ತಿಹೋಗಿವೆ” ಎಂದು ಅವರು ಹೇಳಿದರು.
ಪ್ರಮುಖವಾಗಿ ಭೀಕರ ಬರಗಾಲದಿಂದಾಗಿ ಐಟಿ ಹಬ್ ಗಂಭೀರ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಸಾಕಷ್ಟು ಮಳೆಯಾಗದ ಕಾರಣ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಕುಸಿದಿದೆ. ಇತ್ತೀಚಿನ ತಿಂಗಳುಗಳಲ್ಲಿ ಮಳೆ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಬೋರ್ವೆಲ್ಗಳು ಒಣಗುತ್ತಿವೆ. ಟೆಕ್ ಹಬ್ಗೆ ಕುಡಿಯುವ ನೀರನ್ನು ಪೂರೈಸುವ ಜಲಮಂಡಳಿ ಕೇಂದ್ರ ಪ್ರದೇಶಗಳಲ್ಲಿ ಪರಿಸ್ಥಿತಿ ನಿಭಾಯಿಸಬಹುದಾದರೂ, ನಗರದ ಹೊರವಲಯದಲ್ಲಿ ಇದು ತುಂಬಾ ಗಂಭೀರವಾದ ಸಮಸ್ಯೆಯಾಗಿದೆ.
ನೀರಿಲ್ಲ… ನೀರಿಲ್ಲ…
ನಗರದ ಹಲವೆಡೆ ಕುಡಿಯೋಕೆ ನೀರಿಲ್ಲದೇ ಪರದಾಡುತ್ತಿದ್ದರೆ, ಇನ್ನೊಂದೆಡೆ ದಿನನಿತ್ಯದ ಬಳಕೆಗೂ ನೀರಿಲ್ಲದೇ ಜನರು ಮುಂಜಾನೆ ನಿತ್ಯ ಕರ್ಮ ಮುಗಿಸೋದಕ್ಕೆ ಬೆಂಗಳೂರಿನ ಮಾಲ್ಗಳಿಗೆ ಹೋಗುತ್ತಿದ್ದಾರೆ.
ಹೌದು, ಇದು ಹಾಸ್ಪಾಸ್ಪದ ಏನಿಸಿದರೂ ಕಹಿ ಸತ್ಯ. ಈಗಾಗಲೇ, ನಗರದಲ್ಲಿ ನೀರಿಲ್ಲದ ಸಮಸ್ಯೆ ಎಷ್ಟರಮಟ್ಟಿಗೆ ತಲುಪಿದೆ ಎಂಬುವುದು ತಿಳಿದಿರುವ ವಿಚಾರ. ನಗರದಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ಮಧ್ಯೆ ಜನರು ಶೌಚಾಲಯಗಳನ್ನು ಬಳಸಲು ಹತ್ತಿರದ ಮಾಲ್ಗಳಿಗೆ ಹೋಗುತ್ತಿದ್ದಾರೆ ಎಂದು ನಗರದ ನಿವಾಸಿಯೊಬ್ಬರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇನ್ನು ಸ್ನಾನ ಮಾಡುವುದಕ್ಕೆ ಕೆಲವರು ಜಿಮ್ ಅನ್ನು ಅವಲಂಬಿಸಿದ್ದಾರೆ ಎಂದು ವರದಿ ಆಗಿದೆ.
ಪ್ರೆಸ್ಟೀಜ್ ಫಾಲ್ಕನ್ ಸಿಟಿಯ ಫ್ಲಾಟ್ನಲ್ಲಿ ವಾಸಿಸುತ್ತಿರುವ ನಿವಾಸಿಯೊಬ್ಬರು, ”ಕಳೆದ ಒಂದು ತಿಂಗಳಿಂದ ತಮಗೆ ನಿಯಮಿತ ನೀರು ಸರಬರಾಜು ಮಾಡಿಲ್ಲ” ಎಂದು ಟ್ವೀಟ್ ಮೂಲಕ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರೆಸ್ಟೀಜ್ ಫಾಲ್ಕನ್ ಸಿಟಿಯ ಜನರು ₹1 ಕೋಟಿ ಇಎಂಐ ಪಾವತಿಸುತ್ತಿದ್ದಾರೆ. ಆದರೆ, ಶೌಚಾಲಯದಲ್ಲಿ ಫ್ಲಶ್ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ನೀರಿಲ್ಲ. ನಾವು ಎಲ್ಲಿಗೆ ಬಂದಿದ್ದೇವೆ? ಇದಕ್ಕೆ ನಿಮ್ಮ ದೀರ್ಘಾವಧಿಯ ಪರಿಹಾರವೇನು? ಸೂಕ್ತ ನೀರಿಲ್ಲದ ಫ್ಲಾಟ್ಗಳ ಖರೀದಿಸುವುದನ್ನು ನಿಲ್ಲಿಸಿ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ಗೆ ನೀರಿನ ಸಮಸ್ಯೆ ಬಗೆಹರಿಸುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.
ಯಾವುದೇ ಗಗನಚುಂಬಿ ಕಟ್ಟಡಗಳಲ್ಲಿ ಫ್ಲಾಟ್ ಖರೀದಿಸಬೇಡಿ ಅಥವಾ ಬಾಡಿಗೆಗೆ ತೆಗೆದುಕೊಳ್ಳಬೇಡಿ. ಪ್ರತಿಷ್ಠಿತ ಫಾಲ್ಕನ್ ಸಿಟಿಯಲ್ಲಿರುವ ನಮ್ಮ ಫ್ಲಾಟ್ನಲ್ಲಿ ನೀರು ಸರಬರಾಜು ಮಾಡಿ ಒಂದು ತಿಂಗಳಿಗಿಂತ ಹೆಚ್ಚು ಕಳೆದಿದೆ. ಈಗ ಪರಿಸ್ಥಿತಿ ವಾಸಯೋಗ್ಯ ಎನ್ನಬಹುದಾದ ಮಿತಿಯನ್ನು ಮೀರಿದೆ.
ಹಗಲಿನಲ್ಲಿ ನೀರಿಲ್ಲ, ರಾತ್ರಿಯಲ್ಲಿ ನಾವು ನೀರನ್ನು ಪಡೆದಾಗ ಅದು ಕೇವಲ ಕೆಸರಿನ ನೀರು ಸ್ನಾನಕ್ಕೂ ಕೂಡ ಯೋಗ್ಯವಲ್ಲ. ಬಾಡಿಗೆದಾರರಲ್ಲಿ ಹೆಚ್ಚಿನವರು ತೆರವುಗೊಂಡಿದ್ದರೆ, ಇತರರು ತಾತ್ಕಾಲಿಕ ವಸತಿಗೆ ತೆರಳಿದ್ದಾರೆ. ಶೌಚಾಲಯಗಳಲ್ಲಿ ನೀರಿಲ್ಲದೇ, ಮಾನವ ಮಲವಿಸರ್ಜನೆಯ ಗಬ್ಬು ವಾಸನೆ ತುಂಬಿದೆ.
Gloomy story of Prestige Falcon City where people are paying 1cr+ emi and not able to even flush the toilet! 🥲@siddaramaiah @DKShivakumar sir, where have we arrived? What is your long-term solution for this? 🙏
Stop buying properties without sustainable water! @prestigeproper8 pic.twitter.com/qsdv4OQDgM— Citizens Movement, East Bengaluru (@east_bengaluru) March 8, 2024
ತಮ್ಮ ವ್ಯಾಪಾರ ಮಾಡಲು ಸಮೀಪದ ಫೋರಂ ಮಾಲ್ಗೆ ಹೋಗುವ ನಿವಾಸಿಗಳ ಸಾಲು ಸಾಮಾನ್ಯವಾಗಿದೆ. ಪಾತ್ರೆಗಳನ್ನು ಸ್ವಚ್ಛಗೊಳಿಸಲು ನೀರಿಲ್ಲದ ಕಾರಣ ಹೊರಗಿನಿಂದ ಊಟ ಆರ್ಡರ್ ಮಾಡುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ ಎಂಬಂತಾಗಿದೆ.
ಕೆಲವರು ಜಿಮ್ಗಳಿಗೆ ಹೋಗಿ ಸ್ನಾನ ಮಾಡಿ ಬರಲು ಒಂದು ಜೊತೆ ಬಟ್ಟೆ ಮತ್ತು ಟವೆಲ್ನೊಂದಿಗೆ ಹೋಗುತ್ತಿದ್ದಾರೆ. ನೀವು ಹೌಸಿಂಗ್ ಲೋನ್ಗಾಗಿ 1 ಕೋಟಿ ಇಎಮ್ಐ ಅನ್ನು ಪಾವತಿಸುತ್ತಿರುವಾಗ ತುಂಬಾ ಹತಾಶೆ ಮತ್ತು ನೋವು ಉಂಟಾಗುವುದನ್ನು ಸಹಿಸಲಾಗದು ಎಂದು ಅಲವತ್ತುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ | ಬಾಂಬರ್ ಓಡಾಟದ ಮತ್ತೆರಡು ವಿಡಿಯೋ ಬಿಡುಗಡೆ ಮಾಡಿದ ಎನ್ಐಎ
ಸದಾಕಾಲ ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿರುವ ಬೆಂಗಳೂರಿನಲ್ಲಿ ಫ್ಲಾಟ್ ಖರೀದಿಸಬೇಡಿ. ಹೀಗೆ, ಕಷ್ಟಪಡುವುದಕ್ಕಿಂತ ಬಾಡಿಗೆ ಮನೆಯಲ್ಲಿ ನೆಮ್ಮದಿಯಿಂದ ಬದುಕುವುದು ಒಳ್ಳೆಯದು ಎಂದು ಪ್ರಾಮಾಣಿಕ ಸಲಹೆ ನೀಡಿದ್ದಾರೆ.
15 ದಿನಕ್ಕೊಮ್ಮೆ ನೀರು
ಬೆಂಗಳೂರಿನ ಯಶವಂತಪುರ ಕ್ಷೇತ್ರದ ತಿಪ್ಪೇನಹಳ್ಳಿಯಲ್ಲಿ ಜನರಂತೂ ಹಬ್ಬದ ದಿನವೂ ಜೀವ ಜಲಕ್ಕಾಗಿ ಬೀದಿಗಿಳಿದಿದ್ದರು. ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಯಲ್ಲಿರುವ ತಿಪ್ಪೇನಹಳ್ಳಿಯಲ್ಲಿ 15 ದಿನಕ್ಕೊಮ್ಮೆ ನೀರು ಬರುತ್ತಿದೆ. ಇದರಿಂದ ನಮಗೆ ಜೀವನ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಜನರು ರಸ್ತೆಯಲ್ಲಿ ಖಾಲಿ ಬಿಂದಿಗೆ, ಕ್ಯಾನ್ಗಳನ್ನು ಹಿಡಿದು ನಿಂತಿರುವುದು ಸರ್ವೇ ಸಾಮಾನ್ಯವಾಗಿ ಹೋಗಿದೆ.




