ಬೆಳ್ತಂಗಡಿಯ ಮೂವರು ಮುಸ್ಲಿಂ ಯುವಕರನ್ನು ವ್ಯವಹಾರದ ನೆಪದಲ್ಲಿ ತುಮಕೂರಿಗೆ ಕರೆಸಿಕೊಂಡು ಹಣ ಸುಲಿಗೆ ಮಾಡಿ, ಮೂವರನ್ನೂ ಕಾರಿನಲ್ಲೇ ಸುಟ್ಟು ಹಾಕಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖಾ ತಂಡವನ್ನು ರಚಿಸಿ ಇಂತಹ ಜಾಲಗಳ ಹಿಂದಿರುವ ಎಲ್ಲಾ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ ಒತ್ತಾಯಿಸಿದೆ.
ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಅಬೂಬಕ್ಕರ್ ಹೆಚ್, ದ.ಕ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಶಾಹುಲ್ ಹಮೀದ್(45 ವರ್ಷ),ಮದ್ದಡ್ಕ ನಿವಾಸಿ ಇಸಾಕ್ (54 ವರ್ಷ) ಮತ್ತು ಶಿರ್ಲಾಲು ನಿವಾಸಿ ಸಿದ್ದೀಕ್ (34 ವರ್ಷ) ಎಂಬ ಮೂವರು ಅಮಾಯಕ ವ್ಯಕ್ತಿಗಳ ಬರ್ಬರ ಹತ್ಯೆ,ಹಾಗೂ ಮೃತದೇಹಗಳನ್ನು ಕಾರಿನೊಳಗೆ ಹಾಕಿ ಸುಟ್ಟು ಹಾಕಿರುವ ಅಮಾನುಷ ಕೃತ್ಯ ದಿನಾಂಕ 22/03/2024 ರಂದು ತುಮಕೂರು ಜಿಲ್ಲೆಯ ಕೋರಾ ಪೊಲೀಸ್ ಠಾಣೆಯ ವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ನಡೆದಿರುತ್ತದೆ. ಈ ಘಟನೆಯನ್ನು ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ (ರಿ) ಬೆಂಗಳೂರು ತೀವ್ರವಾಗಿ ಖಂಡಿಸುತ್ತದೆ’ ಎಂದರು.

ದಿನಾಂಕ 22/03/2024 ರಂದು ಬೆಳಕಿಗೆ ಬಂದಂತೆ ತುಮಕೂರು ಜಿಲ್ಲೆಯ ಕುಚ್ಚಂಗಿ ಕೆರೆಯಲ್ಲಿ ಎಸ್ಪ್ರೆಸ್ಸೋ ಕಾರೊಂದು ಸುಟ್ಟ ಸ್ಥಿಯಲ್ಲಿ ಕಂಡು ಬಂದಿದ್ದು, ಅದರ ಡಿಕ್ಕಿಯಲ್ಲಿ ಎರಡು ಮೃತದೇಹಗಳು ಹಾಗೂ ಮಧ್ಯದ ಸೀಟಿನಲ್ಲಿ ಒಂದು ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದ್ರಿ ಕಾರನ್ನು ಮದ್ದಡ್ಕ ನಿವಾಸಿ ಇಸಾಕ್ ರವರು ಮಾಲೀಕರಿಂದ ಸುಮಾರು 13 ದಿನಗಳ ಹಿಂದೆ ಪಡೆದುಕೊಂಡು ಹೋಗಿದ್ದು ಸದ್ರಿ ಕಾರಿನಲ್ಲಿ ಕಂಡ ಸುಟ್ಟು ಕರಕಲಾದ ಮೃತದೇಹಗಳು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಶಾಹುಲ್ ಹಮೀದ್, ಮದ್ದಡ್ಕ ನಿವಾಸಿ ಇಸಾಕ್ ಮತ್ತು ಶಿರ್ಲಾಲು ನಿವಾಸಿ ಸಿದ್ದೀಕ್ ಎಂದು ತಿಳಿದು ಬಂದಿದೆ. ಆರೋಪಿಗಳಾದ ಶೀರಾ ಗೇಟ್ ಬಳಿ ನಿವಾಸಿ ಪಾತರಾಜು, ಸತ್ಯಮಂಗಲದ ವಾಸಿ ಗಂಗರಾಜು, ಪುಟ್ಟ ಸ್ವಾಮಯ್ಯನ ಪಾಳ್ಯದ ಮಧುಸೂದನ್, ಸಂತೇಪೇಟೆಯ ನವೀನ್, ವೆಂಕಟೇಶಪುರದ ಕೃಷ್ಣ, ಹೊಂಬಯ್ಯನ ಪಾಳ್ಯದ ಗಣೇಶ, ನಾಗಣ್ಣ ಪಾಳ್ಯದ ಕಿರಣ್, ಕಾಳಿದಾಸನಗರದ ಸೈಮನ್ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬುದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ವಿವರಿಸಿದರು.
ಈ ಘಟನೆಯು ಅಮಾನುಷವಾಗಿದ್ದು, ನಾಗರಿಕ ಸಮಾಜವು ತಲೆ ತಗ್ಗಿಸುವಂತಹ ಹೀನ ಕುಕೃತ್ಯ ಇದಾಗಿದ್ದು, ನಿಧಿ, ಬಂಗಾರದ ಆಮಿಷ ಒಡ್ಡಿ ಮೂರು ಅಮಾಯಕ ಜೀವಗಳನ್ನು ಹತ್ಯೆಗೈದು ಗುರುತು ಪರಿಚಯ ಸಿಗದ ರೀತಿಯಲ್ಲಿ ಕ್ರೂರವಾಗಿ ಸುಟ್ಟು ಹಾಕಿ ಮೃತ ದೇಹವು ಸಂಪೂರ್ಣ ಬೂದಿ ಆಗುವಂತೆ ಮಾಡಿದ ಈ ಕೃತ್ಯದಲ್ಲಿ ಮಡಿದ ಬಡ ಜೀವಗಳ ಕಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜುನೈದ್ (ಪ್ರಧಾನ ಕಾರ್ಯದರ್ಶಿ), ಸಲೀಂ ಸಿ.ಎಮ್ (ಅಧ್ಯಕ್ಷರು, ಮೆಜೆಸ್ಟಿಕ್ ವಲಯ), ಸಮದ್ ಮದ್ದಡ್ಕ, (ಝೋನಲ್ ಏರಿಯಾ ಲೀಡರ್), ಬಶೀರ್ ಪುಣಚ(ಖಜಾಂಜಿ), ಉಬೈದುಲ್ಲಾ (ವಿಜಯನಗರ ವಲಯ) ಶಬೀರ್ ಉಜಿರೆ ಉಪಸ್ಥಿತರಿದ್ದರು.





