ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿಯಲು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮಗಳು ಹಾಗೂ ನಿರ್ಲಕ್ಷ್ಯವೇ ಕಾರಣ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ಬಾಕಿ ಉಳಿದಿರುವ ಎಲ್ಲ ಖಾಲಿ ಹುದ್ದೆಗಳನ್ನು ಪಾರದರ್ಶಕವಾಗಿ ಮತ್ತು ಕಾಲಮಿತಿಯೊಳಗೆ ಭರ್ತಿ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ನಾವು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಇದು ಒಂದೆರಡು ದಿನಗಳಲ್ಲಿ ಸೃಷ್ಟಿಯಾದದ್ದಲ್ಲ. 2019ರಿಂದ 2023ರವರೆಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಾತಿಗಳನ್ನು ಸಕಾಲದಲ್ಲಿ ಆರಂಭಿಸದಿರುವುದು, ಸೂಕ್ತ ಯೋಜನೆ ರೂಪಿಸದಿರುವುದು ಮತ್ತು ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರವೇ ಈ ದುಸ್ಥಿತಿಗೆ ಕಾರಣ. ಇದರಿಂದ ಯುವಜನರು ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳುವಂತಾಗಿದೆ,” ಎಂದು ಆರೋಪಿಸಿದ್ದಾರೆ.
ವಿಪಕ್ಷ ನಾಯಕರ ನಡೆ ಖಂಡನೀಯ
“ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರನ್ನು ಉಜ್ವಲ ಭವಿಷ್ಯದ ಕಡೆ ಯೋಚಿಸಲು ಪ್ರೇರೇಪಿಸುವ ಬದಲು, ವಿರೋಧ ಪಕ್ಷದ ನಾಯಕರು ನಿರಪರಾಧಿ ವಿದ್ಯಾರ್ಥಿಗಳಿಗೆ ತಪ್ಪು ಮಾರ್ಗದರ್ಶನ ನೀಡುತ್ತಿದ್ದಾರೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಯುವಕರ ಮೂಲಕ ಅಶಾಂತಿ ಉಂಟುಮಾಡಲು ಹೊರಟಿರುವುದು ಅತ್ಯಂತ ಖಂಡನೀಯ” ಎಂದು ಕಿಡಿಕಾರಿದ್ದಾರೆ.
ಇದನ್ನು ಓದಿದ್ದೀರಾ? ಶೋಯೆಬ್ ಖಾನ್ | ಬಿಹಾರದ ಕುಗ್ರಾಮದಿಂದ ಯುಎಇ ವಿಶ್ವಕಪ್ ತಂಡದವರೆಗೆ ರೋಚಕ ಪಯಣ
ನ್ಯಾಯಾಲಯದ ಪ್ರಕರಣಗಳಿಂದ ವಿಳಂಬ
ನೇಮಕಾತಿ ವಿಳಂಬದ ಹಿಂದಿನ ನೈಜ ಕಾರಣಗಳನ್ನು ವಿವರಿಸಿದ ಮುಖ್ಯಮಂತ್ರಿಗಳು, “ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿದ್ದ ಕಾರಣ ಹಲವು ನೇಮಕಾತಿ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ನಮ್ಮ ಸರ್ಕಾರ, ತ್ವರಿತ ನಿರ್ಧಾರಗಳನ್ನು ಕೈಗೊಂಡು ಅಭ್ಯರ್ಥಿಗಳ ವೃತ್ತಿಜೀವನಕ್ಕೆ ಧಕ್ಕೆ ತರುವ ಬದಲು, ಕಾನೂನಿನ ಚೌಕಟ್ಟಿನೊಳಗೆ ಜವಾಬ್ದಾರಿಯುತವಾಗಿ ವರ್ತಿಸಿದೆ. ಈ ಅಡೆತಡೆಗಳ ನಡುವೆಯೂ ಕಳೆದ ಎರಡೂವರೆ ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ಮಾಡಲಾಗಿದೆ,” ಎಂದು ಮಾಹಿತಿ ನೀಡಿದ್ದಾರೆ.
ವಯೋಮಿತಿ 5 ವರ್ಷ ಸಡಿಲಿಕೆ
“ವರ್ಷಗಳ ಕಾಲ ಕಾಯಬೇಕಾದ ಅನೇಕ ಅಭ್ಯರ್ಥಿಗಳ ಕಷ್ಟವನ್ನು ಸರ್ಕಾರ ಅರಿತಿದೆ. ಈ ಕಾರಣಕ್ಕಾಗಿಯೇ ಮುಂಬರುವ ನೇಮಕಾತಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷಗಳವರೆಗೆ ಸಡಿಲಗೊಳಿಸಲಾಗಿದೆ. ಇದರಿಂದ ನೇಮಕಾತಿ ವಿಳಂಬದಿಂದ ಅರ್ಹ ಅಭ್ಯರ್ಥಿಗಳಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಲಾಗಿದೆ. ಭವಿಷ್ಯದಲ್ಲಿ ಭಾರೀ ಸಂಖ್ಯೆಯಲ್ಲಿ ಖಾಲಿ ಹುದ್ದೆಗಳು ಬಾಕಿ ಉಳಿಯದಂತೆ ತಡೆಯಲು ನೇಮಕಾತಿ ಸಂಸ್ಥೆಗಳನ್ನು ಬಲಪಡಿಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಯುವಜನತೆಗೆ ಸಿಎಂ ಅಭಯ
“ಉದ್ಯೋಗಕ್ಕಾಗಿ ಸಲ್ಲಿಸುವ ಪ್ರತಿ ಅರ್ಜಿಯ ಹಿಂದೆ ಒಂದು ಕನಸಿರುತ್ತದೆ, ಕುಟುಂಬದ ನಿರೀಕ್ಷೆ ಮತ್ತು ನಾಡಿನ ಸೇವೆ ಮಾಡುವ ಆಕಾಂಕ್ಷೆ ಇರುತ್ತದೆ. ಯುವಜನರ ಆತಂಕ ನನ್ನನ್ನು ತಲುಪಿದೆ. ನಿಮ್ಮ ಶಿಕ್ಷಣ ಮತ್ತು ಕೌಶಲ್ಯದ ಮೇಲೆ ಆತ್ಮವಿಶ್ವಾಸವಿಡಿ. ನಮ್ಮ ಸರ್ಕಾರ ನಿಮ್ಮೊಂದಿಗೆ ದೃಢವಾಗಿ ನಿಂತಿದೆ. ಇದು ಕೇವಲ ಬಾಯಿಮಾತಲ್ಲ, ನಡೆಯಲ್ಲಿಯೂ ಪಾಲಿಸುತ್ತಿದ್ದೇವೆ. ಸಮುದಾಯ, ಪ್ರದೇಶದ ಭೇದಭಾವವಿಲ್ಲದೆ ಪ್ರತಿ ಅರ್ಹ ಅಭ್ಯರ್ಥಿಗೂ ಸೂಕ್ತ ಉದ್ಯೋಗ ಖಚಿತಪಡಿಸಲು ನಾವು ಬದ್ಧರಿದ್ದೇವೆ” ಎಂದು ಮುಖ್ಯಮಂತ್ರಿಗಳು ಯುವಜನತೆಗೆ ಧೈರ್ಯ ತುಂಬಿದ್ದಾರೆ.





