ನಾಡಹಬ್ಬ ಮೈಸೂರು ದಸರಾದಲ್ಲಿ ಈ ಬಾರಿ ಚಿತ್ರದುರ್ಗ ಜಿಲ್ಲೆಯ ಸಂಕೇತವಾಗಿ ದುರ್ಗವನ್ನಾಳಿದ ಜನಪರ ಪಾಳೆಯಗಾರರ ಐತಿಹಾಸಿಕ ಸ್ಥಬ್ದ ಚಿತ್ರ ಪ್ರತಿನಿಧಿಸಿತ್ತು. ಕಲೆ, ಇತಿಹಾಸ, ಸಂಸ್ಕೃತಿ ಭವ್ಯತೆ ಸಾರುವ ಉತ್ತಮ ಸ್ಥಬ್ದ ಚಿತ್ರಗಳಿಗೆ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಐತಿಹಾಸಿಕ ಚಿತ್ರದುರ್ಗದ ರಾಜವೀರ ಮದಕರಿನಾಯಕ ಅವರ ಸ್ಥಬ್ದ ಚಿತ್ರಕ್ಕೆ ಪ್ರಥಮ ಸ್ಥಾನ ದೊರೆತಿದೆ. ಈ ಸಂದರ್ಭದಲ್ಲಿ ಸ್ಥಬ್ದ ಚಿತ್ರ ನಿರ್ಮಾಣಕ್ಕೆ ಶ್ರಮಿಸಿದ ಕಲಾವಿದರಾದ ಸಿ ಕಣ್ಮೇಶ್ ಅವರನ್ನು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ(ಸಿಇಓ) ಡಾ. ಆಕಾಶ್ ರವರು ಸನ್ಮಾನಿಸಿ ಅಭಿನಂದಿಸಿದರು.
ಪ್ರಥಮ ಸ್ಥಾನ ದೊರೆತಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಅವರು “ಚಿತ್ರದುರ್ಗದ ರಾಜವೀರ ಮದಕರಿನಾಯಕರ ಸ್ಥಬ್ದಚಿತ್ರಕ್ಕೆ ಪ್ರಥಮ ಸ್ಥಾನ ದೊರೆತಿರುವುದು ಜಿಲ್ಲೆಗೆ ಗೌರವ ಮತ್ತು ಹೆಮ್ಮೆಯ ವಿಚಾರ. ಪ್ರಶಸ್ತಿಯ ಹೆಮ್ಮೆಯನ್ನು ತಂದು ಕೊಟ್ಟಂತಹ ಕಲಾವಿದರು ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮಿಸಿ ಚಿತ್ರದುರ್ಗದ ಕೀರ್ತಿಯನ್ನು ಹೆಚ್ಚಿಸಬೇಕು” ಎಂದು ಶುಭ ಕೋರಿದರು.

ಸ್ತಬ್ದ ಚಿತ್ರಗಳು ದಸರಾ ಉತ್ಸವದ ವಾತಾವರಣವನ್ನು ಹಾಗೂ ವೈಭವವನ್ನು ಹೆಚ್ಚಿಸುತ್ತವೆ. ಈ ಬಾರಿಯ ಸ್ಥಬ್ದ ಚಿತ್ರಗಳಲ್ಲಿ ಕರ್ನಾಟಕದ ಸಾಂಸ್ಕೃತಿಕ, ಐತಿಹಾಸಿಕ, ದೇವಸ್ಥಾನ ಕಥೆಗಳು ಹಾಗೂ ಭಕ್ತಿ, ಇತರ ದೃಶ್ಯಗಳನ್ನು ವಿವರಿಸಲಾಗಿತ್ತು. ವಿಶೇಷವಾಗಿ, “31 ಜಿಲ್ಲೆಯ ಸ್ತಬ್ದ ಚಿತ್ರಗಳು ಸೇರಿದಂತೆ ವಿವಿಧ ಇಲಾಖೆಗಳ 50ಕ್ಕೂ ಹೆಚ್ಚು ಸ್ಥಬ್ದ ಚಿತ್ರಗಳು ಈ ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡು, ಇವು ದಸರಾ ವೈಭವ, ಕಲೆ, ಪರಂಪರೆ ಹೆಚ್ಚಿಸಿ ಓದುಗರನ್ನು ಆಕರ್ಷಿಸಿದುದಲ್ಲದೇ, ಕಲಾತ್ಮಕ ಪ್ರದರ್ಶನದ ಒಂದು ಪ್ರಮುಖ ಭಾಗವಾದವು.
ಪ್ರತಿ ವರ್ಷದ ವಾಡಿಕೆಯಂತೆ ಈ ಬಾರಿ ಮೈಸೂರು ದಸರಾದಲ್ಲಿ ಚಿತ್ರದುರ್ಗವನ್ನು ರಾಜವೀರ ಶ್ರೀಮದಕರಿನಾಯಕ ಸ್ಥಬ್ದ ಚಿತ್ರದೊಂದಿಗೆ ಪ್ರತಿನಿಧಿಸಲಾಗಿತ್ತು. ಸ್ಥಬ್ದಚಿತ್ರಕ್ಕೆ ಕಲಾವಿದರಾದ ಸಿ ಕಣ್ಮೇಶ್ ಮತ್ತು ಕಲಾವಿದರ ತಂಡ ಶ್ರಮಿಸಿತ್ತು.
ಚಿತ್ರದುರ್ಗದ ಸಂಸ್ಥಾನವನ್ನು ಆಳಿದ ಪಾಳೆಗಾರರ ಕೊನೆಯ ದೊರೆ, ನಾಯಕರಾದ ರಾಜವೀರ ಮದಕರಿನಾಯಕರು ಅಪ್ರತಿಮ ಬಲಶಾಲಿಗಳಾಗಿದ್ದು, ಚಿತ್ರದುರ್ಗ ಸಂಸ್ಥಾನದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ದಾಳಿ ಮಾಡುತ್ತಿದ್ದ ಸುತ್ತಮುತ್ತಲಿನ ಸಂಸ್ಥಾನಗಳನ್ನು ಸಮರ್ಥವಾಗಿ ಮಣಿಸಿದ್ದ ಮದಕರಿನಾಯಕರು ಮೈಸೂರು ಸಂಸ್ಥಾನ ಹೈದರಾಲಿಯ ಆಳ್ವಿಕೆಗೊಳಪಟ್ಟಾಗ ಅವರಿಗೆ ಯುದ್ಧದಲ್ಲಿ ಸಹಾಯ ಮಾಡಿ ಅನೇಕ ಸಂಸ್ಥಾನಗಳನ್ನು ಕೂಡ ಗೆಲ್ಲಿಸಿಕೊಟ್ಟಿದ್ದರು. ಚಿತ್ರದುರ್ಗದ ಪಾಳೇಗಾರರಲ್ಲಿ ಬಿಚ್ಚುಗತ್ತಿ ಭರಮಣ್ಣನಾಯಕರ ನಂತರ ಅತ್ಯಂತ ಪ್ರಖ್ಯಾತಿ ಮತ್ತು ಪ್ರಸಿದ್ಧ ನಾಯಕರಾಗಿದ್ದು, ಕೆರೆ ಕಟ್ಟೆಗಳ ನಿರ್ಮಾಣ ಸೇರಿದಂತೆ ಹಲವು ಜನಪರ ಕಾರ್ಯ, ಕಾಳಜಿಯಿಂದ ಆಡಳಿತ ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆತ: ಕಾನೂನಿನ ಶಿಷ್ಟತೆ ಕಾಪಾಡುವವರಿಂದಲೇ ಸಂವಿಧಾನದ ಕಗ್ಗೊಲೆ
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಗಾಯತ್ರಿ, ನೋಡಲ್ ಅಧಿಕಾರಿಗಳಾದ ವೆಂಕಟೇಶ್, ಆನಂದ್, ಪ್ರಕಾಶ್ ರಾಮನಾಯ್ಕ್, ಸೈಯದ್ ಖುದ್ದೂಸ್ ಮತ್ತು ಇರ್ಫಾನ್ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.





