ಶ್ರೀ ಶಿವಕುಮಾರ ಕಲಾಸಂಘ ಸಾಣೆಹಳ್ಳಿ, ದೆಹಲಿಯ ಸಂಸ್ಕೃತಿ ಸಚಿವಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಸಹಕಾರದೊಂದಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ತರಳಬಾಳು ಶಾಖಾಮಠ ಸಾಣೆಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ರಾಷ್ಟ್ರೀಯ ನಾಟಕೋತ್ಸವ -2025 ಆಯೋಜಿಸಲಾಗಿದ್ದು ಪ್ರತಿದಿನ ನಾಟಕ, ನೃತ್ಯ ರೂಪಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯ ತರಳಬಾಳು ಶಾಖಾಮಠದಲ್ಲಿ ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ 2025 ನವೆಂಬರ್ 2ರಿಂದ 7ರವರೆಗೆ ನಿರಂತರ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ 2025 ನಡೆಯಲಿದ್ದು, ಹಲವು ನಾಟಕಗಳು ಪ್ರದರ್ಶನಗೊಳ್ಳಲಿವೆ. ಪ್ರತಿದಿನ ವಿವಿಧ ಕಾರ್ಯಕ್ರಮಗಳಿದ್ದು, ಕಾರ್ಯಕ್ರಮದಲ್ಲಿ ನಾಡಿನ ಗಣ್ಯರು ಭಾಗವಹಿಸಲಿದ್ದಾರೆ. ಆರೋಗ್ಯ, ಮೌಲ್ಯಾಧಾರಿತ ಶಿಕ್ಷಣ, ಕೃಷಿ, ಲಿಂಗಾಯತ ಧರ್ಮ, ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ಉಪನ್ಯಾಸ, ಸಂವಾದ ಹಾಗೂ ಪ್ರತಿ ವರ್ಷ ಕೊಡಮಾಡುವ ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ರಾಷ್ಟ್ರೀಯ ನಾಟಕೋತ್ಸವದಲ್ಲಿ ಪಂಡಿತಾರಾಧ್ಯ ಶ್ರೀಗಳ ವಿರಚಿತ ‘ಜಂಗಮದೆಡೆಗೆ’ ಹಾಗೂ ‘ಶಿವಯೋಗಿ ಸಿದ್ದರಾಮೇಶ್ವರ’ ರವಿಕಿರಣ್ ಬಳ್ಳೆಗೆರೆ ರಚಿತ ‘ಆಳಿದ ಮಹಾಸ್ವಾಮಿಗಳು’ ಕೃಷ್ಣಮೂರ್ತಿ ಮೂಡಬಾಗಿಲುರವರ ‘ಕಳ್ಳರ ಸಂತೆ’ ಶೃತಿ ಶರಣ್ ಕುಮಾರ್ ರಚನೆಯ ‘ಭೂತಾಯಿ’ ನಾಡೋಜ ಹಂಪನಾ ರಚನೆಯ ದೇಸಿಕಾವ್ಯ ನಾಟಕ ‘ಚಾರುಲತಾ’ ಡಾ. ವಿಜಯ ಭಾಸ್ಕರ್ ರಚನೆಯ ಡಾ. ಲಕ್ಷ್ಮೀದೇವಿ ಕನ್ನಡ ಅನುವಾದದ ‘ಗಾಂಧೀ ಜಯಂತಿ’ ಸೇರಿದಂತೆ ನಾಟಕಗಳು ಪ್ರದರ್ಶನಗೊಳ್ಳಲಿದೆ.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರಾಜಕಾರಣಿಗಳಿಗೆ ಕಿವುಡುತನ ಹೆಚ್ಚು, ಕೇಳಿಸಲು ಹೋರಾಟ ಮಾಡಿ: ಬಸವಕುಮಾರ ಶ್ರೀ
ನವಂಬರ್ 7ರಂದು ಶಿವಕುಮಾರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಖ್ಯಾತ ರಂಗಭೂಮಿ ಕಲಾವಿದೆ ಉಮಾಶ್ರೀಯವರಿಗೆ ಈ ಬಾರಿಯ ಶ್ರೀ ಶಿವಕುಮಾರ ಪ್ರಶಸ್ತಿ ಘೋಷಿಸಲಾಗಿದ್ದು, ಸಮಾರೋಪ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.






