ಮಕ್ಕಳ ಪರೀಕ್ಷೆಯ ಮೌಲ್ಯಮಾಪನವು ನಪಾಸು ಮಾಡದೇ ಇರುವ ಕಾರ್ಯವಿಧಾನದಲ್ಲಿ ನಡೆಯುತ್ತದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ)ಯಿಂದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿದೆ ಎಂಬ ಕಾರಣಕ್ಕೆ 5, 8 ಮತ್ತು 9ನೇ ತರಗತಿಗಳಿಗೆ ನಡೆಯುತ್ತಿರುವ ಪರೀಕ್ಷೆಗಳನ್ನು ಬೋರ್ಡ್ ಪರೀಕ್ಷೆಗಳು ಎಂದು ಕರೆಯಲಾಗುವುದಿಲ್ಲ. ಹಾಗೆಯೇ ಇದು ಆರ್ಟಿಇ ಕಾಯ್ದೆಯ ಉಲ್ಲಂಘನೆಯಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ಶಾಲೆಯಿಂದ ಹೊರಹಾಕುವಂತಿಲ್ಲ ನೀತಿ’ (No-expulsion policy) ಅಡಿಯಲ್ಲಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೂ, ಅವರನ್ನು ನಪಾಸು ಮಾಡುವಂತಿಲ್ಲ ಎಂದು ನ್ಯಾಯಮೂರ್ತಿ ಕೆ ಸೋಮಶೇಖರ್ ಮತ್ತು ರಾಜೇಶ್ ರೈ ಕೆ ಅವರ ವಿಭಾಗೀಯ ಪೀಠವು ಶುಕ್ರವಾರ ಅಭಿಪ್ರಾಯಪಟ್ಟಿತ್ತು. ಇದೇ ನೀತಿ ಅಡಿಯಲ್ಲಿ 5, 6 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್ಎ-2 ಪರೀಕ್ಷೆಯನ್ನು ನಡೆಸಲು ಸರ್ಕಾರಕ್ಕೆ ಅನುಮತಿ ನೀಡಿದೆ.
”ಪ್ರಸ್ತುತ ಸನ್ನಿವೇಶದಲ್ಲಿ, 5ನೇ ತರಗತಿಗೆ 20 ಅಂಕಗಳು ಮತ್ತು 8ನೇ ತರಗತಿ ಅಂದರೆ ಎಸ್ಎ-2ಗೆ 30 ಅಂಕಗಳೊಂದಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ. ಈ ಎರಡೂ ಪರೀಕ್ಷೆಗಳ ಅಂತಿಮ ಫಲಿತಾಂಶವೆಂದರೆ ವಿದ್ಯಾರ್ಥಿಗಳು ಮುಂದಿನ ತರಗತಿಗಳಿಗೆ ತೇರ್ಗಡೆಯಾಗುತ್ತಾರೆ. ಎಸ್ಎ-2 ಪರೀಕ್ಷೆಯಲ್ಲಿ ವಿದ್ಯಾರ್ಥಿ ಉತ್ತೀರ್ಣರಾಗಿದ್ದರೂ ಅಥವಾ ಅನುತ್ತೀರ್ಣರಾಗಿದ್ದರೂ ಮುಂದಿನ ತರಗತಿಗೆ ಮುಂದುವರೆಯಬೇಕು” ಎಂದು ಪೀಠ ಹೇಳಿದೆ.
“ಕೆಎಸ್ಇಎಬಿಯಿಂದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂಬ ಕಾರಣಕ್ಕಾಗಿ ಈಗ ನಿಗದಿಪಡಿಸಲಾದ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆ ಎಂದು ಕರೆಯಲಾಗುವುದಿಲ್ಲ. ಇದಲ್ಲದೆ, ‘ಶಾಲೆಯಿಂದ ಹೊರಹಾಕುವಂತಿಲ್ಲ ನೀತಿ’ ನಿಬಂಧನೆಗಳೊಂದಿಗೆ ಪರೀಕ್ಷೆಗಳನ್ನು ನಡೆಸಿದಾಗಲೂ ಅದು ಬೋರ್ಡ್ ಪರೀಕ್ಷೆ ಎಂದು ಪರಿಗಣನೆಗೆ ಬರುವುದಿಲ್ಲ. ಇದು ಆರ್ಟಿಇ ಕಾಯಿದೆ-2009 ರ ನಿಬಂಧನೆ ಉಲ್ಲಂಘನೆಯಾಗುವುದಿಲ್ಲ” ಎಂದು ನ್ಯಾಯಾಲಯ ಭಾವಿಸಿದೆ.
”ಬೋರ್ಡ್ ಪರೀಕ್ಷೆಗಳನ್ನು ನಡೆಸುವುದು ಮಕ್ಕಳ ಯೋಗಕ್ಷೇಮ ಮತ್ತು ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದು ಪ್ರತಿವಾದಿಗಳು (ಖಾಸಗಿ ಶಾಲೆಗಳು) ಮಂಡಿಸಿದ ವಾದಗಳಿಗೆ ನಮ್ಮ ಸಹಮತವಿಲ್ಲ. ಈ ವಿಧಾನವನ್ನು ಅಳವಡಿಸಿಕೊಳ್ಳುವುದರಿಂದ ಮುಂದಿನ ವರ್ಷಗಳಲ್ಲಿ ಮುಂಬರುವ ಬೋರ್ಡ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬಹುದು ಎಂಬುದು ನಮ್ಮ ಗ್ರಹಿಕೆಯಾಗಿದೆ” ಎಂದು ನ್ಯಾಯಾಲಯ ಹೇಳಿದೆ.
”ಆದರೆ, ಮೌಲ್ಯಮಾಪನ ವಿಧಾನದ ಅಳವಡಿಕೆಯು ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ. ನಡೆಯುತ್ತಿರುವ ಪರೀಕ್ಷೆಗಳು ಆರ್ಟಿಇ ಕಾಯಿದೆಯ ಸೆಕ್ಷನ್ 16ರ ನಿಬಂಧನೆಗಳ ಅಡಿಯಲ್ಲಿ ಮಾಡಲಾದ ಮೌಲ್ಯಮಾಪನಗಳಾಗಿ ಮಾತ್ರ ಕಂಡುಬರುತ್ತವೆ. ಅವುಗಳನ್ನು ನಿರ್ವಹಿಸಲು ಕೆಎಸ್ಇಎಬಿಅನ್ನು ನೇಮಿಸಲು ರಾಜ್ಯಕ್ಕೆ ಅಧಿಕಾರವಿದೆ” ಎಂದು ಅದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಮುಂದಿನ ಎರಡು ವಾರಗಳ ಕಾಲ ಬಿಸಿಲು – ಒಣ ಹವೆ; ಹವಾಮಾನ ಇಲಾಖೆ ವರದಿ
ಇದಲ್ಲದೆ, “ಬೋರ್ಡ್ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಾಹ್ಯ ಅಧ್ಯಾಪಕರು ನಡೆಸುತ್ತಾರೆ. ಆದರೆ, ಪ್ರಸ್ತುತ ಮೌಲ್ಯಮಾಪನ ಪರೀಕ್ಷೆಯಲ್ಲಿ ಮೌಲ್ಯಮಾಪನವನ್ನು ಆಂತರಿಕ ಅಧ್ಯಾಪಕರು ನಡೆಸುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.




