ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಮಂಗಳವಾರ ತಡರಾತ್ರಿ ಧಾರವಾಡದ ನಿರ್ಮಲಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಧಾರವಾಡದ ಸಪ್ತಾಪೂರದ ದುರ್ಗಾ ಕಾಲೊನಿಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಿ.ಕೆ.ಲೋಣಿಯಲ್ಲಿ 1928 ಏಪ್ರಿಲ್ 2ರಂದು ಗುರುಲಿಂಗ ಕಾಪಸೆ ಜನಿಸಿದ್ದರು. ಅವರಿಗೆ 96 ವಯಸ್ಸಾಗಿತ್ತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ನಿವೃತ್ತ ಹೊಂದಿದ್ದರು.
ಕಾಪಸೆ ಅವರ ಸಾಹಿತ್ಯ ಸಾಧನೆಗೆ ವರದರಾಜ ಆದ್ಯ ಪ್ರಶಸ್ತಿ, ಆನಂದಕಂದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಒಲಿದುಬಂದಿವೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
‘ಅಕ್ಕಮಹಾದೇವಿ’, ‘ಅರವಿಂದರು’, ‘ಹಲಸಂಗಿ ಗೆಳೆಯರು’, ’ಬಸವೇಶ್ವರ’, ಶಾಲ್ಮಲೆಯಿಂದ ಗೋದಾವರಿಯವರೆಗೆ (ಪ್ರವಾಸ ಕಥನ) ಮೊದಲಾದ ಕೃತಿಗಳನ್ನು ರಚಿಸಿದ್ಧಾರೆ.
ಗುರುಲಿಂಗ ಕಾಪಸೆ ಅವರ ಇಚ್ಛೆಯಂತೆ ಡಾ. ರಾಮಣ್ಣವರ ಚಾರಿಟಬಲ್ ಟ್ರಸ್ಟ್ ಬೈಲಹೊಂಗಲದ ಮುಖಾಂತರ ಬೆಳಗಾವಿಯ ಕೆಎಲ್ಇ ಆಯುರ್ವೇದ ಮಹಾವಿದ್ಯಾಲಯಕ್ಕೆ ದೇಹದಾನ ಮಾಡಲಾಗಿದೆ.





