ಸುದೀಪ್ ಹುಬ್ಬಳ್ಳಿಯಲ್ಲಿ ನಿಂತು, ಪ್ರಚೋದನಾತ್ಮಕ ಹೇಳಿಕೆ ನೀಡಿರುವುದನ್ನು ನೋಡಿದರೆ, ಇದು ಕೂಡ ಮುಂಬರುವ 'ಮಾರ್ಕ್' ಚಿತ್ರದ ಪ್ರಮೋಷನ್ನ ಭಾಗವೇ ಆಗಿರಬಹುದೆಂಬ ಅನುಮಾನವಿದೆ.
”ಹುಬ್ಬಳ್ಳಿಯಲ್ಲಿ ನಿಂತು ಮಾತನಾಡಿದರೆ ಇಡೀ ಕರ್ನಾಟಕಕ್ಕೆ ತಿಳಿಯುತ್ತದೆ. ಎಲ್ಲಿ, ಯಾರಿಗೆ ಹೇಗೆ ತಟ್ಟಬೇಕು ಎನ್ನುವುದು ಭರ್ಜರಿಯಾಗಿ ತಟ್ಟುತ್ತದೆ. ಡಿ. 25ರಂದು ಚಿತ್ರ ಮಂದಿರದ ಒಳಗೆ ‘ಮಾರ್ಕ್’ ಬಿಡುಗಡೆಯಾದರೆ, ಹೊರಗಡೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿ ನಿಂತಿರುತ್ತದೆ. ನಾವು ಯುದ್ಧಕ್ಕೂ ಸಿದ್ಧ, ಮಾತಿಗೂ ಬದ್ಧ” -ಇದು ಕನ್ನಡ ಚಿತ್ರರಂಗದ ಹಿರಿಯ ನಟ ಸುದೀಪ್ ಡಿ.20ರಂದು ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ, ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದು.
ನಟ ಸುದೀಪ್ ಅವರ ಹೊಸ ಚಿತ್ರ ‘ಮಾರ್ಕ್’ ಇದೇ ಡಿಸೆಂಬರ್ 25ಕ್ಕೆ ಬಿಡುಗಡೆಯಾಗುತ್ತಿದೆ. ಬಿಡುಗಡೆಗೆ ಮುಂಚೆಯೇ ಹಾಡುಗಳು ಹಾಗೂ ಟೀಸರ್ ಬಿಡುಗಡೆ ಮಾಡಿ, ಅದನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹಾಗೆಯೇ ಸುದ್ದಿ ಮಾಧ್ಯಮಗಳಿಗೆ ಪ್ಯಾಕೇಜ್ ನೀಡಿ, ಜಾಹೀರಾತು, ಸಂದರ್ಶನಗಳ ಮೂಲಕ ಚಿತ್ರ ಸುದ್ದಿಯಲ್ಲಿ, ಪ್ರಚಾರದಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತದೆ. ಚಿತ್ರದ ನಿರ್ಮಾಣಕ್ಕಿಂತ ಹೆಚ್ಚಾಗಿ ಪ್ರಮೋಷನ್ಗಾಗಿ ತಲೆ ಕೆಡಿಸಿಕೊಳ್ಳಲಾಗುತ್ತದೆ. ಅದಕ್ಕಾಗಿ ಕೋಟ್ಯಂತರ ರೂ.ಗಳನ್ನು ಸುರಿಯಲಾಗುತ್ತದೆ.
ಇದನ್ನು ಓದಿದ್ದೀರಾ?: ಮಲಯಾಳಂ ಚಿತ್ರರಂಗದ ಹೆಮ್ಮೆ ಶ್ರೀನಿವಾಸನ್
ಇದೆಲ್ಲವೂ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಗಲಿ, ಬಿಡುಗಡೆಯಾದ ತಕ್ಷಣ ಥಿಯೇಟರ್ ತುಂಬಲಿ, ಚಿತ್ರ ಸೂಪರ್ ಹಿಟ್ ಆಗಲಿ ಎಂಬ ಕಾರಣಕ್ಕಾಗಿ ಮಾಡುವ ಕಸರತ್ತು. ಒಂದು ಚಿತ್ರದ ವ್ಯಾಪಾರದ ದೃಷ್ಟಿಯಿಂದ ಇದೆಲ್ಲವೂ ಈ ಕಾಲದಲ್ಲಿ ಚಾಲ್ತಿಯಲ್ಲಿರುವಂತಹ ಕ್ರಮಗಳು. ಹೊಸದೇನೂ ಅಲ್ಲ.

ಹೊಸದು ಎಂದರೆ, ನಟ ಸುದೀಪ್ ಅಭಿಮಾನಿಗಳನ್ನು ಉದ್ದೇಶಿಸಿ ಯುದ್ಧದ ಮಾತನ್ನಾಡಿರುವುದು. ”ಮೌನವಾಗಿರುವುದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ, ನಿಮಗೋಸ್ಕರ, ಎಲ್ಲವನ್ನೂ ಸಹಿಸಿಕೊಂಡು ಇದ್ದೇನೆ. ನೀವೂ ಸಹಿಸಿಕೊಳ್ಳುತ್ತ ಇದ್ದೀರಿ. ಈಗ ಹೇಳುತ್ತಿದ್ದೇನೆ, ಸಹಿಸಿಕೊಳ್ಳುವವರೆಗೂ ತಡೆಯಿರಿ, ಮಾತನಾಡುವ ಸಮಯಕ್ಕೆ ಮಾತನಾಡಿ” ಎಂದು ಪ್ರಚೋದಿಸಿರುವುದು.
ಇದು ಒಬ್ಬ ಸ್ಟಾರ್ ನಟನಾಗಿ, ಹಿರಿಯ, ತಿಳಿವಳಿಕೆ ಇರುವ ವ್ಯಕ್ತಿಯಾಗಿ ಆಡುವ ಮಾತುಗಳಲ್ಲ. ಸುದೀಪ್ ರಾಜರಲ್ಲ. ಮತ್ತೊಬ್ಬ ರಾಜನ ಮೇಲೆ ದಂಡೆತ್ತಿ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿಲ್ಲ. ಅಷ್ಟಕ್ಕೂ ಇದು ರಾಜ-ಮಹಾರಾಜರ ಕಾಲವಲ್ಲ. ಅವರು ಯುದ್ಧ ಮಾಡಲೇಬೇಕು ಎಂದರೆ, ತನ್ನ ಎದುರಾಳಿ ರಾಜನೊಂದಿಗೆ ಮುಖಾಮುಖಿಯಾಗಲಿ. ಅದಕ್ಕೆ ಕಾಲಾಳುಗಳನ್ನು ಬಲಿ ಕೊಡುವುದೇಕೆ? ಯಾರದೋ ಲಾಭಕ್ಕೆ, ಪ್ರತಿಷ್ಠೆಗೆ, ವೈಯಕ್ತಿಕ ದ್ವೇಷಾಸೂಯೆಗೆ ಅಭಿಮಾನಿಗಳು ಕಾಲಾಳುಗಳಾಗಿ ಕಾದಾಟಕ್ಕಿಳಿಯುವುದು ಎಷ್ಟು ಸರಿ?
ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಒಂದು ವಾರಕ್ಕೆ 5ರಿಂದ 9 ಚಿತ್ರಗಳು ಬಿಡುಗಡೆಯಾಗುತ್ತವೆ. ಬಿಡುಗಡೆಯಾದ ಚಿತ್ರಗಳೆಲ್ಲ ನಿಲ್ಲುವುದಿಲ್ಲ, ಓಡುವುದಿಲ್ಲ, ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದೂ ಇಲ್ಲ. ಅಕಸ್ಮಾತ್ ಚೆನ್ನಾಗಿದ್ದರೆ ನಿಲ್ಲುತ್ತದೆ, ನೋಡಿಸಿಕೊಳ್ಳುತ್ತದೆ, ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ. ಕನ್ನಡ ಚಿತ್ರರಂಗ ಆರಂಭವಾದ 1934ರಿಂದ ಹಿಡಿದು ಇಲ್ಲಿಯವರೆಗೆ, ಇದೇ ರೀತಿ ಸಾವಿರಾರು ಚಿತ್ರಗಳು ಬಂದುಹೋಗಿವೆ. ಹಾಗೆಯೇ ನಟ-ನಟಿಯರೂ ಬಂದುಹೋಗಿದ್ದಾರೆ. ಅವರಾರಿಗೂ ಇರದ ಅಭಿಮಾನಿಗಳು ಇವತ್ತಿನ ನಟರಿಗೆ ಇದ್ದಾರ? ಅಥವಾ ನಟರ ವೈಯಕ್ತಿಕ ಪ್ರತಿಷ್ಠೆ ಮುಖ್ಯವಾಗಿದೆಯೇ?
ಕನ್ನಡ ಚಿತ್ರರಂಗ ಕಂಡ ಅಪರೂಪದ ನಟರಲ್ಲಿ ಸುದೀಪ್ ಕೂಡ ಒಬ್ಬರು. 52ರ ಹರೆಯದ ಸುದೀಪ್, 1997ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರೂ, ನಟನಾಗಿ ನೆಲೆಯೂರಿದ್ದು ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಸ್ಪರ್ಶ’ ಚಿತ್ರದ ಮೂಲಕ. ಇಂದು ಬಹುಬೇಡಿಕೆಯ ಬಹುಭಾಷಾ ನಟರಾಗಿ ಬೆಳೆದುನಿಂತಿದ್ದಾರೆ. ತಮ್ಮ ಚಿತ್ರಗಳು ಮತ್ತು ಪಾತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಟರಷ್ಟೆ ಅಲ್ಲದೆ, ನಿರ್ಮಾಪಕ, ನಿರ್ದೇಶಕ, ಕತೆಗಾರ, ಚಿತ್ರಕತೆ ರಚನೆಕಾರ, ಹಿನ್ನೆಲೆಗಾಯಕ, ನಿರೂಪಕರಾಗಿ ಮನೆಮಾತಾಗಿದ್ದಾರೆ. ವಿಭಿನ್ನ ಆಂಗಿಕಾಭಿನಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರಿಂದ ಕಿಚ್ಚ, ಅಭಿನಯ ಚಕ್ರವರ್ತಿ, ಬಾದ್ ಶಾಹ್, ಅಭಿಮಾನಿಗಳ ಅಭಿಮಾನಿಗಳೆಂಬ ಬಿರುದು ಪಡೆದಿದ್ದಾರೆ. ಕನ್ನಡ ಚಿತ್ರಗಳಷ್ಟೇ ಅಲ್ಲದೆ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳ ಚಿತ್ರಗಳಲ್ಲೂ ನಟಿಸಿ, ಶಹಬ್ಬಾಸ್ಗಿರಿ ಪಡೆದಿದ್ದಾರೆ.
ಇಂತಹ ಪ್ರಬುದ್ಧ ನಟ ಸುದೀಪ್, ಕೇವಲ ಒಂದು ಚಿತ್ರದ ಪ್ರಮೋಷನ್ಗಾಗಿ ಯುದ್ಧಕ್ಕೆ ಸಿದ್ಧ ಎಂದಿರುವುದು, ಅದು ಅವರ ವಿರೋಧಿಗಳಿಗೆ ಕೊಟ್ಟ ಉತ್ತರ ಎಂದು ಮಾಧ್ಯಮಗಳಲ್ಲಿ ಬಿಂಬಿಸಲ್ಪಟ್ಟಿರುವುದು, ಅದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿರುವುದು, ಹೊಸಗಾಲದ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ವಾದ-ವಿವಾದ ಸೃಷ್ಟಿಸಿರುವುದು, ಪದಬಳಕೆ ಬಗ್ಗೆ ಜನರು ಅಸಮಾಧಾನ ಹೊರ ಹಾಕಿರುವುದು- ಕನ್ನಡಕ್ಕೆ ಒಗ್ಗದ ಹೊಸ ಟ್ರೆಂಡ್ವೊಂದನ್ನು ಹುಟ್ಟುಹಾಕಿದೆ. ಕನ್ನಡದ ಶಾಂತ ವಾತಾವರಣವನ್ನು ಕಲುಷಿತಗೊಳಿಸಿದೆ.
ಆತ್ಮೀಯ ದೀಪು ಎನ್ನುವವರ ಸೋಷಿಯಲ್ ಮೀಡಿಯಾ ವಾಲ್ನಲ್ಲಿ ‘ಯಾವ್ ಯುದ್ಧ ಸರ್? ನಾವ್ ನಿಮ್ಮುನ್ನ ನಟರು ಅನ್ಕಂಡಿದ್ವಿ… ನೀವು ಯೋಧರಾ? ನಿಮ್ಮ ಘನತೆಗೆ ತಕ್ಕ ಮಾತಲ್ಲ ಸಾರ್ ಇದೆಲ್ಲ. ನಿಮ್ಮ ಮೇಲೆ ತುಂಬಾ ಗೌರವ ಇದೆ… ಫ್ಯಾನ್ಸ್ ಮಧ್ಯೆ ಬೆಂಕಿಹಚ್ಚುವ ಕೆಲಸ ಮಾಡಬೇಡಿ’ ಎಂದಿದ್ದಾರೆ. ಹಾಗೆಯೇ ಮತ್ತೊಬ್ಬ ಅಭಿಮಾನಿ, ಶ್ರೀಕಾಂತ್ ಶಿವಮೊಗ್ಗ ಎಂಬುವವರು, ‘ಏನ್ ದೊಡ್ ಸೈನ್ಯ ಕಟ್ಟುಬಿಟ್ಟಿದಾರೆ ಇವರೆಲ್ಲ… ಸಮಾಜನ ಏನ್ ಮಾಡಕ್ ಹೊರಟಿದಾರೊ ಇವರೆಲ್ಲ ತಮ್ಮ ಸ್ವಾರ್ಥಕ್ಕೆ…’ ಎಂದು ನೇರವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಡೆದಿರುವ ಅಭಿಮಾನಿಗಳ ನಡುವಿನ ಯುದ್ಧಕ್ಕೆ ಪ್ರತಿಕ್ರಿಯಿಸಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರು, ‘ದರ್ಶನ್ ಜೈಲಿನಲ್ಲಿದ್ದಾಗ ಕೆಲವರು ಅವರ ಬಗ್ಗೆ, ಅವರ ಫ್ಯಾನ್ಸ್ ಬಗ್ಗೆ, ಹೊರಗಡೆ ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. ಆದರೆ ದರ್ಶನ್ ಇದ್ದಾಗ ಮಾತ್ರ ಅವರು ಗೊತ್ತೇ ಆಗದಂತೆ ಇರುತ್ತಾರೆ. ದರ್ಶನ್ ಟೀಕಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ, ದರ್ಶನ್ ಅಭಿಮಾನಿಗಳಾದ ನೀವೂ ತಲೆಕೆಡಿಸಿಕೊಳ್ಳಬೇಡಿ’ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿರುವ ನಟ ಸುದೀಪ್, ದರ್ಶನ್ ಅವರ ಹೆಸರು ಹೇಳಿಲ್ಲ, ಅವರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿಲ್ಲ. ಅಥವಾ ಇದೇ ಡಿ. 25ರಂದು ಬಿಡುಗಡೆಯಾಗುತ್ತಿರುವ ಮತ್ತೊಂದು ಮಲ್ಟಿ ಸ್ಟಾರರ್ ಸಿನೆಮಾ ’45’ ಕುರಿತು ಹೇಳಿದ್ದ, ಗೊತ್ತಿಲ್ಲ. ಆದರೆ ಅದು ದೃಶ್ಯ ಮಾಧ್ಯಮಗಳಿಗಾಗಿಯೇ ಹೇಳಿದಂತಿದೆ. ಅವರು ಪರ-ವಿರೋಧಿಗಳ ಬಾಯಿಗೆ ಮೈಕ್ ಹಿಡಿದು, ವಿವಾದವನ್ನಾಗಿಸಿದ್ದಾರೆ. ಸುದ್ದಿ ಮಾಧ್ಯಮಗಳ ಷಡ್ಯಂತ್ರಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಬಲಿಯಾಗಿ, ಪ್ರತಿಕ್ರಿಯಿಸಿದ್ದಾರೆ. ರಾಡಿ ಎಬ್ಬಿಸಿದ್ದಾರೆ. ನಟರ ಅಭಿಮಾನಿಗಳು ಕತ್ತಿ ಹಿರಿದು ಸೋಷಿಯಲ್ ಮೀಡಿಯಾದಲ್ಲಿ ‘ಯುದ್ಧ’ ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ?: ನೀನಾರಿಗಾದೆಯೋ ಎಲೈ ಮಹಾ ಮಾನವ? ಮೋದಿ ವಿರುದ್ಧ ನಟ ಕಿಶೋರ್ ಕಿಡಿ
ಇದು ನಟ ಸುದೀಪ್ ಅವರಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಇವತ್ತಿನ ದೃಶ್ಯ ಮಾಧ್ಯಮಗಳು ಹೇಗಿವೆ, ಅವು ಎಂತಹ ಸುದ್ದಿಗಳನ್ನು ಹೆಕ್ಕುತ್ತವೆ, ಏನು ಮಾಡುತ್ತವೆ, ಅದರ ಪರಿಣಾಮವೇನಾಗುತ್ತದೆ ಎಂಬುದನ್ನು ತಿಳಿಯದವರಲ್ಲ. ಆದರೂ, ಹುಬ್ಬಳ್ಳಿಯಲ್ಲಿ ನಿಂತು, ಪ್ರಚೋದನಾತ್ಮಕ ಹೇಳಿಕೆ ನೀಡಿರುವುದನ್ನು ನೋಡಿದರೆ, ಇದು ಕೂಡ ಮುಂಬರುವ ‘ಮಾರ್ಕ್’ ಚಿತ್ರದ ಪ್ರಮೋಷನ್ನ ಭಾಗವೇ ಆಗಿರಬಹುದೆಂಬ ಅನುಮಾನವಿದೆ. ಪ್ಯಾಕೇಜ್ ಪಡೆದ ಮಾಧ್ಯಮಗಳು, ಆ ಬೆಂಕಿಗೆ ತುಪ್ಪ ಸುರಿದಿವೆ, ಭುಗಿಲೆಬ್ಬಿಸಿವೆ, ಪ್ರಚಾರದಲ್ಲಿಟ್ಟಿವೆ.
ಇದಾವುದನ್ನೂ ಅರಿಯದ ಕನ್ನಡನಾಡಿನ ಅಮಾಯಕ ಜನ, ಈ ಹೊಸ ಬೆಳವಣಿಗೆಯನ್ನು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಾ ಕೂತಿದ್ದಾರೆ.

ಲೇಖಕ, ಪತ್ರಕರ್ತ




