ಕೋಗಿಲು ಬಡಾವಣೆಯಲ್ಲಿ ನೆಲಸಮಗೊಂಡ ಮನೆಗಳ ಸುಮಾರು 15 ಕುಟುಂಬಗಳು ಗಂಜಿ ಕೇಂದ್ರಕ್ಕೆ (ಪುನರ್ವಸತಿ ಕೇಂದ್ರ) ಬಂದು, ಸೌಲಭ್ಯಗಳನ್ನು ಪಡೆದುಕೊಂಡು, ಆಹಾರವನ್ನು ಪಡೆದುಕೊಂಡ ನಂತರ ಅತಿಕ್ರಮಣಗೊಂಡ ಸ್ಥಳಗಳಿಗೆ ಮರಳಿದ್ದಾರೆ ಎಂದು ರಾಜ್ಯ ಸರ್ಕಾರ ಗುರುವಾರ(ಜ.29) ಕರ್ನಾಟಕ ಹೈಕೋರ್ಟ್ಗೆ ತಿಳಿಸಿದೆ.
ಸುಮಾರು 160ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿದ್ದ ಕಾರಣಕ್ಕೆ, ಅಲ್ಲಿನ ಜನರಿಗೆ ಹತ್ತಿರದಲ್ಲಿಯೇ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿರುವುದು ವಾಸ್ತವ ಸ್ಥಿತಿಗೆ ದೂರವಾದ ಮಾತಾಗಿದೆ. ಎಲ್ಲಾ ಗಂಜಿ ಕೇಂದ್ರಗಳು ಮುಚ್ಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಡಿ.20, 2025 ರಂದು 14 ಎಕರೆ 36 ಗುಂಟೆ ವಿಸ್ತೀರ್ಣದ ಪಾಲಿಕೆ ಜಾಗದಲ್ಲಿ ಆಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆಂದು ಆರೋಪಿಸಿ ಏಕಾಏಕಿ ನೆಲಸಮಗೊಳಿಸಿದ್ದರು.
ಸರ್ಕಾರ ಅನ್ಯಾಯವೆಸಗಿದೆ ಎಂದು ಆರೋಪಿಸಿ, ಅಲ್ಲಿ ವಾಸವಿದ್ದ ಜೈಬಾ ತಬಸ್ಸುಮ್, ರೆಹಾನಾ ಮತ್ತು ಅರೀಫಾ ಬೇಗಂ ಅವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ(ಪಿಐಎಲ್) ಸಲ್ಲಿಸಿದ್ದರು. ಇಲ್ಲಿಯ ತನಕ ಮೂರು ಭಾರಿ ಹೈಕೋರ್ಟ್ನ ನ್ಯಾ. ವಿಭು ಬಕ್ರು ಮತ್ತು ನ್ಯಾ. ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠದೆದುರು ವಿಚಾರಣೆಗೆ ಬಂದಿದೆ.
ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ʼಕೋಗಿಲು ಬಡಾವಣೆಯವರಿಗೆ ನಾಲ್ಕು ಗಂಜಿ ಕೇಂದ್ರಗಳನ್ನು ತೆರೆದು, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಜೊತೆಗೆ ಗರ್ಭಿಣಿ ಮಹಿಳೆಯರಿಗೆ ವೈದ್ಯರ ಸೌಲಭ್ಯವನ್ನು ಕಲ್ಪಿಸಲಾಗಿದೆʼ ಎಂದು ಹೇಳಿದ್ದಾರೆ.
ಆದರೆ, ಮನೆ ನೆಲಸಮಗೊಳಿಸಿ ತಿಂಗಳು ಕಳೆದರೂ ಸಂತ್ರಸ್ತರ ಪರಿಸ್ಥಿತಿ ಬದಲಾಗಿಲ್ಲ. ಇಷ್ಟು ದಿನದವರೆಗೂ ಕೆಲವೊಂದು ಸಂಘ-ಸಂಸ್ಥೆಗಳು, ಎನ್ಜಿಒಗಳು ಊಟದ ವ್ಯವಸ್ಥೆಯನ್ನು ಮಾಡಿವೆ. ಆದರೆ ಸರ್ಕಾರ ಸಂತ್ರಸ್ತರ ವಿಚಾರದಲ್ಲಿ ಹೈಕೋರ್ಟ್ಗೆ ಸುಳ್ಳು ಹೇಳಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಕೋಗಿಲು ಬಡಾವಣೆಯಿಂದ 0.5 ಕಿ.ಮೀ ನಿಂದ 5 ಕಿ.ಮೀ ವ್ಯಾಪ್ತಿಯೊಳಗಿನ ನಾಲ್ಕು ಪುನರ್ವಸತಿ ಕೇಂದ್ರಗಳಲ್ಲಿ ಆಹಾರ, ಆಶ್ರಯ, ವೈದ್ಯಕೀಯ ಸೌಲಭ್ಯಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಸರ್ಕಾರ ಮತ್ತಷ್ಟು ವಾದಿಸಿದೆ. ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆಗಳು ಮತ್ತು ವಿನಂತಿಗಳ ಹೊರತಾಗಿಯೂ, ಜನರು ಫಕೀರ್ ಕಾಲೋನಿಯ ಜಾಗ ಬಿಟ್ಟು ಸ್ಥಳಾಂತರಗೊಳ್ಳಲು ನಿರಾಕರಿಸಿ, ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದಿದ್ದಾರೆ.
ವಾಸ್ಥವ ಸ್ಥಿತಿಯೇ ಬೇರೆ
ವಾಸ್ತವ ಸ್ಥಿತಿಯ ಬಗ್ಗೆ ʼಈದಿನʼ ರಿಯಾಲಿಟಿ ಚೆಕ್ ಮಾಡಿದಾಗ ಪರಿಸ್ಥಿತಿ ಬೇರೆಯೇ ವಿಚಾರವನ್ನು ಹೇಳುತ್ತಿತ್ತು. ಮನೆ ನೆಲಸಮಗೊಳಿಸಿದ ಫಕೀರ್ ಕಾಲೋನಿ ಮತ್ತು ವಸೀಂ ಲೇಔಟ್ನಿಂದ 5ಕಿ.ಮೀ ಸುತ್ತಮುತ್ತಲಿನ ಪುನರ್ವಸತಿ ಕೇಂದ್ರಗಳಲ್ಲಿ ಎಲ್ಲವೂ ಬೀಗ ಹಾಕಿದ ಸ್ಥಿತಿಯಲ್ಲಿದ್ದವು.
ಆರ್.ಕೆ.ಹೆಗಡೆ ನಗರದಲ್ಲಿರುವ ಅಂಬೇಡ್ಕರ್ ಸಮುದಾಯ ಭವನ, ಕುವೆಂಪು ನಗರದಲ್ಲಿರುವ ಬಿಬಿಎಂಪಿ ಸಮುದಾಯ ಭವನ, ಕೋಗಿಲು ಬಡಾವಣೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನ ಹಾಗೂ ಯಲಹಂಕದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಸಂತ್ರಸ್ತರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲು ತೆರೆಯಲಾಗಿದೆ.

ಆದರೆ, ʼಈ ಸಮುದಾಯ ಭವನಗಳ ಬಳಿ ಹೋಗಿ ಊಟ ಕೇಳಿದರೆ, ಇಂದಿರಾ ಕ್ಯಾಂಟಿನ್ಗೆ ಹೋಗಿʼ ಎಂದು ದರ್ಪದಿಂದ ಅಲ್ಲಿರುವ ಸಿಬ್ಬಂದಿಗಳು ಗದರಿಸುತ್ತಾರೆ ಎಂದು ಸಂತ್ರಸ್ತರು ಹೇಳಿದರು.
ಸಮುದಾಯ ಭವನಗಳ ಎದುರು “ಕೋಗಿಲು ಬಡಾವಣೆಯ ಬಂಡೆ ಕ್ವಾರಿಯ ಸಂತ್ರಸ್ತರಿಗೆ ಆಶ್ರಯ ತಾಣ ಸಮುದಾಯ ಭವನ” ಎಂದು ಬ್ಯಾನರ್ಗಳನ್ನು ಹಾಕಲಾಗಿದೆ. ಈ ಬ್ಯಾನರ್ನಲ್ಲಿ “990153319” ಎಂಬ ಒಂಬತ್ತು ಸಂಖ್ಯೆಯ ಮೊಬೈಲ್ ನಂಬರ್ ಹಾಕಲಾಗಿದೆ. ಮೇಲ್ನೊಟಕ್ಕೆ ಇದು ತಪ್ಪು ಸಂಖ್ಯೆ ಎಂದು ಗೋಚರಿಸುತ್ತಿದೆ.

ಸರ್ಕಾರ ಕೋಗಿಲು ಬಡಾವಣೆಯ ಜನರ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಅನ್ನವಿಲ್ಲದೆ, ಶೌಚಾಲಯವಿಲ್ಲದೆ 160ಕ್ಕೂ ಹೆಚ್ಚಿನ ಕುಟುಂಬಗಳು ಪ್ರತಿದಿನವು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.





