ಗಣರಾಜ್ಯೋತ್ಸವದ ಭಾಷಣದ ವಿಚಾರವಾಗಿ ಸಚಿವ ಎಚ್ ಕೆ ಪಾಟೀಲ್ ಹಾಗೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರು ಅವರ ನಡುವೆ ವಾಗ್ವಾದ ನಡೆದ ಘಟನೆ ಗದಗದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಅವರು ಗಣರಾಜ್ಯೋತ್ಸವದ ಭಾಷಣ ಮಾಡುತ್ತಿದ್ದಾಗ ” ರಾಜ್ಯಪಾಲರಿಂದ ಹಕ್ಕು ಕಸಿತವಾಗಿದೆ ಹಾಗೂ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಖಾತರಿ ಕಾನೂನನ್ನು ನಿರಸನಗೊಳಿಸಿದೆ” ಎಂದು ಉಲ್ಲೇಖಿಸಿದರು.
ಸಚಿವರ ಈ ಹೇಳಿಕೆಗೆ ವೇದಿಕೆಯಲ್ಲಿದ್ದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ, ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಯಾಯಿತು.
ನೇರವಾಗಿ ಡಯಾಸ್ ಬಳಿ ತೆರಳಿ ಸಚಿವರ ಮಾತನ್ನು ತಡೆದ ಸಂಕನೂರು, ‘ಇದು ರಾಜಕೀಯ ವೇದಿಕೆಯಲ್ಲ’ ಎಂದು ಕಿಡಿಕಾರಿದರು. ಆದರೆ, ಸಚಿವರಾದ ಎಚ್ ಕೆ ಪಾಟೀಲ್ ತಮ್ಮ ಭಾಷಣ ಮುಂದುವರಿಸಿದ್ದರಿಂದ ಕುಪಿತಗೊಂಡ ಸಂಕನೂರು ಕಾರ್ಯಕ್ರಮದ ವೇದಿಕೆಯಿಂದ ಇಳಿದು, ಹೊರ ನಡೆದರು.





